ಚಿಕ್ಕಬಳ್ಳಾಪುರ: ವರ್ಷದ ಹಿಂದಷ್ಟೇ ಲವ್ ಮ್ಯಾರೇಜ್; ಗಂಡನ ಮನೆಯಲ್ಲಿ ಪತ್ನಿ ಆತ್ಮಹತ್ಯೆ, ವರದಕ್ಷಿಣೆ ಕಿರುಕುಳ
ವರದಕ್ಷಿಣೆ ಕಿರುಕುಳಕ್ಕೆ ವಿಷ ಸೇವಿಸಿ ಗೃಹಿಣಿ ಗಂಡನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ರಾಮಲಿಂಗಾಪುರ ಗ್ರಾಮದಲ್ಲಿ ನಡೆದಿದೆ. ನಿತ್ಯದ ದೌರ್ಜನ್ಯ, ಕಿರುಕುಳವೇ ಸಾವಿಗೆ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದು, ಗಂಡನನ್ನು ಪೊಲೀಸರು ಬಂಧಿಸಿದ್ದಾರೆ. ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಚಿಕ್ಕಬಳ್ಳಾಪುರ, ಅಕ್ಟೋಬರ್ 13: ಆಕೆ ಪೋಷಕರ ವಿರೋಧದ ಮಧ್ಯೆ ತನ್ನದೇ ಗ್ರಾಮದ ಯುವಕನನ್ನು ಪ್ರೀತಿಸಿ, ಒಂದು ವರ್ಷದ ಹಿಂದೆ ಲವ್ ಮ್ಯಾರೇಜ್ (Love Marriage) ಮಾಡಿಕೊಂಡಿದ್ದಳು. ಆದರೆ ಮದುವೆಯಾಗಿ ವರ್ಷ ಕಳೆಯುವುದರೊಳಗೆ ವಿಷ ಸೇವಿಸಿ ಗಂಡನ ಮನೆಯಲ್ಲೇ ಆತ್ಮಹತ್ಯೆ (death) ಮಾಡಿಕೊಂಡಿಕೊಂಡಿರುವಂತಹ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ರಾಮಲಿಂಗಾಪುರ ಗ್ರಾಮದಲ್ಲಿ ನಡೆದಿದೆ. ಶಿರಿಷಾ.ಎಂ (20) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಗಂಡನನ್ನು ಅರೆಸ್ಟ್ ಮಾಡಿದ್ದು, ಅತ್ತೆ, ನಾದಿನಿ ಮತ್ತು ಸಂಬಂಧಿಕರು ಪರಾರಿ ಆಗಿದ್ದಾರೆ.
ಗಂಡನ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ರಾಮಲಿಂಗಾಪುರ ಗ್ರಾಮದ ಶಿರಿಷಾ ಎಂ, ಇದೇ ಗ್ರಾಮದ ಶ್ರಿನಾಥ್ ಎಂಬಾತನನ್ನು ಪರಸ್ಪರ ಪ್ರೀತಿಸಿ, ಕಳೆದ ಒಂದು ವರ್ಷದ ಹಿಂದೆ ಲವ್ ಮ್ಯಾರೇಜ್ ಆಗಿದ್ದರು. ಮದುವೆಯಾಗಿ 1 ವರ್ಷ ಕಳೆದಿದ್ದೆ ತಡ, ಶಿರಿಷಾ ಗಂಡನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಸಾಯುವುದಕ್ಕೂ ಮುನ್ನ ತಂದೆಗೆ ಕರೆ ಮಾಡಿ ತನಗೆ ಗಂಡ ಪ್ರತಿನಿತ್ಯ ಹಲ್ಲೆ ಮಾಡುತ್ತಾನೆ. ಅತ್ತೆ-ಮಾವ, ನಾದಿನಿ, ಗಂಡ, ಅಕ್ಕ ಕಲಾವತಿ ಕಾಟ ತಾಳಲಾಗುತ್ತಿಲ್ಲ ನಾನು ಡಿವೋರ್ಸ್ ಕೊಡುತ್ತೇನೆ ಅಂತ ಅತ್ತು ಕಣ್ಣೀರು ಹಾಕಿದ್ದಳು.
ಇದನ್ನೂ ಓದಿ: ಡ್ರಾಪ್ ಕೊಡುವ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ: ತಂದೆ-ತಾಯಿ ಇಲ್ಲದ ತಬ್ಬಲಿ ಮೇಲೆ ಇದೆಂಥಾ ಕ್ರೌರ್ಯ
ಆದರೆ ಅಪ್ಪ, ಆಯ್ತು ಮಾತನಾಡೋಣವಿರು ಸಮಾಧಾನ ಮಾಡಿಕೋ ಅಂದಿದ್ದರು. ಆದರೆ ದುಡುಕಿದ ಶಿರಿಷಾ, ಅತ್ತೆ ಜೊತೆ ಜಗಳ ಮಾಡಿಕೊಂಡು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದರಿಂದ ಆಕ್ರೋಶಗೊಂಡ ಆಕೆಯ ಪೋಷಕರು ಹಾಗೂ ಗ್ರಾಮಸ್ಥರು, ಶಿರಿಷಾಳ ಅತ್ತೆ ಮನೆ ಎದುರು ದೊಡ್ಡ ರಂಪಾಟ ಮಾಡಿದ್ದಾರೆ.
ರಸ್ತೆಗೆ ಅಡ್ಡಲಾಗಿ ಮೃತದೇಹವಿಟ್ಟು ಪ್ರತಿಭಟನೆ
ಇನ್ನು ಪೊಲೀಸರು ದೂರನ್ನು ತಿರುಚಿದ್ದು, ಕೇವಲ ಮೃತಳ ಗಂಡ ಶ್ರೀನಾಥ್ನನ್ನು ಮಾತ್ರ ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರು ಮಾಡುವುದಕ್ಕೂ ಮುನ್ನ ಎಫ್ಐಆರ್ ತಿದ್ದುವಂತೆ ಹಾಗೂ ಇತರೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ರಸ್ತೆಗೆ ಅಡ್ಡಲಾಗಿ ಶಾಮಿಯಾನ ಹಾಕಿ ಮೃತದೇಹವಿಟ್ಟು ಶಿಡ್ಲಘಟ್ಟ ದಿಬ್ಬೂರಹಳ್ಳಿ ರಸ್ತೆ ತಡೆದು ಪ್ರತಿಭಟಿಸಿದರು. ಈ ವೇಳೆ ಪೊಲೀಸರೊಂದಿಗೆ ವಾಗ್ವಾದವೂ ನಡೆಯಿತು. ಕೊನೆಗೆ ಸ್ಥಳಿಯ ಮುಖಂಡರು ಮೃತಳ ಸಂಬಂಧಿಕರನ್ನು ಸಮಾಧಾನ ಮಾಡಿ ನ್ಯಾಯ ಕೊಡಿಸುವ ಭರವಸೆ ನೀಡಿದರು.
ಇದನ್ನೂ ಓದಿ: ಕಲಬುರಗಿ: 3 ತಿಂಗಳಿನಿಂದ ಸಂಬಳ ನೀಡದಕ್ಕೆ ಡೆತ್ ನೋಟ್ ಬರೆದಿಟ್ಟು ಗ್ರಂಥಪಾಲಕಿ ಆತ್ಮಹತ್ಯೆ
ಶಿಡ್ಲಘಟ್ಟ ಪೊಲೀಸರು ಮೃತಳ ಸಂಬಂಧಿಕರ ಮನವೊಲಿಸಿ, ರಸ್ತೆಯಿಂದ ಮೃತದೇಹವನ್ನ ತೆರವು ಮಾಡಿ, ಆಕೆಯ ಗಂಡ ಶ್ರೀನಾಥ್ ಮನೆ ಎದುರಿಗೆ ಶಿಫ್ಟ್ ಮಾಡಿದರು. ಪೊಲೀಸರು ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ ಮೇಲೆ ಶಿರಿಷಾ ಅಂತ್ಯಸಂಸ್ಕಾರ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




