ಮಜ್ಜನ ಬಾವಿಗೆ ಸೇರುತ್ತಿದೆ ಕಲುಷಿತ ನೀರು; ಮಾದಪ್ಪನಿಗೆ ಅಭಿಷೇಕ ನಡೆಸಲಾಗದೆ ಅರ್ಚಕರ ಪರದಾಟ!

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 10, 2023 | 7:54 PM

ಕೋಟ್ಯಾಂತರ ಜನರ ಆರಾದ್ಯ ದೈವ ಮಾದಪ್ಪನಿಗೆ ಅಭಿಷೇಕ ನಡೆಸಲು ಅರ್ಚಕರು ಪರದಾಡುವಂತಾಗಿದೆ. ಮಳೆ ಬಂದ ವೇಳೆಯಲ್ಲಿ ಮಜ್ಜನ ಬಾವಿಗೆ ಜೀವ ಕೈಯಲ್ಲಿ ಹಿಡಿದು ಅರ್ಚಕರು ತೆರಳುವಂತಾಗಿದೆ. ತಾವು ಅನುಭವಿಸುವ ಸಮಸ್ಯೆ ಕುರಿತು ಇಂದು ಅರ್ಚಕರು ಬಾಯಿ ಬಿಡುವಂತಾಗಿದೆ. ಅಸಲಿಗೆ ಮಾದಪ್ಪನ ಸೇವೆ ಸಲ್ಲಿಸುವ ಅರ್ಚಕರಿಗೆ ಎದುರಾಗಿರುವ ಸಮಸ್ಯೆ ಆದ್ರು ಏನು ಅಂತೀರಾ? ಇಲ್ಲಿದೆ.

ಮಜ್ಜನ ಬಾವಿಗೆ ಸೇರುತ್ತಿದೆ ಕಲುಷಿತ ನೀರು; ಮಾದಪ್ಪನಿಗೆ ಅಭಿಷೇಕ ನಡೆಸಲಾಗದೆ ಅರ್ಚಕರ ಪರದಾಟ!
ಮಲೆ ಮಹಾದೇಶ್ವರ ಬೆಟ್ಟ
Follow us on

ಚಾಮರಾಜನಗರ, ಡಿ.10: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ(Male Mahadeshwara Betta)ದಲ್ಲಿ ದಿನ ನಿತ್ಯ ಮಜ್ಜನ ಬಾವಿಯಿಂದ ನೀರನ್ನು ತೆಗೆದುಕೊಂಡು ಹೋಗಿ ಮಾದಪ್ಪನಿಗೆ ಅಭಿಷೇಕ ಮಾಡಲಾಗುತ್ತದೆ. ಆದ್ರೆ, ಮಳೆ ಬಂದಂತ ಸಂದರ್ಭದಲ್ಲಿ ಈ ಮಜ್ಜನ ಬಾವಿಯ ಸುತ್ತಾಮುತ್ತಾ ಆಳೆತ್ತರಕ್ಕೆ ನೀರು ತುಂಬಿಕೊಳ್ಳುತ್ತದೆ. ಈ ವೇಳೆ ಮಜ್ಜನ ಬಾವಿಗೆ, ಕೊಳಚೆ ನೀರು, ಕಸಗಳು ಬಂದು ಮಿಶ್ರಣಗೊಳ್ಳುತ್ತದೆ. ಪ್ರತಿ ನಿತ್ಯ ಮುಂಜಾನೆ ಮೂರು ಗಂಟೆಗೆ ಮುಖ್ಯ ಅರ್ಚಕರು, ಈ ಮಜ್ಜನ ಬಾವಿಯಿಂದ ನೀರನ್ನು ತಂದು ಅಭಿಷೇಕವನ್ನು ಮಾಡುತ್ತಾರೆ. ಆದ್ರೆ, ಮಳೆ ಬಂದಾಗ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಹೋಗಿ ಮಜ್ಜನ ಬಾವಿಯಿಂದ ನೀರು ತರಬೇಕಾದ ಅನಿವಾರ್ಯತೆ ಈಗ ಎದುರಾಗಿದೆ.

ಈ ರೀತಿ ಮಳೆ ಬಂದಾಗಲೆಲ್ಲ ಮಜ್ಜನ ಬಾವಿಯ ಸುತ್ತ ನೀರು ತುಂಬಿಕೊಳ್ಳುತ್ತಿದೆ. ಇದು ನಿನ್ನೆ ಮೊನ್ನೆಯಿಂದ ಆಗುತ್ತಿರುವುದಲ್ಲ. ಕಳೆದ 10 ವರ್ಷಗಳಿಂದಲೂ ಮಳೆ ಬಂದಾಗ ಈ ರೀತಿ ಆಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ಅರ್ಚಕರು ಮನವಿ ಮಾಡುತ್ತಿದ್ದಾರೆ. ಪ್ರತಿ ದಿನ ಮಾದಪ್ಪನ ಸನ್ನಿಧಾನಕ್ಕೆ ಸಾವಿರಾರು ಭಕ್ತರು ಬರ್ತಾರೆ, ಪ್ರಾಧಿಕಾರಕ್ಕೆ ಕೋಟ್ಯಾಂತರ ರೂಪಾಯಿ ಹರಿದು ಬರುತ್ತೆ. ಇಷ್ಟೆಲ್ಲ ಇದ್ದರೂ ಈ ಸಮಸ್ಯೆಯನ್ನು ಬಗೆ ಹರಿಸುವಲ್ಲಿ ಪ್ರಾಧಿಕಾರ ಯಾಕೆ ಮುಂದಾಗಿಲ್ಲ ಎಂದು ಮುಖ್ಯ ಅರ್ಚಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ:ಮಲೆ ಮಹದೇಶ್ವರ ಲಾಡು ತಯಾರಿಕಾ ಕೇಂದ್ರದಲ್ಲಿ ಬೆಂಕಿ ಅಪಘಡ; 36 ಸಾವಿರ ಲಾಡು ಪ್ರಸಾದ ಬೆಂಕಿಗಾಹುತಿ

ಅದೇನೆ ಹೇಳಿ ಕೋಟ್ಯಾಂತರ ಜನರ ಆರಾಧ್ಯ ದೈವವಾಗಿರುವ ಮಾದಪ್ಪನಿಗೆ ಇಂತಹ ಸಂಕಷ್ಟ ಎದುರಾದ್ರೆ ಹೇಗೆ ಎಂಬುದು ಜನ ಸಾಮಾನ್ಯರ ಪ್ರಶ್ನೆಯಾಗಿದೆ. ಆದಷ್ಟು ಬೇಗ ಮಜ್ಜನ ಬಾವಿಯ ಸುತ್ತ ನೀರು ನಿಲ್ಲದಂತೆ ಶಾಶ್ವತ ಪರಿಹಾರ ಒದಗಿಸುವಂತೆ ಅರ್ಚಕರು ಹಾಗೂ ಭಕ್ತರು ಮನವಿ ಮಾಡಿ ಕೊಳ್ಳುತ್ತಿದ್ದಾರೆ. ಈಗಲಾದರೂ ಸರ್ಕಾರ ಇತ್ತ ಗಮನಹರಿಸಿ, ಸಮಸ್ಯೆ ಬಗೆಹರಿಸಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ