
ಚಾಮರಾಜನಗರ, ಆಗಸ್ಟ್ 26: ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳಿಂದ ನಡೆದ ಮೂವರು ಶಂಕಿತ ಬೇಟೆಗಾರರ ಎನ್ಕೌಂಟರ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಜಿಲ್ಲೆಯ ಗಡಿ ಪ್ರದೇಶದಲ್ಲಿ ಜಾತಿ, ಧರ್ಮ ಹಾಗೂ ಭಾಷೆಯ ಹೆಸರಿನಲ್ಲಿ ಕೋಮು ಗಲಭೆ ಸೃಷ್ಟಿಸಲು ನಕ್ಸಲ್ ಪ್ರೇರಿತ ‘ಟೈಗರ್ ಆಫ್ ಜಸ್ಟೀಸ್’ ಸಂಘಟನೆ ದೊಡ್ಡ ಮಟ್ಟದ ಷಡ್ಯಂತ್ರ ರೂಪಿಸಿರುವುದು ಬಯಲಾಗಿದೆ.
ಈ ಸಂಘಟನೆಯ ಅಧ್ಯಕ್ಷ ದಿವ್ಯಾನಂದ ಮಾತನಾಡಿದ್ದಾನೆ ಎನ್ನಲಾದ ಪ್ರಚೋದನಾಕಾರಿ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಆಡಿಯೋದಲ್ಲಿ ತಮಿಳು ಸಮುದಾಯವನ್ನು ಎತ್ತಿಕಟ್ಟುವ ಯತ್ನ ನಡೆದಿದ್ದು, “ತಮಿಳಿಗರ ಕೊಲೆಯಾಗಿದೆ, ನಮಗೆ ಇಲ್ಲಿ ತೀವ್ರ ಅನ್ಯಾಯವಾಗುತ್ತಿದೆ. ತಮಿಳುನಾಡಿನಿಂದ ವಲಸೆ ಬಂದ ನಮಗೆ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ನೀಡದೆ ನಿರ್ಲಕ್ಷ್ಯ ವಹಿಸಿದೆ. ಕನ್ನಡಿಗರ ದಬ್ಬಾಳಿಕೆಯನ್ನು ನಾವು ಇನ್ಮುಂದೆ ಸಹಿಸುವುದಿಲ್ಲ” ಎಂದು ಉಗ್ರವಾಗಿ ಪ್ರಚೋದಿಸಲಾಗಿದೆ.
ಅಷ್ಟೇ ಅಲ್ಲದೆ, ಪ್ರಾದೇಶಿಕ ರಾಜಕೀಯ ಪಕ್ಷಗಳ ವಿರುದ್ಧವೂ ಧ್ವನಿ ಎತ್ತಿರುವ ಆಡಿಯೋದಲ್ಲಿ, “ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಹಿಂದೆ ಹೋಗಬೇಡಿ. ನಮಗೆ ನಮ್ಮದೇ ಆದ ಬಲವಾದ ಸಂಘಟನೆ ಬೇಕು. ನಮ್ಮ ಪ್ರದೇಶದಲ್ಲಿ ಬರೋಬ್ಬರಿ 65 ಸಾವಿರ ಮತಗಳಿದ್ದು, ಒಬ್ಬ ತಮಿಳಿಗನನ್ನು ಮುಟ್ಟಿದರೂ ನಾವು ಒಂದೇ ಒಂದು ಮತವನ್ನೂ ಯಾರಿಗೂ ಹಾಕಬಾರದು” ಎಂದು ಬಹಿರಂಗ ಕರೆ ನೀಡಲಾಗಿದೆ. ಚರ್ಚ್ಗಳು ತಮ್ಮ ಬೆಂಗಾವಲಾಗಿ ನಿಂತಿವೆ ಎಂದು ಪ್ರತಿಪಾದಿಸಿರುವ ಆತ, ತಮಿಳು ಪಡಿಯಾಚ್ಚಿ ಕ್ರಿಶ್ಚಿಯನ್ನರು ಒಗ್ಗಟ್ಟಾಗಿ ನಿಲ್ಲಬೇಕೆಂದು ಪ್ರಚೋದಿಸಿದ್ದಾನೆ. ಪೊಲೀಸ್ ಇಲಾಖೆ ತನ್ನ ವಿರುದ್ಧ ಪ್ರಕರಣ ದಾಖಲಿಸಿದರೂ ಲೀಗಲ್ ಆಗಿ ಎದುರಿಸುವುದಾಗಿ ಸವಾಲು ಹಾಕಿದ್ದಾನೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:02 am, Wed, 26 August 26