ಪೂಜೆ ಹೆಸರಲ್ಲಿ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ ನಕಲಿ ಜ್ಯೋತಿಷಿ!
ಬೆಂಗಳೂರಿನಲ್ಲಿ ಪೂಜೆ ನೆಪದಲ್ಲಿ ವೃದ್ಧೆಗೆ ಬರೋಬ್ಬರಿ 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚಿಸಿದ ನಕಲಿ ಜ್ಯೋತಿಷಿಯೊಬ್ಬ, ತನ್ನ ಮೇಲೆ ಅಪಘಾತ ನಡೆದಿದೆ ಎಂದು ನಂಬಿಸಲು ಎಐ ವೀಡಿಯೋ ಬಳಸಿ ನಾಟಕವಾಡಿದ್ದಾನೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಖತರ್ನಾಕ್ ಜ್ಯೋತಿಷಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಮುಖ್ಯಾಂಶಗಳು
- ಬೆಂಗಳೂರಿನಲ್ಲಿ ಚೌಡೇಶ್ವರಿ ಪೂಜೆ ಹೆಸರಲ್ಲಿ 40 ಲಕ್ಷದ ಒಡವೆ ವಂಚನೆ.
- ಆಸ್ಪತ್ರೆ ಫುಟ್ಪಾತ್ ಜ್ಯೋತಿಷಿಯಿಂದ ವೃದ್ಧೆಗೆ ವಂಚಿಸಿದ ಖತರ್ನಾಕ್ ನಕಲಿ ಸ್ವಾಮೀಜಿ.
- ಎಐ ಅಪಘಾತ ವೀಡಿಯೋ ಕಳುಹಿಸಿ ವಂಚಕ ಜ್ಯೋತಿಷಿ ನಾಪತ್ತೆ.
ಬೆಂಗಳೂರು, ಸೆಪ್ಟೆಂಬರ್ 16: ಜ್ಯೋತಿಷ್ಯ ಹಾಗೂ ಚೌಡೇಶ್ವರಿ ಪೂಜೆಯ ನೆಪದಲ್ಲಿ ವೃದ್ಧೆಯೊಬ್ಬರಿಂದ ಬರೋಬ್ಬರಿ 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ, ಬಳಿಕ ತನಗೆ ಅಪಘಾತವಾಗಿದೆ ಎಂದು ಎಐ ವೀಡಿಯೋ ಕಳುಹಿಸಿ ನಕಲಿ ಜ್ಯೋತಿಷಿಯೊಬ್ಬ ವಂಚಿಸಿರುವ ರೋಚಕ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ನಡೆದಿದ್ದೇನು?
ಬ್ಯಾಟರಾಯನಪುರ ನಿವಾಸಿ, 62 ವರ್ಷದ ಶಾಂತಮ್ಮ ವಂಚನೆಗೊಳಗಾದ ಮಹಿಳೆ. ವೆಂಕಟೇಶ್ ಎಂಬ ಖತರ್ನಾಕ್ ಜ್ಯೋತಿಷಿ ಈ ಕೃತ್ಯ ಎಸಗಿದ್ದಾನೆ. ಮೂಲತಃ ವಿಕ್ಟೋರಿಯಾ ಆಸ್ಪತ್ರೆ ಫುಟ್ಪಾತ್ನಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ವೆಂಕಟೇಶ್ಗೆ, ಅನಾರೋಗ್ಯದ ಕಾರಣ ಆಸ್ಪತ್ರೆಗೆ ಬಂದು ಹೋಗುತ್ತಿದ್ದ ಶಾಂತಮ್ಮ ಅವರ ಪರಿಚಯವಾಗಿತ್ತು. ಅವರ ಕೌಟುಂಬಿಕ ಹಾಗೂ ಆರೋಗ್ಯ ಸಮಸ್ಯೆಗಳನ್ನು ಬಂಡವಾಳ ಮಾಡಿಕೊಂಡ ವಂಚಕ, ಮನೆಗೆ ಬಂದು ಚೌಡೇಶ್ವರಿ ಪೂಜೆ ಮಾಡುವ ನೆಪ ಹೂಡಿದ್ದ. ಕಾಕತಾಳೀಯವೆಂಬಂತೆ ಮಹಿಳೆಗೆ ಪೂಜೆಯ ನಂತರ ಆರೋಗ್ಯ ಚೇತರಿಸಿತ್ತು. ಬಳಿಕ ಮಗನ ಕುಡಿತ ಹಾಗೂ ಮಗಳ ಮದುವೆಯ ಬಗ್ಗೆಯೂ ಕೇಳಲು ಮುಂದಾಗಿದ್ದರು.
ಪ್ರತಿ ಅಮಾವಾಸ್ಯೆಗೆ ಒಡವೆ ಪಡೆದು ವಂಚನೆ
ಮನೆಯಲ್ಲಿರುವ ಚಿನ್ನಾಭರಣಗಳಿಗೆ ಪೂಜೆ ಮಾಡಿದರೆ ದೋಷ ನಿವಾರಣೆಯಾಗುತ್ತದೆ ಎಂದು ನಂಬಿಸಿದ್ದ ವೆಂಕಟೇಶ್, ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಬಂದು ಒಡವೆಗಳನ್ನು ತೆಗೆದುಕೊಂಡು ಹೋಗುತ್ತಿದ್ದ. ಹೀಗೆ ಕಳೆದ ಒಂದು ವರ್ಷದಿಂದ ಹಂತ ಹಂತವಾಗಿ ಸುಮಾರು 40 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದ.
ವರಮಹಾಲಕ್ಷ್ಮಿ ಹಬ್ಬಕ್ಕೆ ಪೂಜೆ: ಎಐ ವೀಡಿಯೋ ಡ್ರಾಮಾ!
ಕಳೆದ ಆಗಸ್ಟ್ 19 ರಂದು ವರಮಹಾಲಕ್ಷ್ಮಿ ಹಬ್ಬದ ಪೂಜೆಗೆ ಚಿನ್ನಾಭರಣಗಳನ್ನು ವಾಪಸ್ ನೀಡುವಂತೆ ಶಾಂತಮ್ಮ ಕೇಳಿದ್ದರು. ಇದರಿಂದ ಗಾಬರಿಗೊಂಡ ಜ್ಯೋತಿಷಿ, ತನಗೆ ಭೀಕರ ಅಪಘಾತವಾಗಿದೆ ಎಂದು ಬೇರೊಬ್ಬರಿಂದ ಕರೆ ಮಾಡಿಸಿ ನಾಟಕವಾಡಿದ್ದ. ಜೊತೆಗೆ ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿರುವಂತೆ ಎಐ ತಂತ್ರಜ್ಞಾನದಿಂದ ರಚಿಸಿದ (AI Generated) ನಕಲಿ ವೀಡಿಯೋ ಕಳುಹಿಸಿ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ.
ಸಂಶಯಗೊಂಡ ಶಾಂತಮ್ಮ ತಮ್ಮ ಮಕ್ಕಳಿಗೆ ವೀಡಿಯೋ ತೋರಿಸಿದಾಗ, ಅದು ಎಐ ಮೂಲಕ ಸೃಷ್ಟಿಸಿದ ಫೇಕ್ ವೀಡಿಯೋ ಎಂಬುದು ಬಯಲಾಗಿದೆ. ಕೂಡಲೇ ಅವರು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಖತರ್ನಾಕ್ ನಕಲಿ ಜ್ಯೋತಿಷಿಗಾಗಿ ಬಲೆ ಬೀಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




