ರಾಜ್ಯದಲ್ಲಿ ಹೆಚ್ಚಾದ ಡೆಂಗ್ಯೂ ಪ್ರಕರಣಗಳು; ಎಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ

| Updated By: ಆಯೇಷಾ ಬಾನು

Updated on: Jun 24, 2024 | 5:02 PM

ಚಿಕ್ಕಮಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು 489ಕ್ಕೆ ಏರಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಆತಂಕ ಹೆಚ್ಚುತ್ತಿದೆ. ಈವರೆಗೆ ಒಟ್ಟು 211 ಪ್ರಕರಣಗಳು ದಾಖಲಾಗಿದೆ. ಗ್ರಾಮೀಣ ಭಾಗದಲ್ಲಿ ರಬ್ಬರ್, ಅಡಕೆ ತೋಟಗಳೇ ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ಲಾರ್ವಾ ಉತ್ಪತ್ತಿ ತಾಣಗಳಾಗುತ್ತಿದ್ರೆ. ನಗರದಲ್ಲಿ ನೀರು ನಿಲ್ಲುವ ಹೂವಿನ ಕುಂಡ, ಟೈರ್, ತೆರೆದಿಡುವ ನೀರಿನ ಟ್ಯಾಂಕ್, ಟೆರೇಸ್ ಮೇಲಿರುವ ಒವರ್ ಹೆಡ್ ಟ್ಯಾಂಕ್ ಕಾರಣವಾಗುತ್ತಿದೆ.

ರಾಜ್ಯದಲ್ಲಿ ಹೆಚ್ಚಾದ ಡೆಂಗ್ಯೂ ಪ್ರಕರಣಗಳು; ಎಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ
ಸಾಂದರ್ಭಿಕ ಚಿತ್ರ
Follow us on

ಮಂಗಳೂರು, ಜೂನ್.24: ರಾಜ್ಯದಲ್ಲಿ ಮಹಾಮಾರಿ ಡೆಂಗ್ಯೂ (dengue) ಆರ್ಭಟ ಹೆಚ್ಚಾಗುತ್ತಿದೆ. ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ರಾಜ್ಯದ ಹವಮಾನದಿಂದಾಗಿ ಈ ವರ್ಷ ರಾಜ್ಯದಲ್ಲಿ ಡೆಂಗ್ಯೂ ಕೇಸ್ ಗಳ ಸಂಖ್ಯೆ 59% ಹೆಚ್ಚಾಗಿದೆ. ಪ್ರಕರಣಗಳು ರಾಜ್ಯದಲ್ಲಿ 6 ಸಾವಿರ ಗಡಿ ದಾಟಿದೆ. ಕಡಲನಗರಿ ಮಂಗಳೂರಿನಲ್ಲಿಯು ಕಳೆದ ವರ್ಷಕ್ಕಿಂತ ಈ ಬಾರಿ ಎರಡು ಪಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಅಕಾಲಿಕವಾಗಿ ಮಳೆ ಬಂದು ಹೋಗುತ್ತಿರುವುದು, ಜನ ಸ್ವಚ್ಛತೆ ಆರೋಗ್ಯ ನಿಯಮ ಪಾಲಿಸದಿರುವುದು ಡೆಂಗ್ಯೂ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಚಿಕ್ಕಮಗಳೂರಿನಲ್ಲಿ (Chikkamagaluru) ಡೆಂಗ್ಯೂ ಪ್ರಕರಣಗಳು 489ಕ್ಕೆ ಏರಿವೆ.

ಕಳೆದ ವರ್ಷ 2023 ಜನವರಿಯಿಂದ ಜೂನ್ ವೇಳೆಗೆ 2003 ಕೇಸ್ ದಾಖಲಾಗಿತ್ತು. ಆದರೆ 2024 ಜೂನ್ ವರೆಗೆ 4886 ಪ್ರಕರಣಗಳು ದಾಖಲಾಗಿವೆ. ಬರೋಬ್ಬರಿ 59 % ಡೆಂಗ್ಯೂ ಕೇಸ್ ಏರಿಕೆ ಕಂಡಿದೆ.  ಬೆಂಗಳೂರು – 2457 ಕೇಸ್​ ಪತ್ತೆಯಾಗಿದೆ.

ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಮಾತನಾಡಿದ್ದು, ರಾಜ್ಯದಲ್ಲಿ 60% ರಷ್ಟು ಡೆಂಗ್ಯೂ ಕೇಸ್ ಏರಿಕೆಯಾಗಿದೆ. ಎಲ್ಲೆಲ್ಲಿ ಮಳೆ ಬಿಟ್ಟು ಬಿಟ್ಟು ಬರ್ತಿದೆ ಅಲ್ಲಿ ಡೆಂಗ್ಯೂ ಕೇಸ್ ಏರಿಕೆ ಕಂಡಿದೆ. ಬೆಂಗಳೂರು ಸೇರಿದ್ದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೇಸ್ ಏರಿಕೆ ಕಂಡಿದೆ. ಸ್ಲಮ್ ಗಳಲ್ಲಿ ಹಾಗೂ ನೀರು ನಿಂತ ಪ್ರದೇಶಗಳಲ್ಲಿ ಡೆಂಘಿ ಕೇಸ್ ಏರಿಕೆಯಾಗಿದೆ. ತೀವ್ರ ಜ್ವರ ಕಂಡು ಬಂದ್ರೆ ನಿರ್ಲಕ್ಷ್ಯ ಬೇಡ. ಹೈ ಫೀವರ್ ಕಂಡು ಬಂದ್ರೆ ಆಸ್ಪತ್ರೆ ದಾಖಲಾಗುವಂತೆ ಸೂಚನೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಆತಂಕ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ಜ್ವರ, ಮೈ-ಕೈ ನೋವು, ತಲೆನೋವು ಸೇರಿದಂತೆ ಡೆಂಗ್ಯೂ ರೋಗ ಲಕ್ಷಣವುಳ್ಳ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಈವರೆಗೆ ಒಟ್ಟು 211 ಪ್ರಕರಣಗಳು ದಾಖಲಾಗಿದೆ. ಗ್ರಾಮೀಣ ಭಾಗದಲ್ಲಿ ರಬ್ಬರ್, ಅಡಕೆ ತೋಟಗಳೇ ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ಲಾರ್ವಾ ಉತ್ಪತ್ತಿ ತಾಣಗಳಾಗುತ್ತಿದ್ರೆ. ನಗರದಲ್ಲಿ ನೀರು ನಿಲ್ಲುವ ಹೂವಿನ ಕುಂಡ, ಟೈರ್, ತೆರೆದಿಡುವ ನೀರಿನ ಟ್ಯಾಂಕ್, ಟೆರೇಸ್ ಮೇಲಿರುವ ಒವರ್ ಹೆಡ್ ಟ್ಯಾಂಕ್ ಕಾರಣವಾಗುತ್ತಿದೆ. ಇದರ ಜೊತೆ ಈ ಬಾರಿ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು ಇದು ಸಹ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ತಂಡಗಳನ್ನು ರಚಿಸಿಕೊಂಡು ರೋಗ ಪತ್ತೆಯ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಲಂಚಗುಳಿತನ ತಾಂಡವಾಡುತ್ತಿದೆ ಅಂತ ಕುಮಾರಸ್ವಾಮಿಗೆ ಗೊತ್ತಾಗಲು ಶಿವಕುಮಾರ್ ಬಳಸಿದ ಟ್ರಿಕ್ ಹೇಗಿತ್ತು ಗೊತ್ತಾ?

ತಿಳಿನೀರಿನಲ್ಲಿ ಉತ್ಪತ್ತಿಯಾಗುವ ಈಡಿಸ್ ಈಜಿಪ್ಟ್ ಎಂಬ ಸೊಳ್ಳೆಯೇ ಡೆಂಘೀ ಹರಡಲು ಕಾರಣ. ಹಗಲು ಹೊತ್ತಿನಲ್ಲಿ ಕಚ್ಚುವ ಈ ಸೊಳ್ಳೆ ನೀರಿನಲ್ಲಿ ಮೊಟ್ಟೆಯಿಟ್ಟು ಸಂತಾನೋತ್ಪತ್ತಿ ಮಾಡುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು, ಗರ್ಭಿಣಿಯರು, ವೃದ್ಧರು, ರೋಗಿಗಳು ಎಚ್ಚರಿಕೆ ಇರಬೇಕಾಗುತ್ತೆ. ಡೆಂಘೀ ಶಾಕ್ ಸಿಂಡ್ರೋಮ್‌ನಿಂದ ರೋಗಿಗಳು ಸಾವಿಗೀಡಾಗುವ ಸಾಧ್ಯತೆಗಳು ಹೆಚಾಗಿರುತ್ತೆ.

ಸದ್ಯ ಆರೋಗ್ಯ ಇಲಾಖೆ ಸೊಳ್ಳೆ ನಿಯಂತ್ರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ರ್ಯಾಪಿಡ್ ಟೆಸ್ಟಿಂಗ್ ಟೀಮ್‌ಗಳನ್ನು ರಚಿಸಿ ತೊಟ್ಟಿಗಳು, ಕೆರೆಗಳು, ನೀರು ನಿಲ್ಲುವ ಜಾಗಗಳಲ್ಲಿ ಲಾರ್ವಗಳನ್ನು ನಾಶಪಡಿಸಲು ಗಪ್ಪಿ ಮೀನುಗಳನ್ನು ಬಿಡಲಾಗುತ್ತಿದೆ. ಒಟ್ಟಿನಲ್ಲಿ ಡೆಂಗೆ ಮಹಮಾರಿ ನಿಯಂತ್ರಣದ ಬಗ್ಗೆ ಜನ ಇನ್ನಷ್ಟು ಜಾಗೃತರಾಗಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:54 pm, Mon, 24 June 24