ಎರಡು ಸರ್ಕಾರಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 20ಕ್ಕೂ ಹೆಚ್ಚು ಜನರಿಗೆ ಗಾಯ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದ ಬಳಿ ಎರಡು ಸರ್ಕಾರಿ ಬಸ್ಸುಗಳ ಮಧ್ಯೆ ಅಪಘಾತ ಸಂಭವಿಸಿದೆ. ಎರಡೂ ಬಸ್​ಗಳು ಮುಖಾಮುಖಿ ಡಿಕ್ಕಿಯಾಗಿದ್ದರಿಂದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ.

ಎರಡು ಸರ್ಕಾರಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 20ಕ್ಕೂ ಹೆಚ್ಚು ಜನರಿಗೆ ಗಾಯ
ಬಸ್​ ಅಪಘಾತ
Updated By: ರಮೇಶ್ ಬಿ. ಜವಳಗೇರಾ

Updated on: Dec 10, 2023 | 3:18 PM

ಚಿಕ್ಕಮಗಳೂರು , (ಡಿಸೆಂಬರ್ 10): ಎರಡು ಸರ್ಕಾರಿ ಬಸ್ಸುಗಳ ( Two KSRTC Buses) ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಎರಡೂ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಚಿಕ್ಕಮಗಳೂರು (Chikkamagaluru ) ಜಿಲ್ಲೆ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದ ಬಳಿ ನಡೆದಿದೆ. ಬಸ್ಸುಗಳ ಅಪಘಾತಕ್ಕೆ ಎರಡೂ ಬಸ್ಸಿನ ಚಾಲಕರ ಬೇಜವಾಬ್ದಾರಿ ಹಾಗೂ ಅತಿ ವೇಗವಾಗಿ ಚಲಾಯಿಸಿದ್ದೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಪಘಾತದಿಂದ ಎರಡು ಬಸ್ಸಿನ ಚಾಲಕರಿಗೆ ಹೆಚ್ಚಾಗಿ ಗಾಯವಾಗಿದೆ. ಏಕೆಂದರೆ ಬಸ್ಸುಗಳು ಮುಖಾಮುಖಿ ಡಿಕ್ಕಿಯಾದ ಸಂದರ್ಭದಲ್ಲೂ ಕೂಡ ಎರಡು ಬಸ್ಸಿನ ಡ್ರೈವರ್ ಸೀಟಿನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಹಾಗಾಗಿ, ಎರಡು ಬಸ್ಸಿನ ಚಾಲಕರಿಗೂ ಗಂಭೀರ ಗಾಯವಾಗಿದೆ. ಇನ್ನು ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು 5 ಆಂಬುಲೆನ್ಸ್ ಗಳಲ್ಲಿ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಡಿಗೆರೆ ತಾಲ್ಲೂಕು ಬಹುತೇಕ ಮಲೆನಾಡು ಭಾಗದಿಂದ ಕೂಡಿದೆ. ಇಲ್ಲಿ ಹಾವು ಬಳಕಿನ ಮೈ ಕಟ್ಟಿನ ರಸ್ತೆಯೇ ಹೆಚ್ಚು. ಹಾಗಾಗಿ, ವಾಹನಗಳ ಚಾಲಕರು ಅತ್ಯಂತ ಜಾಗರೂಕರಾಗಿ ವಾಹನ ಚಲಾಯಿಸಬೇಕು. ಇಲ್ಲವಾದರೆ ಅಪಘಾತ ಕಟ್ಟಿಟ್ಟ ಬುತ್ತಿ. ಹಾವು ಬಳುಕಿನ ಮೈಕಟ್ಟಿನ ರಸ್ತೆಯಾಗಿರುವುದರಿಂದ ಮೂಡಿಗೆರೆ ತಾಲೂಕಿನ ಅಲ್ಲಲ್ಲೇ ಸಾಕಷ್ಟು ಅಪಘಾತಗಳು ಕೂಡ ಸಂಭವಿಸುತ್ತಿವೆ. ಆದರೆ, ತರಬೇತಿ ಪಡೆದ ಸರ್ಕಾರಿ ಬಸ್ಸಿನ ಚಾಲಕರು ವೇಗವಾಗಿ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿರುವುದಕ್ಕೆ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ