ಗ್ರಾಹಕರೇ ಗಮನಿಸಿ: ಈ 20 ಪಟ್ಟಣಗಳಲ್ಲಿ ಸೆ. 17ರವರೆಗೆ ಬೆಸ್ಕಾಂ ಆನ್ಲೈನ್ ಸೇವೆಗಳಲ್ಲಿ ವ್ಯತ್ಯಯ
ಸಾಫ್ಟ್ವೇರ್ ಅಪ್ಗ್ರೇಡ್ ಮಾಡುವ ಕಾರಣ ಬೆಸ್ಕಾಂ ವ್ಯಾಪ್ತಿಯ 20 ಪಟ್ಟಣಗಳಲ್ಲಿ ಸೆಪ್ಟೆಂಬರ್ ಸೆಪ್ಟೆಂಬರ್ 17ರ ಮಧ್ಯರಾತ್ರಿವರೆಗೆ ಆನ್ಲೈನ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ. ಹೊಸ ವಿದ್ಯುತ್ ಸಂಪರ್ಕ, ಹೆಸರು ವರ್ಗಾವಣೆ, ಲೋಡ್ ಹೆಚ್ಚಳ ಹಾಗೂ ಆನ್ಲೈನ್ ಬಿಲ್ ಪಾವತಿ ಸೇರಿದಂತೆ ಹಲವು ಸೇವೆಗಳು ಈ ಅವಧಿಯಲ್ಲಿ ಲಭ್ಯವಿರುವುದಿಲ್ಲ. ಸೇವೆ ಸ್ಥಗಿತವಾಗಿರುವ ಪಟ್ಟಣಗಳ ವಿವರ ಇಲ್ಲಿದೆ.

ಮುಖ್ಯಾಂಶಗಳು
- 20 ಪಟ್ಟಣಗಳಲ್ಲಿ ಬೆಸ್ಕಾಂ ಆನ್ಲೈನ್ ಸೇವೆ ಸ್ಥಗಿತ
- ಸೆಪ್ಟೆಂಬರ್ 17ರವರೆಗೆ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ
- ತುರ್ತು ಸಮಸ್ಯೆಗಳಿಗೆ 1912 ಸಹಾಯವಾಣಿಗೆ ಕರೆ ಮಾಡಲು ಸಲಹೆ
ಬೆಂಗಳೂರು, ಸೆಪ್ಟೆಂಬರ್ 16: ಸಾಫ್ಟ್ವೇರ್ ಅಪ್ಗ್ರೇಡ್ ಹಿನ್ನೆಲೆಯಲ್ಲಿ ಬೆಸ್ಕಾಂ ವ್ಯಾಪ್ತಿಯ 20 ಪಟ್ಟಣಗಳಲ್ಲಿ ಆನ್ಲೈನ್ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ. ಸೆಪ್ಟೆಂಬರ್ 15ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 17ರ ಮಧ್ಯರಾತ್ರಿವರೆಗೆ ಈ ಸೇವೆಗಳಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಎಕ್ಸ್ ಸಂದೇಶದ ಮೂಲಕ ತಿಳಿಸಿದೆ. ಇಂಟಿಗ್ರೇಟೆಡ್ ಪವರ್ ಡೆವಲಪ್ಮೆಂಟ್ ಸ್ಕೀಮ್ (IPDS) ಐಟಿ ಹಂತ-2 ಯೋಜನೆಯಡಿ 20 ಗುರುತಿಸಲಾದ ಪಟ್ಟಣಗಳಲ್ಲಿ ಅಡ್ವಾನ್ಸ್ಡ್ ಸಾಫ್ಟ್ವೇರ್ ಅಪ್ಲಿಕೇಶನ್ ಅಳವಡಿಸಲಾಗುತ್ತಿದೆ. ಇದಕ್ಕಾಗಿ ಪ್ರಸ್ತುತ ಬಳಕೆಯಲ್ಲಿರುವ TRM (Total Revenue Management) ಸಾಫ್ಟ್ವೇರ್ ಬದಲಾಯಿಸಲಾಗುತ್ತಿದ್ದು, ಗ್ರಾಹಕರ ದತ್ತಾಂಶವನ್ನು ಹೊಸ ಸಾಫ್ಟ್ವೇರ್ಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಈ ಅವಧಿಯಲ್ಲಿ ಹೊಸ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಕೆ, ಹೆಸರು ಬದಲಾವಣೆ, ಲೋಡ್ ಹೆಚ್ಚಳಕ್ಕೆ ಮನವಿ ಹಾಗೂ ಆನ್ಲೈನ್ ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಪ್ರಮುಖ ಆನ್ಲೈನ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಬೆಸ್ಕಾಂ ಎಕ್ಸ್ ಸಂದೇಶ
ಸಾಫ್ಟ್ವೇರ್ ಉನ್ನತೀಕರಣದ ಹಿನ್ನೆಲೆಯಲ್ಲಿ ಬೆಸ್ಕಾಂ ವ್ಯಾಪ್ತಿಯ 20 ಪಟ್ಟಣಗಳಲ್ಲಿ ಸೆ.15ರ ಮಧ್ಯರಾತ್ರಿಯಿಂದ ಸೆ.17ರ ಮಧ್ಯರಾತ್ರಿವರೆಗೆ ಆನ್ಲೈನ್ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ.ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗಾಗಿ, ಬೆಸ್ಕಾಂ 24×7 ಸಹಾಯವಾಣಿ 1912ಕ್ಕೆ ಕರೆಮಾಡಿ pic.twitter.com/f4Ylxfc97K
— Namma BESCOM | ನಮ್ಮ ಬೆಸ್ಕಾಂ (@NammaBESCOM) September 15, 2026
ಯಾವೆಲ್ಲ ಪಟ್ಟಣಗಳಲ್ಲಿ ಬೆsಸ್ಕಾಂ ಆನ್ಲೈನ್ ಸೇವೆ ಇರುವುದಿಲ್ಲ?
ಬಾಗೇಪಲ್ಲಿ, ದೇವನಹಳ್ಳಿ, ಗುಡಿಬಂಡೆ, ಮಾಗಡಿ, ಮಾಲೂರು, ನೆಲಮಂಗಲ, ಶ್ರೀನಿವಾಸಪುರ, ವಿಜಯಪುರ, ಚನ್ನಗಿರಿ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಹೊಳಲ್ಕೆರೆ, ಹೊನ್ನಾಳಿ, ಹೊಸದುರ್ಗ, ಜಗಳೂರು, ಕೊರಟಗೆರೆ, ಮಧುಗಿರಿ, ಮೊಳಕಾಲ್ಮೂರು, ಪಾವಗಡ ಹಾಗೂ ತುರುವೇಕೆರೆ ಪಟ್ಟಣಗಳಲ್ಲಿ ಸೇವೆಗಳು ಸ್ಥಗಿತಗೊಳ್ಳಲಿವೆ.
ಆದರೆ ವಿದ್ಯುತ್ ಸಂಬಂಧಿತ ತುರ್ತು ಸಮಸ್ಯೆಗಳಿಗೆ ಬೆಸ್ಕಾಂನ 24×7 ಸಹಾಯವಾಣಿ 1912ಕ್ಕೆ ಕರೆ ಮಾಡಬಹುದು ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




