ಹಾವೇರಿಯಲ್ಲಿ ಅಮಾನವೀಯ ಕೃತ್ಯ: 9ಕ್ಕೂ ಹೆಚ್ಚು ಶ್ವಾನಗಳನ್ನ ಹತ್ಯೆಗೈದು ವಾಮಾಚಾರ ಮಾಡಿದ ದುಷ್ಕರ್ಮಿಗಳು!
Haveri Black Magic: ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಮಂಟಗಣಿ ಮತ್ತು ಹತ್ತಿಮತ್ತೂರು ರಸ್ತೆಯಲ್ಲಿ ವಾಮಾಚಾರಕ್ಕಾಗಿ 9 ಶ್ವಾನಗಳ ಹತ್ಯೆ ಮಾಡಿರುವಂತಹ ಘಟನೆ ನಡೆದಿದೆ. ಸದ್ಯ ಈ ವಿಚಿತ್ರ ಘಟನೆಯಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೊಳಗಾಗಿದ್ದು, ದುಷ್ಕರ್ಮಿಗಳನ್ನ ತಕ್ಷಣ ಪತ್ತೆಹಚ್ಚಿ ಬಂಧಿಸುವಂತೆ ಆಗ್ರಹಿಸಿದ್ದಾರೆ.

ಹಾವೇರಿ, ಆಗಸ್ಟ್ 01: ಕೋಳಿ ಅಥವಾ ಕೋಳಿಯ ಮೊಟ್ಟೆಯನ್ನ ಬಳಸಿ ವಾಮಾಚಾರ (Black magic) ಮಾಡುವುದನ್ನ ನೋಡಿದ್ದೇವೆ. ಆದರೆ ಹಾವೇರಿ (haveri) ಜಿಲ್ಲೆಯ ಅದೊಂದು ಗ್ರಾಮದ ಬಳಿ 9ಕ್ಕೂ ಹೆಚ್ಚು ಶ್ವಾನಗಳನ್ನು ಹತ್ಯೆ ಮಾಡಿ ವಾಮಾಚಾರ ಮಾಡಲಾಗಿದೆ. ಈ ವಿಚಿತ್ರ ಘಟನೆಯಿಂದ ಜನರು ಅಕ್ಷರಶಃ ಬೆಚ್ಚಿಬಿದಿದ್ದಾರೆ. ಅಷ್ಟೇ ಅಲ್ಲದೆ ದುಷ್ಕರ್ಮಿಗಳ ಪತ್ತೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಡೆದಿದ್ದೇನು?
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಮಂಟಗಣಿ, ಕಳಸೂರು, ಹತ್ತಿಮತ್ತೂರು ಹಾಗೂ ಕಲ್ಲಕೋಟಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಶ್ವಾನಗಳ ಮೃತದೇಹಗಳು ಪತ್ತೆಯಾಗಿದ್ದು, ಅವುಗಳ ಮೇಲೆ ವಾಮಾಚಾರ ಮಾಡಿದ್ದಾರೆ. ಶ್ವಾನಗಳ ಬಾಯಿಗೆ ದಾರದಿಂದ ಕಟ್ಟಲಾಗಿದ್ದು, ಕೋಳಿಯ ರೆಕ್ಕೆಗಳು ಹಾಗೂ ಕುಂಕುಮ ಹಚ್ಚಿ ವಾಮಾಚಾರ ನಡೆಸಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ: ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂ ಇಯರ್ ಸಂಭ್ರಮದಲ್ಲಿದ್ದವರಿಗೆ ಶಾಕ್!
ಐದು ಹೆಣ್ಣು ಶ್ವಾನ, ನಾಲ್ಕು ಗಂಡು ಶ್ವಾನಗಳನ್ನ ಹತ್ಯೆಗೈದು ವಾಮಾಚಾರ ಮಾಡಿದ್ದಾರೆ. ಜಮೀನುಗಳಿಗೆ ತೆರಳುವ ಮೂರು ಪ್ರಮುಖ ರಸ್ತೆಗಳ ಪಕ್ಕದಲ್ಲೇ ಈ ಕೃತ್ಯ ಎಸಗಿರುವುದರಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ದುಷ್ಕರ್ಮಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ
ಜಮೀನಿಗೆ ತೆರಳಿದ ರೈತರು ಮತ್ತು ಸಾರ್ವಜನಿಕರು ವಾಮಾಚಾರ ನೋಡಿ ಆಘಾತಕ್ಕೊಳಗಾಗಿದ್ದಾರೆ. ಯಾವ ಉದ್ದೇಶಕ್ಕಾಗಿ ಈ ಕೃತ್ಯ ನಡೆಸಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅಮಾನವೀಯವಾಗಿ ಶ್ವಾನಗಳನ್ನು ಹತ್ಯೆ ಮಾಡಿ ವಾಮಾಚಾರ ನಡೆಸಲಾಗಿದ್ದು, ದುಷ್ಕರ್ಮಿಗಳ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲೊಂದು ವಿಚಿತ್ರ ಘಟನೆ: ರೀಲ್ಸ್ ಹುಚ್ಚಿಗೆ ತಂದೆಯನ್ನೇ ಚೀಲಕ್ಕೆ ತುಂಬಿ ಕೊರಿಯರ್ ಮಾಡಲು ಬಂದ ಮಗಳು!
ಸದ್ಯ ಈ ವಿಚಿತ್ರ ಘಟನೆಯಿಂದ ಗ್ರಾಮಸ್ಥರು ಮಾತ್ರ ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಈ ಘಟನೆ ಕುರಿತು ಸಮಗ್ರ ತನಿಖೆ ನಡೆಸಿ, ಕೃತ್ಯ ಎಸಗಿದವರನ್ನು ಶೀಘ್ರ ಪತ್ತೆ ಮಾಡಿ ಬಂಧಿಸುವಂತೆ ಸ್ಥಳೀಯರು ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




