ದತ್ತಪೀಠ ವಿವಾದ ಮತ್ತೆ ಮುನ್ನೆಲೆಗೆ: ವ್ಯವಸ್ಥಾಪನ ಸಮಿತಿ ವಜಾಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

| Updated By: ವಿವೇಕ ಬಿರಾದಾರ

Updated on: Aug 20, 2023 | 10:52 AM

ಕಾಫಿನಾಡಿನ ಶ್ರೀಗುರುದತ್ತಾತ್ರೇಯ ಬಾಬಾಬುಡನ್​ಸ್ವಾಮಿ ದರ್ಗಾ ಇನಾಂ ದತ್ತಪೀಠ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ವ್ಯವಸ್ಥಾಪನ ಸಮಿತಿಯನ್ನು ಕೂಡಲೇ ವಜಾ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ.

ದತ್ತಪೀಠ ವಿವಾದ ಮತ್ತೆ ಮುನ್ನೆಲೆಗೆ: ವ್ಯವಸ್ಥಾಪನ ಸಮಿತಿ ವಜಾಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ
ದತ್ತಪೀಠ
Follow us on

ಚಿಕ್ಕಮಗಳೂರು (ಆ.20): ಕಾಫಿನಾಡಿನ ಶ್ರೀಗುರುದತ್ತಾತ್ರೇಯ ಬಾಬಾಬುಡನ್​ಸ್ವಾಮಿ ದರ್ಗಾ ಇನಾಂ ದತ್ತಪೀಠ (Dattapeeth) ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ವ್ಯವಸ್ಥಾಪನ ಸಮಿತಿಯನ್ನು ಕೂಡಲೇ ವಜಾ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೈಯದ್ ಬುಡೇನ್ ಶಾ ಖಾದ್ರಿ ಟ್ರಸ್ಟ್​​​ನ ಸದಸ್ಯರು ಮನವಿ ಸಲ್ಲಿಸಿದ್ದಾರೆ. ಹೈಕೋರ್ಟ್​ನ (High Court) ಆದೇಶದಂತೆ ಹಿಂದಿನ ಸರ್ಕಾರ ಸಮಿತಿ ರಚನೆ ಮಾಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಮಿತಿ ವಜಾ ಮಾಡುವಂತೆ ಮನವಿ ಸಲ್ಲಿಸಲಾಗಿದೆ.

8 ಜನ ಸದಸ್ಯರನ್ನು ಒಳಗೊಂಡಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾ ಸಂಬಂಧ ನೇಮಿಸಿರುವ ವ್ಯವಸ್ಥಾಪನ ಸಮಿತಿ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ. ಸಮಿತಿ ಒಂದು ಸಮುದಾಯದ ಪರವಾಗಿ ಕೆಲಸ ಮಾಡುತ್ತಿದೆ. ದತ್ತಜಯಂತಿಗೆ ಮಾತ್ರ ನೇಮಕವಾಗಿದ್ದ ಹಿಂದೂ ಆರ್ಚಕರಿಂದ ಇಂದಿಗೂ ಪೂಜೆ ನಡೆಯುತ್ತಿದೆ. ಇದು ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿದೆ ಎಂದು ಆರೋಪ ಕೇಳಿಬಂದಿದೆ.

ಇನ್ನೂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಎಸ್​ಡಿಪಿಐ ಮುಖಂಡರು ಭೇಟಿ ನೀಡಿದ್ದಾರೆ. ಕಳೆದ ವಾರ ಎಸ್​ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ನೇತೃತ್ವದ ತಂಡ ಭೇಟಿ ನೀಡಿತ್ತು. ಬಳಿಕ ಇಲ್ಲಿಯ ವ್ಯವಸ್ಥಾಪನ ಸಮಿತಿಯನ್ನು ವಿರೋಧಿಸಿ ಸರ್ಕಾರಕ್ಕೆ ಮನವಿ ಮಾಡಿತ್ತು.

ಏನಿದು ವ್ಯವಸ್ಥಾಪನ ಸಮಿತಿ

2018ರಲ್ಲಿ ಅಂದಿನ ರಾಜ್ಯ ಸರ್ಕಾರ ದತ್ತಪೀಠದಲ್ಲಿ ಪೂಜಾ ವಿಧಿ-ವಿಧಾನ ನೆರವೇರಿಸಲು ಮುಸ್ಲಿಂ ಸಮುದಾಯದ ಸೈಯದ್‌ ಗೌಸ್‌ ಮೊಹಿಯುದ್ದೀನ್‌ ಶಾ ಖಾದ್ರಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ನಂತರ ಇದನ್ನು ಏಕ ಸದಸ್ಯ ನ್ಯಾಯಪೀಠ ರದ್ದುಪಡಿಸಿತ್ತು.

ಇದನ್ನೂ ಓದಿ: ಚಿಕ್ಕಮಗಳೂರು: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಕೆ; ಮೂವರು ಅಧಿಕಾರಿಗಳ ವಿರುದ್ಧ ಕ್ರಿಮಿನಲ್​ ಕೇಸ್

ಏಕಸದಸ್ಯ ನ್ಯಾಯಪೀಠ 2021ರ ಸೆ.28ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸೈಯದ್‌ ಗೌಸ್‌ ಮೊಹಿಯುದ್ದೀನ್‌ ಶಾ ಖಾದ್ರಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ 8 ಜನ ಸದಸ್ಯರನ್ನು ಒಳಗೊಂಡಿರುವ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು.

ಅದರಂತೆ ಸರ್ಕಾರ ಹಿಂದೂ ಹಾಗೂ ಮುಸ್ಲಿಂ ಎರಡೂ ಧರ್ಮಗಳ ಸಂಪ್ರದಾಯಗಳ ಪ್ರಕಾರ ಪೂಜೆ ನೆರವೇರಿಸಲು ಮುಜಾವರ್‌ ಮತ್ತು ಅರ್ಚಕರನ್ನು ನೇಮಿಸಿ 2022ರ ಜು.19ರಂದು ಆದೇಶ ಹೊರಡಿಸಿತ್ತು. ಈ ಪೂಜಾ ಕೈಂಕರ್ಯಗಳ ಮೇಲೆ ನಿಗಾ ಇಡಲು ಎಲ್ಲ ಧರ್ಮದವರನ್ನು ಒಳಗೊಂಡ 8 ಮಂದಿ ಸದಸ್ಯರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:33 am, Sun, 20 August 23