ಅ.30ರಿಂದ ರಾಜ್ಯಾದ್ಯಂತ ದತ್ತಮಾಲೆ ಅಭಿಯಾನ; 7 ಪ್ರಮುಖ ಬೇಡಿಕೆ ಮುಂದಿಟ್ಟ ಶ್ರೀರಾಮಸೇನೆ

| Updated By: ವಿವೇಕ ಬಿರಾದಾರ

Updated on: Oct 09, 2023 | 12:56 PM

ಶ್ರೀರಾಮಸೇನೆ ನೇತೃತ್ವದಲ್ಲಿ ಅಕ್ಟೋಬರ್​ 30ರಿಂದ ದತ್ತಮಾಲೆ ಅಭಿಯಾನ ನಡೆಯಲಿದೆ. ಏಳು ದಿನಗಳ ಈ ಅಭಿಯಾನದ ಮೂಲಕ ತಮ್ಮ ಏಳು ಬೇಡಿಕೆಗಳನ್ನು ಈಡೇರಿಸುವಂತೆ ಶ್ರೀರಾಮಸೇನೆ ಸರ್ಕಾರಕ್ಕೆ ಆಗ್ರಹಿಸಲಿದೆ.

ಅ.30ರಿಂದ ರಾಜ್ಯಾದ್ಯಂತ ದತ್ತಮಾಲೆ ಅಭಿಯಾನ; 7 ಪ್ರಮುಖ ಬೇಡಿಕೆ ಮುಂದಿಟ್ಟ ಶ್ರೀರಾಮಸೇನೆ
ದತ್ತಪೀಠ (ಎಡಚಿತ್ರ) ಶ್ರೀರಾಮಸೇನೆ ಪತ್ರ (ಬಲಚಿತ್ರ)
Follow us on

ಚಿಕ್ಕಮಗಳೂರು ಅ.09: ಕಳೆದ ವರ್ಷದಂತೆ ಈ ವರ್ಷವೂ ಶ್ರೀರಾಮಸೇನೆ (Shri ram Sena) ದತ್ತಮಾಲೆ ಅಭಿಯಾನ ನಡೆಸಲು ನಿರ್ಧರಿಸಿದೆ. ಅಕ್ಟೋಬರ್ 30 ರಿಂದ ರಾಜ್ಯಾದ್ಯಂತ ಏಳು ದಿನಗಳ ಕಾಲ ದತ್ತಮಾಲೆ ಅಭಿಯಾನ ನಡೆಯಲಿದೆ. ದತ್ತಮಾಲೆ (Dattamale) ಅಭಿಯಾನದ ಮೂಲಕ ಏಳು ಪ್ರಮುಖ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದಿಡಲು ನಿರ್ಧರಿಸಿದೆ. ನವೆಂಬರ್ 5 ರಂದು ಶ್ರೀರಾಮಸೇನೆ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪವರ್ತದಲ್ಲಿರುವ ಶ್ರೀಗುರುದತ್ತಾತ್ರೇಯ ಬಾಬಾಬುಡನ್​ಸ್ವಾಮಿ ದರ್ಗಾ ಇನಾಂ ದತ್ತಪೀಠ (DattaPeeta) ಆಗಮಿಸಲಿದ್ದಾರೆ. ಅಂದು ದತ್ತಪೀಠದಲ್ಲಿ ಹೋಮ, ದತ್ತ ಪಾದುಕೆ‌ ದರ್ಶನ ನಡೆಯಲಿದೆ.

ದತ್ತಮಾಲೆ ಅಭಿಮಾಯನದ ಮೂಲಕ ಶ್ರೀರಾಮಸೇನೆ ಕಾರ್ಯಕರ್ತರು ಸರ್ಕಾರಕ್ಕೆ ಏಳು ಬೇಡಿಕೆಗಳನ್ನು ಸಲ್ಲಿಸಲಿದ್ದಾರೆ. “ಕಾಣೆಯಾದ ಅಮೂಲ್ಯ ವಿಗ್ರಹಗಳ ಬಗ್ಗೆ ತನಿಖೆ ನಡೆಸಬೇಕು. ದತ್ತಪೀಠದಲ್ಲಿ ಇಸ್ಲಾಂ ಚಟುವಟಿಕೆಗೆ ಅವಕಾಶ ನೀಡಬಾರದು. ದತ್ತಪೀಠದಲ್ಲಿ ದತ್ತಾತ್ರೇಯ ವಿಗ್ರಹ ಪ್ರತಿಷ್ಠಾಪನೆ ಮಾಡಲು ಅನುಮತಿ ನೀಡಬೇಕು. ಉರ್ದು ನಾಮಫಲಕವನ್ನ ತೆಗೆಯಬೇಕು. ದತ್ತಪೀಠದಲ್ಲಿರುವ ಗೋರಿಗಳ ಸ್ಥಳಾಂತರಿಸಬೇಕು” ಎಂದು ಆಗ್ರಹಿಸಲಿದ್ದಾರೆ.

ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಗುರು ದತ್ತಾತ್ರೇಯ ಸ್ವಾಮಿಗೆ ಅರ್ಚಕರಿಂದ ನೆರೆವೇರಿದ ಪೂಜೆ

ಏನಿದು ದತ್ತಪೀಠ ವಿವಾದ

ಬಾಬಾಬುಡನ್‌ ಗಿರಿ ಅಥವಾ ಶ್ರೀಗುರುದತ್ತಾತ್ರೇಯ ಯಾರಿಗೆ ಸೇರಿದ್ದು ಎಂಬ ಬಗ್ಗೆ ವಾದ ವಿವಾದಗಳು ನಡೆಯುತ್ತಲೇ ಇವೆ. ಶ್ರೀ ಗುರು ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎನ್ನುವುದು ಮೂಲ ಸರ್ಕಾರಿ ದಾಖಲಾತಿಗಳಲ್ಲಿ ಇರುವ ಹೆಸರಿದೆ. ಆದರೆ ಈ ಸ್ಥಳವನ್ನು ಬಾಬಾ ಬುಡನ್‌ ಗಿರಿ ಎಂದೂ ಮತ್ತೆ ಕೆಲವರು ಇನಾಂ ದತ್ತಾತ್ರೇಯ ಪೀಠ ಎಂದೂ ಕರೆಯುತ್ತಾರೆ. ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದ್ದ ಈ ಧಾರ್ಮಿಕ ಕೇಂದ್ರದ ನಮ್ಮದು ಎಂದು ಎರಡು ಧರ್ಮದವರು ನ್ಯಾಯಾಲಯದಲ್ಲಿ ವಾದ-ಪ್ರತಿವಾದ ಮಂಡಿಸುತ್ತಿದ್ದಾರೆ.

ಹೆಸರಿನ ವಿವಾದ

ಶ್ರೀ ಗುರು ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎನ್ನುವುದು ಮೂಲ ಸರ್ಕಾರಿ ದಾಖಲಾತಿಗಳಲ್ಲಿ ಇರುವ ಹೆಸರು. ಆ ಸ್ಥಳವನ್ನು ಇನಾಂ ದತ್ತಾತ್ರೇಯ ಪೀಠ, (ಐಡಿ ಪೀಠ) ಎಂದೂ ಹೆಸರಿಸುತ್ತಾರೆ. ಆದರೆ ಕೆಲವೆಡೆ ‘ಬಾಬಾಬುಡನ್​ಗಿರಿ’ ಎಂದೂ ಇನ್ನೂ ಕೆಲವೆಡೆ ದತ್ತಪೀಠ ಎಂದೂ ಕರೆಯುತ್ತಿದ್ದಾರೆ. ಈ ಹೆಸರಿನ ವಿಚಾರ ಸಣ್ಣದಲ್ಲ. ಯಾವ ಹೆಸರಿನಿಂದ ಕರೆಯಬೇಕು ಎಂಬ ಬಗ್ಗೆ ಹಿಂದೂ-ಮುಸ್ಲಿಂ ಧರ್ಮದ ಅನುಯಾಯಿಗಳ ನಡುವೆ ಹಲವು ದಶಕಗಳಿಂದಲೂ ನಿರಂತರವಾಗಿ ಹೋರಾಟ ನಡೆಯುತ್ತಲೇ ಇದೆ. ಹಿಂದೂ-ಮುಸ್ಲಿಂ ಭಾವೈಕ್ಯತಾ ಕೇಂದ್ರವಾಗಿರುವ ಈ ಸ್ಥಳದ ಉಮೇದುವಾರಿಕೆ ನಮ್ಮದು ಎಂದು ಎರಡು ಧರ್ಮದವರು ನ್ಯಾಯಾಲಯದಲ್ಲಿ ವಾದ-ಪ್ರತಿವಾದ ಮಂಡಿಸುತ್ತಲೇ ಇದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:00 pm, Mon, 9 October 23