
ಚಿಕ್ಕಮಗಳೂರು, ಮಾರ್ಚ್ 1: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಭಾನುವಾರ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ (Rambhapuri Peetha) ಭೇಟಿ ನೀಡಿ ಜಗದ್ಗುರು ರೇಣುಕಾಚಾರ್ಯ, ವೀರಭದ್ರೇಶ್ವರನ ದರ್ಶನ ಪಡೆದರು. ಇದೇ ವೇಳೆ, ಕರ್ನಾಟಕ ರಾಜಕೀಯ ಹಾಗೂ ಇರಾನ್, ಇಸ್ರೇಲ್ ಸಂಘರ್ಷದ ಬಗ್ಗೆಯೂ ಹಲವು ಮಹತ್ವದ ವಿಚಾರಗಳನ್ನು ಉಲ್ಲೇಖಿಸಿದರು. ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿರುವ ಸಂದರ್ಭದಲ್ಲೇ, ರಂಭಾಪುರಿ ಪೀಠದ ಹೆಲಿಪ್ಯಾಡ್ನಲ್ಲಿ ಡಿಕೆ ಶಿವಕುಮಾರ್ ಆಗಮಿಸುತ್ತಿದ್ದಂತೆಯೇ ಕೆಲ ಬೆಂಬಲಿಗರು ‘‘ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿ’’ ಎಂದು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಜನರನ್ನು ಹೆಲಿಕಾಪ್ಟರ್ ಸಮೀಪಕ್ಕೆ ಬಿಡಲಾಗಿದ್ದಕ್ಕೆ ಉಪ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿ, ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರ ವಿರುದ್ಧ ಗರಂ ಆದರು. ಭದ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಯಾವಾಗಲೂ ಶ್ರಮ ನಮ್ಮದು, ಫಲ ದೇವರದ್ದು’ ಎಂದು ಮಾರ್ಮಿಕವಾಗಿ ಉತ್ತರಿಸಿದರು. ನಿಮ್ಮ ಶ್ರಮಕ್ಕೆ ಫಲ ಸಿಗುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಇಲ್ಲಿಗೆ ಬಂದಿದ್ದೇನೆ ಅಲ್ವಾ, ಮಾತನಾಡೋಣ’ ಎಂದು ಹೇಳಿ ನಕ್ಕರು.
ಅಂತರರಾಷ್ಟ್ರೀಯ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ಇಸ್ರೇಲ್ ಹಾಗೂ ಅಮೆರಿಕಾ ಜಂಟಿ ದಾಳಿಯಿಂದ ಇರಾನ್ನಲ್ಲಿ ಉದ್ಭವಿಸಿರುವ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದರು. ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಿಗಬೇಕು ಎಂಬುದು ರಂಭಾಪುರಿ ಶ್ರೀಗಳ ಆಶಯ ಎಂದು ಉಲ್ಲೇಖಿಸಿದರು. ಯುದ್ಧದಿಂದ ನಿರಪರಾಧಿಗಳು ಬಲಿಯಾಗುತ್ತಿರುವುದು ದುಃಖಕರ. ಶಾಲಾ ಮಕ್ಕಳೂ ಸಾವನ್ನಪ್ಪಿರುವ ಘಟನೆಗಳು ನೋವು ತಂದಿವೆ ಎಂದು ಹೇಳಿದರು.
ಇರಾನ್, ದುಬೈ ಸೇರಿದಂತೆ ಹಲವು ಕಡೆ ಕನ್ನಡಿಗರು ಸಿಲುಕಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ಸಿಲುಕಿರುವವರನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಭೋಜೇಗೌಡ ಹಾಗೂ ಎ.ಸಿ. ಶ್ರೀನಿವಾಸ ಸೇರಿದಂತೆ ಅನೇಕರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದೇನೆ. ಕನ್ನಡಿಗರು ಆತಂಕಪಡಬೇಕಿಲ್ಲ. ನಾನು ಹಾಗೂ ಮುಖ್ಯಮಂತ್ರಿ ಸಂಪರ್ಕದಲ್ಲಿದ್ದೇವೆ ಎಂದು ಭರವಸೆ ನೀಡಿದರು.
ವಿದೇಶಾಂಗ ಇಲಾಖೆಯಿಂದ ಅಧಿಕೃತ ಮಾಹಿತಿ ಬಂದ ನಂತರವೇ ಕ್ರಮ ಕೈಗೊಳ್ಳಲು ಸಾಧ್ಯ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಹೆಲ್ಪ್ಲೈನ್ ಆರಂಭಿಸುವುದಕ್ಕೆ ನಿಯಮಾತ್ಮಕ ಅಡಚಣೆಗಳಿವೆ. ಆದರೂ ರಾಜ್ಯ ಸರ್ಕಾರದಿಂದ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!
ಕನ್ನಡ ಸಂಘಟನೆಗಳು ಕೂಡ ವಿದೇಶದಲ್ಲಿರುವವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಎಲ್ಲರೂ ಶಾಂತಿ ಕಾಪಾಡಲು ಸಹಕರಿಸಬೇಕು ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದರು.
Published On - 1:04 pm, Sun, 1 March 26