30 ಟಿಎಂಸಿ ಸಂಗ್ರಹ ಸಾಮರ್ಥ್ಯದ ಆ ಜಲಾಶಯದಲ್ಲಿ 22 ಟಿಎಂಸಿ ನೀರಿದೆ, ಬರಗಾಲದ ರೈತಾಪಿ ವರ್ಗ ಫುಲ್ ಖುಷ್​!

| Updated By: ಸಾಧು ಶ್ರೀನಾಥ್​

Updated on: Oct 30, 2023 | 2:25 PM

ಜಲಾಶಯದಿಂದ ನೀರು ಹರಿಸುವುದರಿಂದಾಗಿ 5.557 ಎಕರೆ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆ, 6.578 ಎಕರೆ ಪ್ರದೇಶದಲ್ಲಿನ ಖುಷ್ಕಿ ಜಮೀನಿನ ಬೆಳೆ ಸೇರಿ ಒಟ್ಟು 12.135 ಎಕರೆ ಪ್ರದೇಶಕ್ಕೆ ಅನುಕೂಲ ಆಗಲಿದೆ. ಅಂತೆಯೇ ಕಾಲುವೆ ಮೂಲಕ ನೀರು ಹರಿಯುವುದರಿಂದಾಗಿ ಈ ಭಾಗದ ಅಂತರ್ಜಲ ವೃದ್ಧಿ ಆಗಲಿದೆ. ಗ್ರಾಮೀಣ ಜನ-ಜಾನುವಾರುಗಳಿಗೂ ಸಹಾಯಕವಾಗಲಿದೆ.

30 ಟಿಎಂಸಿ ಸಂಗ್ರಹ ಸಾಮರ್ಥ್ಯದ ಆ ಜಲಾಶಯದಲ್ಲಿ 22 ಟಿಎಂಸಿ ನೀರಿದೆ, ಬರಗಾಲದ ರೈತಾಪಿ ವರ್ಗ ಫುಲ್ ಖುಷ್​!
ಆ ಜಲಾಶಯದಲ್ಲಿ 22 ಟಿಎಂಸಿ ನೀರಿದೆ, ಬರಗಾಲದ ರೈತಾಪಿ ವರ್ಗ ಫುಲ್ ಖುಷ್​!
Follow us on

ಇಡೀ ರಾಜ್ಯದಲ್ಲೇ ರಣ ಭೀಕರ ಬರಗಾಲ (Drought) ಎದುರಾಗಿದ್ದು ರೈತಾಪಿ ವರ್ಗ (Farmers) ಕಂಗಾಲಾಗಿ ಕುಳಿತಿದೆ. ಆದ್ರೆ, ಕೋಟೆನಾಡಿನ ಅದೊಂದು ಭಾಗದ ರೈತಾಪಿ ವರ್ಗಕ್ಕೆ ಮಾತ್ರ ಮರಳುಗಾಡಿನಲ್ಲಿ ನೀರು ಸಿಕ್ಕಂತಾಗಿದೆ. ಯಾಕೆ ಅಂತೀರಾ, ಈ ವರದಿ ನೋಡಿ. ವಾಣಿ ವಿಲಾಸ ಸಾಗರ ಜಲಾಶಯದಿಂದ (Vani Vilasa Sagar Reservoir) ಅಚ್ಚುಕಟ್ಟು ಪ್ರದೇಶಕ್ಕೆ ಹರಿಯುತ್ತಿರುವ ನೀರು. ನಿಟ್ಟುಸಿರು ಬಿಟ್ಟ ಬರದ ನಾಡಿನ ರೈತಾಪಿ ವರ್ಗ. ಶಾಶ್ವತ ನೀರಾವರಿಗೆ ಕೋಟೆನಾಡಿನ ರೈತರ ಆಗ್ರಹ. ಈ ದೃಶ್ಯಗಳು ಕಂಡು ಬಂದಿರುವುದು ಕೋಟೆನಾಡು ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯ ಬಳಿ.

ಹೌದು, ಕಳೆದ ಎರಡು ವರ್ಷದಿಂದ ವಾಣಿ ವಿಲಾಸ ಸಾಗರ ಬಹುತೇಕ ಭರ್ತಿಯಾಗಿದೆ. ಮಳೆ ನೀರು ಹಾಗೂ ಭದ್ರಾ ಮೇಲ್ದಂಡೆ ಯೋಜನೆ ನೀರಿನಿಂದ ಜಲಾಶಯ ತುಂಬಿತ್ತು. 30 ಟಿಎಂಸಿ ಸಂಗ್ರಹ ಯೋಗ್ಯ ಜಲಾಶಯದಲ್ಲಿ ಸದ್ಯ 22 ಟಿಎಂಸಿ ನೀರಿದೆ! ಹೀಗಾಗಿ, ವಿಶ್ವೇಶ್ವರಯ್ಯ ಜಲ ನಿಗಮದಿಂದ ಈ ಸಾಲಿನಲ್ಲಿ ವಾಣಿ ವಿಲಾಸ ಸಾಗರ ಜಲಾಶಯದಿಂದ 4ನೇ ಬಾರಿಗೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲಾಗುತ್ತಿದೆ. 30 ದಿನಗಳ ಕಾಲ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲಾಗುತ್ತಿದೆ. 1. 25 ಟಿಎಂಸಿ ನೀರು ಬಿಡುಗಡೆ ಆಗಲಿದೆ. ಬರಗಾಲದಿಂದ ಕಂಗೆಟ್ಟಿದ್ದ ರೈತಾಪಿ ವರ್ಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಒಣಗಿ ಹೋಗುತ್ತಿದ್ದ ಬೆಳೆ ಜೀವ ಹಿಡಿಯುವಂತಾಗಿದೆ ಎಂದು ರೈತಾಪಿ ವರ್ಗ ಖುಷಿ ವ್ಯಕ್ತಪಡಿಸುತ್ತಿದೆ.

ಇನ್ನು ಜಲಾಶಯದಿಂದ ನೀರು ಹರಿಸುವುದರಿಂದಾಗಿ 5.557 ಎಕರೆ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆ, 6.578 ಎಕರೆ ಪ್ರದೇಶದಲ್ಲಿನ ಖುಷ್ಕಿ ಜಮೀನಿನ ಬೆಳೆ ಸೇರಿ ಒಟ್ಟು 12.135 ಎಕರೆ ಪ್ರದೇಶಕ್ಕೆ ಅನುಕೂಲ ಆಗಲಿದೆ. ಅಂತೆಯೇ ಕಾಲುವೆ ಮೂಲಕ ನೀರು ಹರಿಯುವುದರಿಂದಾಗಿ ಈ ಭಾಗದ ಅಂತರ್ಜಲ ವೃದ್ಧಿ ಆಗಲಿದೆ. ಗ್ರಾಮೀಣ ಜನ-ಜಾನುವಾರುಗಳಿಗೂ ಸಹಾಯಕವಾಗಲಿದೆ. ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಶಾಶ್ವತ ಯೋಜನೆ ರೂಪಿಸಬೇಕೆಂಬುದು ಇವ್ರ ಆಗ್ರಹ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ವಾಣಿವಿಲಾಸ ಸಾಗರ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲಾಗುತ್ತಿದೆ. ಬರಗಾಲದ ಸಂದರ್ಭದಲ್ಲಿ ನೀರು ಹರಿಸುತ್ತಿರುವುದರಿಂದ ರೈತಾಪಿ ವರ್ಗದಲ್ಲಿ ಖುಷಿ ಮೂಡಿಸಿದೆ. ಅಂತೆಯೇ ಇದೇ ವಾತಾವರಣ ಸದಾಕಾಲ ಇರಲು ಶಾಶ್ವತವಾಗಿ ನೀರು ಹರಿಯುವ ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಪೂರ್ಣಗೊಳಿಬೇಕೆಂಬುದು ರೈತರ ಆಗ್ರಹವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.​​

Published On - 2:24 pm, Mon, 30 October 23