ಘಟನೆಗೆ ಮೈಸೂರು ಡಿಸಿಯೇ ನೇರ ಕಾರಣ; ಚಾಮರಾಜನಗರ ಡಿಸಿಯಿಂದ ಆರೋಪ

|

Updated on: May 04, 2021 | 4:49 PM

Chamarajanagar: ಪ್ರತಿನಿತ್ಯ ನಮ್ಮ ವಾಹನ ಮೈಸೂರಿಗೆ ಹೋಗಿ ಗಂಟೆಗಟ್ಟಲೆ ಕಾಯೋದು, ಅವರು ಕೊಟ್ಟಾಗ ತೆಗೆದುಕೊಂಡು ಬರುವುದು ಆಗುತಿತ್ತು. ಅವರು ಅನುಮತಿ ನೀಡಿದರೆ ಹೇಳಿದರೆ ನಮ್ಮ ಜಿಲ್ಲೆಗೆ ಕಳುಹಿಸುವುದು ಯಾವ ನ್ಯಾಯ ? ಇವರಿಗೆ ಈ ಅಧಿಕಾರ ಕೊಟ್ಟವರು ಯಾರು? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಘಟನೆಗೆ ಮೈಸೂರು ಡಿಸಿಯೇ ನೇರ ಕಾರಣ; ಚಾಮರಾಜನಗರ ಡಿಸಿಯಿಂದ ಆರೋಪ
ಚಾಮರಾಜನಗರ ಡಿಸಿ ಎಂ.ಆರ್.ರವಿ ಮತ್ತು ಮೈಸೂರು ಡಿಸಿ ರೋಹಿಣಿ ಸಿಂಧೂರಿ
Follow us on

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳ ಸಾವು ಪ್ರಕರಣಕ್ಕೆ ಮೈಸೂರು ಡಿಸಿ ಅವರೇ ನೇರ ಕಾರಣ ಎಂದು ಚಾಮರಾಜನಗರ ಡಿಸಿ ಎಂ.ಆರ್.ರವಿ ಆರೋಪಿಸಿದ್ದಾರೆ. ಮೈಸೂರು ಡಿಸಿಯಿಂದಲೇ ನಮಗೆ ಪೂರೈಕೆಯಾಗುವ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಆಕ್ಸಿಜನ್‌ ಪೂರೈಕೆ ಆಗಿದ್ದರೆ ಅಮೂಲ್ಯ ಜೀವ ಉಳಿಸಬಹುದಿತ್ತು. ರೋಹಿಣಿ ಸಿಂಧೂರಿಯವರೇ ನೀವು ಮೈಸೂರಿಗೆ ಡಿಸಿಯಾಗಿ ಚಾಮರಾಜನಗರ ಆಡಳಿತದಲ್ಲಿ ನೀವು ಮೂಗು ತೂರಿಸಬೇಡಿ. ನೋಡಲ್‌ ಆಫೀಸರ್‌ ಆಗಿ ನಿಮ್ಮನ್ನು ನೇಮಕ ಮಾಡಿಲ್ಲ ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಚಾಮರಾಜನಗರ ಡಿಸಿ ಎಂ.ಆರ್.ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮಗೆ ಬಹಳ ದೊಡ್ಡ ಸಮಸ್ಯೆ ಸಂಕಷ್ಟ ಬಂದಿದ್ದು ಮೈಸೂರಿನಿಂದ ಪೂರೈಕೆ ಆಗಲಿಲ್ಲ. ನನಗೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಅಂತಾ ತಿಳಿದ ತಕ್ಷಣ ಸಚಿವರು, ನೋಡಲ್ ಅಧಿಕಾರಿ ಸಿಎಸ್ ಅವರಿಗೆ ಮಾಹಿತಿ ನೀಡಿದೆ. ಮೈಸೂರು ಜಿಲ್ಲಾಧಿಕಾರಿ ಸುಳ್ಳು ಮಾಹಿತಿ ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ನಮ್ಮ ಸಿಲಿಂಡರ್ ಇರುವ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ನಮ್ಮ ಬಳಿ ದಾಖಲೆ ಇದೆ. 10 ಗಂಟೆಯ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಹಿಂದಿನ ದಿನದಿಂದ ಆಕ್ಸಿಜನ್ ನೀಡಲು ಮೀನಾಮೇಷ ಎಣಿಸಿದ್ದಾರೆ. ಕೇಳಿದರೆ ಸರಬರಾಜುದಾರರಿಗೆ ಮೈಸೂರು ಡಿಸಿಯಿಂದ ಅನುಮತಿ ಪಡೆಯಬೇಕು ಅಂತಾ ಹೇಳಿದ್ದಾರೆ. ಇದು ನನಗೆ ಅರ್ಥ ಆಗುತ್ತಿಲ್ಲ. ಅವರು ಒಂದು ದೊಡ್ಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅಲ್ಲೇ ಅವರು ಕೆಲಸ ಮಾಡಲಿ. ಈ ಕಡೆ ಯಾಕೆ ತಲೆ ಹಾಕಬೇಕು ? ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಅವರು ವಿವರಿಸಿದರು.

ನಮಗೆ ಆಕ್ಸಿಜನ್ ಸರಬರಾಜು ಆಗುವಲ್ಲಿ ವ್ಯತ್ಯಯವಾಗಿದೆ. ಇದು ಆಗದೇ ಇದ್ದಿದ್ದರೆ ಅಮೂಲ್ಯ ಜೀವನಗಳನ್ನು ಉಳಿಸಬಹುದಿತ್ತು. ನಮಗೆ ಆಕ್ಸಿಜನ್ ಸರಬಾರಾಜು ಮಾಡುವವರು ನಮ್ಮ ಹತ್ತಿರಬರುವ ಮುನ್ನ ನೀವು ಮೈಸೂರು ಡಿಸಿ ಅನುಮತಿ ಪಡೆದು ಬನ್ನಿ ಅಂತ ಹೇಳಿದ್ದರು. ಮೈಸೂರು ಜಿಲ್ಲಾಧಿಕಾರಿ ಆಕ್ಸಿಜನ್ ಸರಬರಾಜು ಮಾಡುವವರಿಗೆ ನಿರ್ದೇಶನ ನೀಡಿದ್ದರು. ಅವರ ನಿರ್ದೇಶನದಿಂದಲೇ ನಮಗೆ ಅಂದು ಸಮಸ್ಯೆಯಾಗಿತ್ತು. ಇಲ್ಲವಾದರೆ ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿತ್ತು ಎಂದು ಚಾಮರಾಜನಗರ ಡಿಸಿ ಎಂ.ಆರ್.ರವಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿನಿತ್ಯ ನಮ್ಮ ವಾಹನ ಮೈಸೂರಿಗೆ ಹೋಗಿ ಗಂಟೆಗಟ್ಟಲೆ ಕಾಯೋದು, ಅವರು ಕೊಟ್ಟಾಗ ತೆಗೆದುಕೊಂಡು ಬರುವುದು ಆಗುತಿತ್ತು. ಅವರು ಅನುಮತಿ ನೀಡಿದರೆ ಹೇಳಿದರೆ ನಮ್ಮ ಜಿಲ್ಲೆಗೆ ಕಳುಹಿಸುವುದು ಯಾವ ನ್ಯಾಯ ? ಇವರಿಗೆ ಈ ಅಧಿಕಾರ ಕೊಟ್ಟವರು ಯಾರು? ಇವರನ್ನು ನೋಡಲ್ ಅಧಿಕಾರಿಯಾಗಿ ಯಾರು ಮಾಡಿಲ್ಲ. ಸುತ್ತಮುತ್ತಲಿನ ಜಿಲ್ಲೆಗಳ ಉಸ್ತುವಾರಿ ಸಹಾ ಇವರನ್ನು ಮಾಡಿಲ್ಲ. ಈ ಸಮಸ್ಯೆ ಬಗ್ಗೆ ನಾನು ಸಿಎಸ್ ಅವರಿಗೆ ಹೇಳಿದ್ದೆ. ಜಿಲ್ಲಾ ಉಸ್ತುವಾರಿ ಸಚಿವರು ಮೂಲಕವೂ ಹೇಳಿದ್ದೆ. ಅವರೇ ಈ ರೀತಿ ಮಾಡದಂತೆ ನಿರ್ದೇಶನ ನೀಡುತ್ತೇನೆ ಅಂತಾ ಹೇಳಿದ್ದರು. ಖುದ್ದು ಸಿಎಂ ಸಹಾ ಮೈಸೂರು ಡಿಸಿಗೆ ನಿರ್ದೇಶನ ನೀಡಿದ್ದರು. ಸಿಎಂ ಹೇಳಿದ್ದರು ಏಕೆ ರೋಹಿಣಿ ಸಿಂಧೂರಿ ನಮ್ಮ ಜಿಲ್ಲೆ ಬಗ್ಗೆ ಈ ರೀತಿ ಮಾಡಿದರು ಗೊತ್ತಿಲ್ಲ. ಘಟನೆ ದಿನ ಜಿಲ್ಲೆಯಲ್ಲಿ ಕೋವಿಡ್‌ನಿಂದ ಒಟ್ಟು 27 ಸಾವುಗಳಾಗಿವೆ. ಸಿದ್ದರಾಮಯ್ಯ ಅವರು ಹೇಳಿದ ಎಲ್ಲಾ ಆಕ್ಸಿಜನ್ ಸಾವು ಹೇಳಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಚಾಮರಾಜನಗರ ಡಿಸಿ ಎಂ.ಆರ್.ರವಿ ತಿಳಿಸಿದರು.

ಇದನ್ನೂ ಓದಿ: ಆಕ್ಸಿಜನ್ ವ್ಯತ್ಯಯ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೊವಿಡ್ ಸೋಂಕಿತರೂ ಸೇರಿ 22 ರೋಗಿಗಳ ಸಾವು

K Sudhakar Press Meet: ಆಕ್ಸಿಜನ್ ಕೊರತೆಯಿಂದ ಮೂವರು ಮಾತ್ರ ಸಾವನ್ನಪ್ಪಿದ್ದಾರೆ; ಸಚಿವ ಸುಧಾಕರ್ ಸ್ಪಷ್ಟನೆ

(Chamarajanagar DC alleged reason for lack of medical oxygen death on Mysuru DC Rohini Sindhuri)