ಮುಳ್ಳಯ್ಯನಗಿರಿ: ಸ್ವಂತ ವಾಹನಗಳಿಗೆ ಬಿತ್ತು ಬ್ರೇಕ್, ಸರ್ಕಾರಿ ವಾಹನವೇ ಗತಿ! ಸಂಚಾರ ದಟ್ಟಣೆ ತಪ್ಪಿಸಲು ಜಿಲ್ಲಾಡಳಿತದಿಂದ ಇನ್ನೂ ಕೆಲ ರೂಲ್ಸ್

ನೀವು ಬೆಂಗಳೂರು-ಮೈಸೂರು ಸೇರಿದಂತೆ ಎಲ್ಲಿಂದಲೇ ನಿಮ್ಮ ಗಾಡಿಯಲ್ಲಿ ಬಂದ್ರು ಚಿಕ್ಕಮಗಳೂರಿನಿಂದ ಗಿರಿಭಾಗಕ್ಕೆ ಜಿಲ್ಲಾಡಳಿತದ ಗಾಡಿಗಳಲ್ಲೇ ಹೋಗಬೇಕು.

ಮುಳ್ಳಯ್ಯನಗಿರಿ: ಸ್ವಂತ ವಾಹನಗಳಿಗೆ ಬಿತ್ತು ಬ್ರೇಕ್, ಸರ್ಕಾರಿ ವಾಹನವೇ ಗತಿ! ಸಂಚಾರ ದಟ್ಟಣೆ ತಪ್ಪಿಸಲು ಜಿಲ್ಲಾಡಳಿತದಿಂದ ಇನ್ನೂ ಕೆಲ ರೂಲ್ಸ್
ಮುಳ್ಳಯ್ಯನಗಿರಿ
Follow us
| Updated By: ಸಾಧು ಶ್ರೀನಾಥ್​

Updated on:Jan 11, 2023 | 3:51 PM

ಚಿಕ್ಕಮಗಳೂರು: ರಾಜ್ಯದ ಎತ್ತರದ ಶಿಖರ, ಮುಗಿಲು ಚುಂಬಿಸೋ ಗಿರಿ ಕಾನನಗಳಿಂದ ಕಂಗೊಳಿಸೋ ಮುಳ್ಳಯ್ಯನ ಗಿರಿಯ ನೋಡೋಕೆ ವೀಕೆಂಡ್ ಗಳಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತೆ. ಆದ್ರೆ ಸಹಸ್ರಾರು ವಾಹನಗಳ ಆಗಮನದಿಂದ ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಇದೆ. ಇದರಿಂದ ವಾಹನ ಸವಾರರ ಹೈರಾಣಾಗಿದ್ದಾರೆ. ಕೊಂಚ ಯಡವಟ್ಟಾದ್ರು ಪ್ರಪಾತಕ್ಕೇ ಬೀಳೋ ಆತಂಕದ ನಡುವೆ ಸಾಗೋ ಸಾವಿನ ಸಂಚಾರ ಸಾಕಪ್ಪಾ ಸಾಕು ಎಂದು ಅದೆಷ್ಟೋ ಜನರಿಗೆ ಅನ್ನಿಸಿದ್ದಿದೆ. ಆದ್ರೆ ಇನ್ಮುಂದೆ ಈ ಕಿರಿ ಕಿರಿ ಇರೋದಿಲ್ಲ, ರಾಜ್ಯದ ಪ್ರಕೃತಿ ಪ್ರವಾಸೋದ್ಯಮದ ಹಾಟ್ ಸ್ಪಾಟ್ ಮುಳ್ಳಯ್ಯನ ಗಿರಿಯಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡೋಕೆ ಜಿಲ್ಲಾಡಳಿತ ಹೊಸ ರೂಲ್ಸ್ ಜಾರಿಮಾಡಿದೆ.

ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ, ಸೌಂದರ್ಯದ ಗಣಿ ಕಾಫಿನಾಡ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಮಾಣಿಕ್ಯಾಧಾರ, ಗಾಳಿಕೆರೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಇನ್ಮುಂದೆ ಟ್ರಾಫಿಕ್ ಜಾಮ್  ಸಮಸ್ಯೆ ಇರೋದಿಲ್ಲ. ಹಾವು-ಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಪ್ರವಾಸಿಗರು ಬೇಕಾಬಿಟ್ಟಿ ಗಾಡಿ ಹೊಡೀತಿದ್ರು. ಎಲ್ಲೆಂದರಲ್ಲಿ ಪಾರ್ಕ್ ಮಾಡಿ ಟ್ರಾಫಿಕ್ ಜಾಮ್ ಕಿರಿ-ಕಿರಿ ಮಾಡ್ತಿದ್ರು. ಗಾಡಿ ಕೆಳಗೆ ಇಳಿದ್ರೆ ಹಾಳಾಗುತ್ತೆ ಎಂಬಂತೆ ಕಿರಿದಾದ ರಸ್ತೆಯಲ್ಲಿ ಅರ್ಧ ರಸ್ತೆಗೆ ಪಾರ್ಕ್ ಮಾಡ್ತಿದ್ರು. ಮುಳ್ಳಯ್ಯನಗಿರಿಯಲ್ಲಿ ಟ್ರಾಫಿಕ್ ಜಾಮ್ ಆದ್ರೆ ಗಂಟೆಗಟ್ಟಲೇ ಕಾಯಬೇಕಿತ್ತು. ಸದ್ಯ ಈ ನಿತ್ಯದ ಗೋಳು ತಪ್ಪಿಸಲು ಇದೀಗ ಜಿಲ್ಲಾಡಳಿತವೇ ಗಿರಿಭಾಗದ ಪ್ರವಾಸಿ ತಾಣಗಳಿಗೆ ಪರ್ಮಿಟ್ ವಾಹನಗಳನ್ನ ಬಿಡೋದಕ್ಕೆ ತೀರ್ಮಾನಿಸಿದೆ.

ನೀವು ಬೆಂಗಳೂರು-ಮೈಸೂರು ಸೇರಿದಂತೆ ಎಲ್ಲಿಂದಲೇ ನಿಮ್ಮ ಗಾಡಿಯಲ್ಲಿ ಬಂದ್ರು ಚಿಕ್ಕಮಗಳೂರಿನಿಂದ ಗಿರಿಭಾಗಕ್ಕೆ ಜಿಲ್ಲಾಡಳಿತದ ಗಾಡಿಗಳಲ್ಲೇ ಹೋಗಬೇಕು. ಜೊತೆಗೆ, ಎಲ್ಲೆಂದರಲ್ಲಿ ಗಾಡಿ ಪಾರ್ಕ್ ಮಾಡ್ಕೊಂಡು ರೋಡ್ ಮಧ್ಯೆ ಮದ್ಯ ಸೇವಿಸ್ಕೊಂಡು ಡ್ಯಾನ್ಸ್ ಮಾಡೋದು ಮಾಡುವ ಹಾಗಿಲ್ಲ. ನೀಟಾಗಿ ಹೋಗಿ ಪ್ರಕೃತಿ ಸೌಂದರ್ಯವನ್ನ ಸವಿದು ವಾಪಸ್ ಬರಬೇಕು.

ಇದನ್ನೂ ಓದಿ: Auto Expo 2023: ಭರ್ಜರಿ ಮೈಲೇಜ್ ನೀಡುವ ಮಾರುತಿ ಸುಜುಕಿ ಇವಿಎಕ್ಸ್ ಅನಾವರಣ

ಸ್ವಂತ ವಾಹನಗಳಲ್ಲಿ ಬಂದ್ರು ಕೂಡ ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರದಲ್ಲಿ ಐದು ಎಕರೆ ಜಾಗದಲ್ಲಿ ಜಿಲ್ಲಾಡಳಿತವೇ ಸಿದ್ಧಗೊಳಿಸುತ್ತಿರುವ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಬೇಕು. ಅಲ್ಲಿ ಎಲ್ಲಾ ಸೌಲಭ್ಯವೂ ಇರಲಿದೆ. ನೀವು ನಿಮ್ಮ ಗಾಡಿಗಳನ್ನ ಅಲ್ಲೇ ಬಿಟ್ಟು ಜಿಲ್ಲಾಡಳಿತದ ಪರ್ಮಿಟ್ ಗಾಡಿಗಳಲ್ಲಿ ಹೋಗಬೇಕು. ಸ್ವಂತ ವಾಹನಗಳಲ್ಲಿ ಹೋಗೋ ಪ್ರವಾಸಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್, ಬಾಟಲಿಗಳನ್ನ ಎಸೆಯುತ್ತಿದ್ದರು. ಆದ್ರೆ, ಇನ್ಮುಂದೆ ಅವೆಲ್ಲಕ್ಕೂ ಬ್ರೇಕ್ ಬೀಳಲಿದೆ. ತಂಪು ಪಾನಿಯಗಳ ಬಾಟ್ಲಿ, ಚಿಪ್ಸ್, ಕಡ್ಲೇಬೀಜ, ಬಟಾಣಿ, ಎಣ್ಣೆ-ಸೈಡ್ಸು ಇವೆಲ್ಲದ್ದಕ್ಕೂ ಅನುಮತಿ ಇರೋದಿಲ್ಲ. ಪ್ರವಾಸಿಗರು ತಮ್ಮೊಂದಿಗೆ ಇವುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಬರೀಗೈಲಿ ಹೋಗ್ಬೇಕು. ಪ್ರಕೃತಿ ಸೌಂದರ್ಯವನ್ನ ನೋಡ್ಕಂಡ್ ವಾಪಸ್ ಬರ್ಬೇಕು. ಇನ್ಮುಂದೆ ಮುಳ್ಳಯ್ಯನಗಿರಿ ಭಾಗದಲ್ಲಿ ಟ್ರಾಫಿಕ್ ಜಾಮ್ ಇರುವುದಿಲ್ಲ.

ಪ್ರವಾಸದ ಹೆಸರಲ್ಲಿ ಗಿರಿಭಾಗದಲ್ಲಿ ಮೋಜು-ಮಸ್ತಿ ಮಾಡ್ತಾರೆ ಅನ್ನೋ ಆರೋಪವೂ ಇತ್ತು. ಗಿರಿಭಾಗಕ್ಕೆ ಸ್ವಂತ  ವಾಹನಗಳಿಗೆ ಬ್ರೇಕ್ ಹಾಕಿ ಎಂಬ ಪರಿಸರವಾದಿಗಳ ಆಗ್ರಹವೂ ಇತ್ತು. ಇದೀಗ, ಕಾಲ ಕೂಡಿ ಬಂದಿದ್ದು ಶನಿವಾರ-ಭಾನುವಾರವಂತೂ ಮುಳ್ಳಯ್ಯನಗಿರಿಯಲ್ಲಿ ಹೇಳತೀರದ ಟ್ರಾಫಿಕ್ ಇರುತ್ತಿತ್ತು. ಪ್ಲಾಸ್ಟಿಕ್ ಕೂಡ ಅಷ್ಟೆ ಇರುತ್ತಿತ್ತು. ಇದೀಗ, ಜಿಲ್ಲಾಡಳಿತದ ಈ ನಡೆ ಸ್ಥಳೀಯರಿಗೆ ಖುಷಿ ತಂದಿದೆ. ಗಿರಿಭಾಗದಲ್ಲಿ ನೂರಾರು ಹೋಂಸ್ಟೇ, ರೆಸಾರ್ಟ್‍ನವರ ಮಧ್ಯೆ ಜಿಲ್ಲಾಡಳಿತದ ಈ ತೀರ್ಮಾನ ಎಷ್ಟು ಪರಿಣಾಮಕಾರಿಯಾಗಿ, ಯಾವಾಗ ಕಾರ್ಯರೂಪಕ್ಕೆ ಬರುತ್ತೆ ಅನ್ನೋದನ್ನ ಕಾದುನೋಡ್ಬೇಕು.

ವರದಿ: ಮಂಜುನಾಥ್-ಕೆ.ಬಿ, ಟಿವಿ9

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:46 pm, Wed, 11 January 23