ಚಿಕ್ಕಮಗಳೂರಿನಲ್ಲಿ ದಾಖಲೆ ಪ್ರಮಾಣದ ಮಳೆ: 533 ಹೆಕ್ಟೇರ್ ತೋಟಗಾರಿಕಾ ಬೆಳೆ ನಾಶ, ಆರೆಂಜ್ ಅಲರ್ಟ್

ಚಿಕ್ಕಮಗಳೂರು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಊಹೆಗೂ ನಿಲುಕದೇ ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಮುಂದುವರೆದಿದೆ.

ಚಿಕ್ಕಮಗಳೂರಿನಲ್ಲಿ ದಾಖಲೆ ಪ್ರಮಾಣದ ಮಳೆ: 533 ಹೆಕ್ಟೇರ್ ತೋಟಗಾರಿಕಾ ಬೆಳೆ ನಾಶ, ಆರೆಂಜ್ ಅಲರ್ಟ್
ಚಿಕ್ಕಮಗಳೂರಿನಲ್ಲಿ ಮಳೆ
Edited By: ಆಯೇಷಾ ಬಾನು

Updated on: Jul 15, 2022 | 9:16 PM

ಚಿಕ್ಕಮಗಳೂರು: ಕಳೆದ ಎರಡು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗ್ತಿದೆ. ಜಿಲ್ಲೆಯ ವಾಡಿಕೆ ಮಳೆ 762.7 ಮಿಲಿ ಮೀಟರ್ ನಷ್ಟಿದ್ದು, ಸದ್ಯ 1157.7 ಮಿಲಿ ಮೀಟರ್ ಮಳೆಯಾಗಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ದೇವರಮನೆಯಲ್ಲಿ ದಾಖಲೆ ಪ್ರಮಾಣದಲ್ಲಿ 375 ಮಿಲಿ ಮೀಟರ್ ಮಳೆ ಒಂದೇ ದಿನದಲ್ಲಿ ದಾಖಲಾಗಿದೆ. ಶೃಂಗೇರಿ ತಾಲೂಕಿನಲ್ಲೂ ಕೂಡ ಬಿಡದೆ ಮಳೆ ಸುರಿಯುತ್ತಿದ್ದು ಜನರು ಆತಂಕಗೊಂಡಿದ್ದಾರೆ.

ಮಳೆಗೆ ಕೊಚ್ಚಿ ಹೋದ ಹೆದ್ದಾರಿ

ಶೃಂಗೇರಿ-ಆಗುಂಬೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಕೊಚ್ಚಿ ಹೋಗಿದೆ. ಸುಮಾರು 200 ಮೀಟರ್ ಉದ್ದ, 500 ಮೀಟರ್ ರಸ್ತೆ ಹಾಳಾಗಿದ್ದು, ಬೃಹತ್ ಮರಗಳು ಧರಶಾಹಿಯಾಗಿವೆ. 2019ರ ಜಲಪ್ರಳಯವನ್ನ ಮೀರಿಸುವ ರೀತಿಯಲ್ಲಿ ಅನಾಹುತ ಸಂಭವಿಸಿದ್ದು ಶೃಂಗೇರಿ ಜನತೆ ಬೆಚ್ಚಿಬಿದ್ದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ 290 ಮನೆಗಳು ಮಳೆಯ ಹೊಡೆತಕ್ಕೆ ಕುಸಿದು ಬಿದ್ದಿವೆ. ಕಳೆದ 24 ಗಂಟೆಯಲ್ಲೇ ಬರೋಬ್ಬರಿ 48 ಮನೆಗಳು ಕೊಚ್ಚಿ ಹೋಗಿವೆ. ಶೃಂಗೇರಿಯಲ್ಲಿ ಗುಡ್ಡವೇ ಸ್ಫೋಟವಾಗಿ ಸಾಹಿತಿ ಗಣೇಶ್ ಹೆಗ್ಡೆ ಎಂಬುವರ ಮನೆಗೆ ಹಾನಿಯಾಗಿದ್ದು, 24 ಗಂಟೆ ಕಳೆದರೂ ಮನೆ ಒಳಗೆ ಕೆಸರಿನ ರಾಡಿ ಹೊಳೆಯಂತೆ ಹರಿಯುತ್ತಿರುವುದು ಮಳೆಯ ಭೀಕರತೆಗೆ ಸಾಕ್ಷಿಯಾಗಿದೆ.

ಕಾಫಿನಾಡಲ್ಲಿ 533 ಹೆಕ್ಟೇರ್ ತೋಟಗಾರಿಕಾ ಬೆಳೆ ನಾಶ

ಕಳೆದ 24 ಗಂಟೆಯಲ್ಲಿ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಕಾಫಿ, ಅಡಿಕೆ, ಮೆಣಸು ಬೆಳೆ ಮಳೆಗೆ ಆಹುತಿಯಾಗಿದೆ. 533 ಹೆಕ್ಟೇರ್ ತೋಟಗಾರಿಕಾ ಬೆಳೆ ನಾಶವಾಗಿದೆ. ಇದಿಷ್ಟೇ ಅಲ್ಲದೇ ಜಿಲ್ಲೆಯ ಹಲವೆಡೆ ಭೂ ಕುಸಿತ, ಗುಡ್ಡ ಕುಸಿತ ಘಟನೆಗಳು ಸಂಭವಿಸಿದ್ದು, ಜನರು ಮನೆ ಬಿಟ್ಟು ಹೊರಗಡೆ ಬರಲು ಹೆದರುವಂತಾಗಿದೆ.

ಜಿಲ್ಲೆಯಲ್ಲಿ ಒಟ್ಟು 550ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್ ಪುರ ತಾಲೂಕಿನ ನೂರಾರು ಗ್ರಾಮಗಳು ಕಗ್ಗತ್ತಲಿನಲ್ಲಿ ಮುಳುಗಿವೆ. ನೂರಾರು ಕಿಲೋಮೀಟರ್ ಲೋಕೋಪಯೋಗಿ ರಸ್ತೆ ಡ್ಯಾಮೇಜ್ ಆಗಿದೆ, 20 ಕಡೆ ಸೇತುವೆಗಳು ಕುಸಿದಿವೆ. ಗ್ರಾಮೀಣ ಭಾಗದ ಅನೇಕ ಕಡೆಗಳಲ್ಲಿ ರಸ್ತೆಗಳೇ ಕೊಚ್ಚಿ ಹೋಗಿದ್ದು, ಗ್ರಾಮ ಗ್ರಾಮಗಳ ನಡುವಿನ ಸಂಪರ್ಕವೇ ಕಡಿತಗೊಂಡಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಿಲ್ಲೆಯಾದ್ಯಂತ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೊರಡಿಸಿ ಡಿಸಿ ಆದೇಶ ಹೊರಡಿಸಿದ್ದಾರೆ.

ಶಿರಾಡಿ ಘಾಟ್ನಲ್ಲಿ ವಾಹನ ಸಂಚಾರಕ್ಕೆ ಕಂಪ್ಲೀಟ್ ಬ್ರೇಕ್ ಬಿದ್ದಿರುವುದರಿಂದ ಸಾವಿರಾರು ವಾಹನಗಳು ಚಾರ್ಮಾಡಿ ಘಾಟ್ ನಲ್ಲಿ ಸಂಚರಿಸುತ್ತಿವೆ. ಚಾರ್ಮಾಡಿ ಘಾಟ್ ನಲ್ಲೂ ಕೂಡ ಹಲವೆಡೆ ರಸ್ತೆ, ಗುಡ್ಡ ಕುಸಿಯುವ ಭೀತಿ ಎದುರಾಗಿರುವುದರಿಂದ ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಆತಂಕ ಹೆಚ್ಚಾಗಿದೆ. ಅಲ್ಲದೇ ಈಗಾಗಲೇ 2019ರಲ್ಲಿ ಸುರಿದ ಮಹಾಮಳೆಯಿಂದ ಚಾರ್ಮಾಡಿ ಘಾಟ್ ಕೂಡ ನಲುಗಿ ಹೋಗಿದ್ದು, ತನ್ನ ಸಾಮರ್ಥ್ಯವನ್ನ ಕಳೆದುಕೊಂಡಿದೆ. ಈ ಮಾರ್ಗದಲ್ಲಿ ಒಂದೇ ಸಮನೆ ವಾಹನ ಸಂಚಾರ ಹೆಚ್ಚಾದರೆ ಚಾರ್ಮಾಡಿ ಘಾಟ್ ಮೇಲೆ ಮತ್ತಷ್ಟು ಒತ್ತಡ ಬೀಳಲಿದ್ದು, ದಕ್ಷಿಣ ಕನ್ನಡ-ಚಿಕ್ಕಮಗಳೂರು ಸಂಪರ್ಕಿಸುವ ಏಕೈಕ ಮಾರ್ಗಕ್ಕೂ ಗಂಡಾಂತರ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

ನಾಳೆ ಆರೆಂಜ್ ಅಲರ್ಟ್

ನಾಳೆ ಚಿಕ್ಕಮಗಳೂರು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಊಹೆಗೂ ನಿಲುಕದೇ ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಮುಂದುವರೆದಿದೆ. ಒಟ್ಟಿನಲ್ಲಿ ಕಾಫಿನಾಡಿನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಜನರು ಮನೆ ಬಿಟ್ಟು ಹೊರಗಡೆ ಬರುವುದಕ್ಕೂ ಯೋಚನೆ ಮಾಡುವಂತಾಗಿದೆ.

Web contact

TV9 Kannada

Read More
Follow Us