ಲಗ್ನಪತ್ರಿಕೆ ಕೊಡೋ ನೆಪದಲ್ಲಿ ಮನೆಗೆ ಬಂದ ಕಳ್ಳರು ಮಾಡಿದ್ದೇನು? ಚಿಂತಾಮಣಿಯಲ್ಲೊಂದು ಸಿನಿಮಾ ಮೀರಿಸೊ ದರೋಡೆ!

Chintamani: ಒಟ್ನಲ್ಲಿ ಕಳ್ಳರು ಯಾವ ಯಾವೆಲ್ಲಾ ನೆಪ ಇಟ್ಟುಕೊಂಡು ಬರ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ. ಇಂತಹ ಘಟನೆಗಳಿಂದ ನಮ್ಮ ಹತ್ತಿರದ ಸಂಭಂದಿಗಳೇ ಇನ್ವಿಟೇಷನ್ ಕೊಡಲು ಬಂದರೂ ನಂಬಲು ಕಷ್ಟವಾಗುತ್ತದೆ!

ಲಗ್ನಪತ್ರಿಕೆ ಕೊಡೋ ನೆಪದಲ್ಲಿ ಮನೆಗೆ ಬಂದ ಕಳ್ಳರು ಮಾಡಿದ್ದೇನು? ಚಿಂತಾಮಣಿಯಲ್ಲೊಂದು ಸಿನಿಮಾ ಮೀರಿಸೊ ದರೋಡೆ!
ಚಿಂತಾಮಣಿಯಲ್ಲೊಂದು ಸಿನಿಮಾ ಮೀರಿಸೊ ದರೋಡೆ!
Edited By:

Updated on: Oct 27, 2022 | 2:35 PM

ಅವರಿಬ್ಬರು ಇಳಿ ವಯಸ್ಸಿನ ದಂಪತಿ. ಆತ ಸರ್ಕಾರಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದರು. ಆಕೆ ಮನೆಯಲ್ಲೇ ಕೆಲಸ ಮಾಡಿಕೊಂಡು, ಊರಿನಿಂದ ಆಚೆ ಮನೆ ಕಟ್ಟಿಕೊಂಡು ಹಾಯಾಗಿ ಇದ್ದರು. ವಯಸ್ಸಾಗೋಷ್ಟರಲ್ಲಿ ಮಕ್ಕಳು ಮರಿಗೆ ಮದುವೆ ಮಾಡಿ ಮುಗಿಸಿದ್ದರು. ಪಿಂಚಣಿ ಹಣದಲ್ಲಿ ಜೀವನ ಸಾಗಿಸುತಿದ್ದರು. ಜೀವನಕ್ಕೆ ಅಂತ ಹೇಳಿ ಒಂದಷ್ಟು ಚಿನ್ನ ಬೆಳ್ಳಿ ಸಂಪಾದನೆ ಮಾಡಿಟ್ಟುಕೊಂಡಿದ್ದರು. ಆದ್ರೆ ಮದುವೆಗೆ ಇನ್ವಿಟೇಷನ್ ಕೊಡೋ ನೆಪದಲ್ಲಿ ಮನೆಗೆ ಬಂದ ಅಪರಿಚಿತರ ಗುಂಪೊಂದು ಮನೆಯಲ್ಲಿದ್ದವರ ಕೈ ಕಾಲು ಕಟ್ಟಿ ಹಾಕಿ, ಮನೆಯಲ್ಲಿದ್ದ ಚಿನ್ನ ಬೆಳ್ಳಿ ಹಣ ಅಷ್ಟನ್ನೂ ಲಪಟಾಯಿಸಿ (loot) ಎಸ್ಕೇಪ್ ಆಗಿದೆ. ಅದು ಎಲ್ಲಿ ಅಂತೀರಾ ಈ ಸ್ಟೋರಿ ಓದಿ.

ಮುರಿದು ಬಿದ್ದಿರುವ ಬೀರು, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬಟ್ಟೆ ಬರೆ, ಆತಂಕದಿಂದ ಭಯಭೀತರಾಗಿ ಬೆವರುತ್ತಿರುವ ಇಳಿವಯಸ್ಸಿನ ದಂಪತಿ… ಈ ದೃಶ್ಯಗಳು ಕಂಡುಬಂದಿದ್ದು ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚಿಂತಾಮಣಿ (Chandrahalli) ತಾಲ್ಲೂಕಿನ ಚಾಂಡ್ರಹಳ್ಳಿ (Chandrahalli) ಗ್ರಾಮದಲ್ಲಿ. ಮನೆ ಯಜಮಾನನ ಹೆಸರು ನಾರಾಯಣಸ್ವಾಮಿ. ಇತ್ತೀಚೆಗೆ ಕೋಲಾರ ಜಿಲ್ಲೆಯ ಶ್ರೀನಿವಾಪುರ ತಾಲ್ಲೂಕು ಕಂದಾಯ ಇಲಾಖೆಯಲ್ಲಿ ಸರ್ವೇಯರ್ ಆಗಿ ಕಲಸ ಮಾಡಿ ನಿವೃತ್ತಿ ಹೊಂದಿದ್ದರು. ಈತನ ಪತ್ನಿ ಮನೆಯಲ್ಲಿ ವ್ಯವಸಾಯ ಮಾಡಿಕೊಂಡು ಮಕ್ಕಳು ಮರಿಯನ್ನು ನೋಡಿಕೊಂಡಿದ್ದರು. ನಾರಾಯಣಸ್ವಾಮಿ ನಿವೃತ್ತಿ ಹೊಂದಿದ ಬಳಿಕ ಬಂದ ಹಣದಲ್ಲಿ ಸೈಟ್ ಖರೀದಿ ಮಾಡಿದ್ದರು. ಬರೊ ನಿವೃತ್ತಿ ವೇತನದಲ್ಲಿ ಜೀವನ ಸಾಗಿಸುತ್ತಿದ್ರು. ಮೊನ್ನೆ ರಾತ್ರಿ ಊಟ ಮಾಡಿ ಮಲಗಿದ್ದರು. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)

ಸರಿ ಸುಮಾರು 10.30ರ ಸಮಯದಲ್ಲಿ ಐದು ಜನರ ಅಪರಿಚಿತರ ಗುಂಪೊಂದು ಬಾಗಿಲು ತಟ್ಟಿದ್ರು. ಯಾರು ಎಂದು ಕೇಳಿದಾಗ ನಾವು ಶ್ರೀನಿವಾಸಪುರದವರು… ಮದುವೆ ಕಾರ್ಡ್ ಕೊಡೋಕೆ ಬಂದಿದ್ದೇವೆ ಎಂದು ಹೇಳಿ ಮನೆಯ ಒಳಗಡೆ ಬಂದು ಕುಡಿಯಲು ನೀರು ಕೇಳಿದ್ದಾರೆ. ಅಷ್ಟೆ… ನೀರು ಕೊಡಲು ಬಂದ ಸರಸ್ವತಮ್ಮನ ಎರಡೂ ಕೈ ಕಾಲುಗಳನ್ನು ಸೋಫಾಗೆ ಕಟ್ಟಿಹಾಕಿ, ರೂಮಿನಲ್ಲಿ ಮಲಗಿದ್ದ ನಾರಾಯಣಸ್ವಾಮಿಯನ್ನೂ ಕಟ್ಟಿ ಹಾಕಿದ್ದಾರೆ. ಚಾಕು ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ. ನಂತರ 150 ಗ್ರಾಂ ಚಿನ್ನ, 1.25 ಕೆಜಿ ಬೆಳ್ಳಿ, 11 ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆ.

ಇನ್ನು ಮನೆ ಯಜಮಾನ ನಾರಾಯಣಸ್ವಾಮಿಗೆ 62 ವರ್ಷ ವಯಸ್ಸಾಗಿದ್ದು, ತಮ್ಮ ಹೆಂಡತಿ ಕೈಗೆ ಮತ್ತು ಬಾಯಿಗೆ ಪ್ಲಾಸ್ಟರ್ ಹಾಕಿದ್ದು ನೋಡಿ ಭಯಭೀತರನಾಗಿದ್ದಾರೆ. ತನಗೂ ಚಾಕು ತೋರಿಸಿ ಬಾಯಿ ಮುಚ್ಚಿಸಿದ್ದರು. ನಮ್ಮ ಬಳಿ ಇದ್ದ 11 ವರ್ಷದ ಮಗುವಿಗೂ ಚಾಕು ತೋರಿಸಿ ಬೆದರಿಸಿದ್ದಾರೆ. ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿದ್ದ ಅಲ್ಪಸ್ವಲ್ಪ ಚಿನ್ನ ಬೆಳ್ಳಿಯನ್ನು ಕಬ್ಬಿಣದ ರಾಡ್ ಗಳಿಂದ ಬೀರುವಿನ ಡೋರ್ ಗಳನ್ನು ಮುರಿದು ಚಿನ್ನದ ನೆಕ್ಲೇಸ್, ಚಿನ್ನದ ಓಲೆ, ಚಿನ್ನದ ನಾಗರಬಿಲ್ಲು, ಚಿನ್ನದ ಗುಂಡುಗಳು, ನಾಲ್ಕು ಉಂಗುರ, ಮಾಂಗಲ್ಯ ಸರ, ತಾಳಿ ಸೇರಿ ಒಟ್ಟು 150 ಗ್ರಾಂ ಚಿನ್ನ ಬೆಳ್ಳಿ ತಟ್ಟೆ ಲೋಟ ಉಡುದಾರ, ಮುಖವಾಡ, ಕಾಲಿನ ಚೈನು, ಎರಡು ಮೊಬೈಲ್ ಸೇರಿದಂತೆ ಒಟ್ಟು 5-6 ಲಕ್ಷ ಬೆಲೆಬಾಳುವ ಒಡವೆಗಳನ್ನು ಕದ್ದೊಯ್ದಿದ್ದಾರೆ ಎಂದು ಸರಸ್ವತಮ್ಮ-ನಾರಾಯಣಸ್ವಾಮಿ ದಂಪತಿ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಒಟ್ನಲ್ಲಿ ಕಳ್ಳರು ಯಾವ ಯಾವೆಲ್ಲಾ ನೆಪ ಇಟ್ಟುಕೊಂಡು ಬರ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ. ಇಂತಹ ಘಟನೆಗಳಿಂದ ನಮ್ಮ ಹತ್ತಿರದ ಸಂಭಂದಿಗಳೇ ಇನ್ವಿಟೇಷನ್ ಕೊಡಲು ಬಂದರೂ ನಂಬಲು ಕಷ್ಟವಾಗುತ್ತದೆ! ಇನ್ನು ದೂರು ದಾಖಲಿಸಿಕೊಂಡಿರುವ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Follow Us