ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ನಾಲ್ವರು ಸಾವು ಪ್ರಕರಣ; ನಗರಸಭೆ ಎಇಇ, ಜೆಇ, ವಾಲ್ವ್​ಮ್ಯಾನ್​ ಅಮಾನತು

ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಜುಲೈ 31ರಂದು ಕಲುಷಿತ ನೀರು(Contaminated water)ಸೇವಿಸಿ ನಾಲ್ಕು ಜನ ಸಾವನ್ನಪ್ಪಿದ್ದರು. ಜೊತೆಗೆ ಸುಮಾರು ನೂರು ಜನ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ ಇದೀಗ ನಗರಸಭೆ ಎಇಇ, ಜೆಇ, ವಾಲ್ವ್​ಮ್ಯಾನ್​ ಅಮಾನತುಗೊಳಿಸಲಾಗಿದೆ.

ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ನಾಲ್ವರು ಸಾವು ಪ್ರಕರಣ; ನಗರಸಭೆ ಎಇಇ, ಜೆಇ, ವಾಲ್ವ್​ಮ್ಯಾನ್​ ಅಮಾನತು
ಚಿತ್ರದುರ್ಗ ಕಲುಷಿತ ನೀರು ಸೇವನೆ
Edited By: ಕಿರಣ್ ಹನುಮಂತ್​ ಮಾದಾರ್

Updated on: Aug 04, 2023 | 9:23 AM

ಚಿತ್ರದುರ್ಗ, ಆ.4: ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಜುಲೈ 31ರಂದು ಕಲುಷಿತ ನೀರು(Contaminated water)ಸೇವಿಸಿ ಮೂರು ಜನ ಸಾವನ್ನಪ್ಪಿದ್ದರು. ಜೊತೆಗೆ ಸುಮಾರು ನೂರು ಜನ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ ಮೃತರ ಸಂಖ್ಯೆ ಇದೀಗ ನಾಲ್ಕಕ್ಕೆ ಏರಿದೆ. ಹೌದು, ಕಲುಷಿತ ನೀರು ಸೇವಿಸಿ ಚಿತ್ರದುರ್ಗ(Chitradurga)ದ ಬಸವೇಶ್ವರ ಆಸ್ಪತ್ರೆಗೆ ಸೇರಿದ್ದ ರುದ್ರಪ್ಪ(50) ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾನೆ. ಈ ಹಿನ್ನಲೆ ಇಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಲಿದ್ದಾರೆ.  ಇನ್ನು ನಿನ್ನೆ(ಆ.3) ಪ್ರಯೋಗಾಲಯ ವರದಿ ಬಂದಿದ್ದು, ಕಾಲರಾ ಮಾದರಿ ಅಂಶ ಪತ್ತೆಯಾಗಿತ್ತು. ವಾಂತಿ, ಭೇದಿ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ಮಾಡಿದ್ದು, ಈ ನೀರು ಕುಡಿಯಲು ಯೋಗ್ಯವಲ್ಲವೆಂದು ಚಿತ್ರದುರ್ಗ ಜಿಲ್ಲಾ ಸರ್ವೇಕ್ಷಣಾ ಘಟಕ ವರದಿಯಲ್ಲಿ ಉಲ್ಲೇಖಿಸಿತ್ತು. ಇದೀಗ ಪ್ರಕರಣ ಸಂಬಂಧ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಾಕಿಯಿದೆ.

ನಗರಸಭೆ ಎಇಇ, ಜೆಇ, ವಾಲ್ವ್​ಮ್ಯಾನ್​ ಅಮಾನತು

ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿತ್ರದುರ್ಗ ನಗರಸಭೆಯ ಎಇಇ ಮಂಜುನಾಥ್ ರೆಡ್ಡಿ, ಜೆಇ ಕಿರಣ್, ವಾಲ್ವ್​​​ಮ್ಯಾನ್ ಪ್ರಕಾಶಬಾಬು ಸೇರಿದಂತೆ ಗುತ್ತಿಗೆ ಆಧಾರಿತ ನೌಕರ ನೀರಗಂಟಿ ಸುರೇಶ್ ಎಂಬುವವರನ್ನು ಕೆಲಸದಿಂದ ಅಮಾನತುಗೊಳಿಸಿ ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಪ್ರಭು ಆದೇಶ ಹೊರಡಿಸಿದ್ದಾರೆ.

ತಹಸೀಲ್ದಾರ್ ಜತೆ ಪ್ರತಿಭಟನಾಕಾರರ ವಾಗ್ವಾದ

ಇನ್ನು ನಿನ್ನೆ(ಆ.3) ಸ್ಥಳೀಯರು ವಿಷಕಾರಿ ನೀರು ಸೇವನೆಯಿಂದ ಸಾವುಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕವಾಡಿಗರಹಟ್ಟಿಗೆ ತಹಶೀಲ್ದಾರ್ ನಾಗವೇಣಿ ನೇತೃತ್ವದ ತಂಡ ಭೇಟಿ ನೀಡಿ, ಜನರ ಬಳಿ ತೆರಳಿ ತಹಶೀಲ್ದಾರ್ ವಿಚಾರಿಸಿದಾಗ ಜನರು ತರಾಟೆಗೆ ತೆಗೆದುಕೊಂಡಿದ್ದರು. ಹೌದು, ಘಟನೆ ನಡೆದು ಇಷ್ಟು ದಿನವಾದರೂ ಈವರೆಗೂ ಸೂಕ್ತ ಅನ್ನ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಿಲ್ಲವೆಂದು ಗ್ರಾಮಸ್ಥರು ಕಿಡಿಕಾರಿದರು. ಈ ವೇಳೆ ತಹಸೀಲ್ದಾರ್ ನಾಗವೇಣಿ ಜತೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದ್ದರು.

ಇನ್ನು ಕವಾಡಿಗರಹಟ್ಟಿ ನಿವಾಸಿಗಳಿಂದ ಟೈರ್​ಗೆ ಬೆಂಕಿ ಹಚ್ಚಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗಿತ್ತು. ಘಟನೆ ನಡೆದು 3 ದಿನ ಕಳೆದರೂ ಯಾವುದೇ ಕ್ರಮ ಜರುಗಿಸಿಲ್ಲ. ಶಾಸಕರು, ಸಂಸದರು ಈವರೆಗೂ ಭೇಟಿ ನೀಡಿಲ್ಲ. ಸೂಕ್ತ ಆಹಾರ, ಶುದ್ಧ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿದ್ದರು. ಈ ಹಿನ್ನೆಲೆ ಕೂಡಲೇ ಎಸಿ ಕಾರ್ತಿಕ್, ತಹಶೀಲ್ದಾರ್ ನಾಗವೇಣಿ ನೇತೃತ್ವದಲ್ಲಿ ಅಕ್ಕಿ, ಬೇಳೆ, ಗೋದಿ ಸೇರಿದಂತೆ ದಿನಬಳಕೆ ವಸ್ತುಗಳುಳ್ಳ ಕಿಟ್ ವಿತರಣೆ ಮಾಡಲಾಗಿತ್ತು.

ಇದನ್ನೂ ಓದಿ:ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವು ಪ್ರಕರಣ, ಪೋಕ್ಸೊ ಕೇಸ್ ದಾಖಲಿಸಿದ ದ್ವೇಷಕ್ಕೆ ನೀರಿಗೆ ವಿಷ ಹಾಕಿದ್ರಾ?

ಜಿಲ್ಲಾಸ್ಪತ್ರೆಗೆ ಕೊನೆಗೂ ಶಾಸಕ ಭೇಟಿ

ಇಷ್ಟೆಲ್ಲಾ ಘಟನೆ ನಡೆದು ಭಾರಿ ಆಕ್ರೋಶ ವ್ಯಕ್ತವಾದ ಬಳಿಕ ಕೊನೆಗೂ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರ ಆರೋಗ್ಯ ವಿಚಾರಿಸಿದ್ದರು. ಬಳಿಕ ಕವಾಡಿಗರಹಟ್ಟಿ ಬಡಾವಣೆಗೂ ಭೇಟಿ ನೀಡಿದ್ದರು. ಈಗಾಗಲೇ ಉಸ್ತುವಾರಿ ಸಚಿವ ಡಿ.ಸುಧಾಕರ್ ಮೃತರ ಕುಟಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡು, ಎಲ್ಲಾ ಆಯಾಮದಲ್ಲೂ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ದ್ವೇಷದಿಂದ ನೀರಿನ ಟ್ಯಾಂಕಿಯಲ್ಲಿ ವಿಷ ಬೆರಸಿದ ಆರೋಪ

ಕವಾಡಿಗರಹಟ್ಟಿಯ ಘಟನೆಗೆ ಕಾರಣ ನೀರಗಂಟಿ ಸುರೇಶ ಎಂದು ಆರೋಪ ಮಾಡಿದ್ದಾರೆ. ದಲಿತ ಯುವಕ ಸವರ್ಣಿಯ ಸಮುದಾಯದ ಬಾಲೆಯನ್ನು ಪ್ರೇಮಿಸಿದ್ದು ಫೋಕ್ಸೋ ಪ್ರಕರಣ ದಾಖಲಾಗಿತ್ತು. ಅದೇ ಕಾರಣಕ್ಕೆ ದ್ವೇಷದಿಂದ ನಿರಗಂಟಿ ಸುರೇಶ ಎಂಬಾತ ನೀರಿನ ಟ್ಯಾಂಕಿನಲ್ಲಿ ವಿಷ ಬೆರೆಸಿದ್ದಾನೆ. ಮೊದಲು ನೀರಗಂಟಿ ಸುರೇಶನ ಬಂಧಿಸಬೇಕೆಂದು ಮೃತ ಮಂಜುಳಾ ಅವರ ಮಾವ ರಾಮಣ್ಣ ಆಗ್ರಹಿಸಿದ್ದರು. ಈ ಕುರಿತು ಅನುಮಾನಸ್ಪದ ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆ ಪೊಲೀಸರು ಈಗಾಗಲೇ ಸುರೇಶ್ ವಿಚಾರಣೆ ನಡೆಸಿದ್ದೇವೆ. ಸದ್ಯ ಪುರಾವೆ ಇಲ್ಲದ ಕಾರಣ ಕರೆದಾಗ ಬರುವಂತೆ ಹೇಳಿ ಕಳಿಸಿದ್ದೇವೆ. ಎಫ್ಎಸ್​ಎಲ್ ವರದಿ ಬಂದ ಬಳಿಕ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದಿದ್ದರು.

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:41 am, Fri, 4 August 23

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us