ಚಿತ್ರದುರ್ಗ: ಬಿಜೆಪಿ ಶಾಸಕ ಚಂದ್ರಪ್ಪ ಹೆಸರು ಬರೆದಿಟ್ಟ ಪಂಚಾಯಿತಿ ಎಸ್​ಡಿಎ ನೌಕರ ಆತ್ಮಹತ್ಯೆ

ವರ್ಗಾವಣೆಗೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಕೆಎಸ್​ಆರ್​ಟಿಸಿ ನಿರ್ವಾಹಕ ಆತ್ಮಹತ್ಯೆ ಯತ್ನ ಪ್ರಕರಣ ಇಡೀ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಬಿಜೆಪಿ ಶಾಸಕರೊಬ್ಬರ ಹೆಸರು ಬರೆದಿಟ್ಟು ಎಸ್​ಡಿಎ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಚಿತ್ರದುರ್ಗ:  ಬಿಜೆಪಿ ಶಾಸಕ ಚಂದ್ರಪ್ಪ ಹೆಸರು ಬರೆದಿಟ್ಟ ಪಂಚಾಯಿತಿ ಎಸ್​ಡಿಎ ನೌಕರ ಆತ್ಮಹತ್ಯೆ
ಆತ್ಮಹತ್ಯೆ ಮಾಡಿಕೊಂಡ ಎಸ್​ಡಿಎ
Edited By:

Updated on: Aug 06, 2023 | 2:16 PM

ಚಿತ್ರದುರ್ಗ, (ಆಗಸ್ಟ್ 06): ಬಿಜೆಪಿ ಶಾಸಕ ಎಂ ಚಂದ್ರಪ್ಪ(M Chandrappa) ಹೆಸರು ಬರೆದಿಟ್ಟು ಎಸ್​ಡಿಎ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಚಿತ್ರದುರ್ಗ(Chitradurga) ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿ ಎಸ್​ಡಿಎ ತಿಪ್ಪೇಸ್ವಾಮಿ ಅವರು ಜಾನಕಲ್ ಬಳಿ ನಿನ್ನೆ(ಆಗಸ್ಟ್ 06) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಅಮಾನತು ಬೆದರಿಕೆ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್​ನೋಟ್​ನಲ್ಲಿ ಬರೆದಿಟ್ಟಿದ್ದಾರೆ. ಈ ಸಂಬಂಧ ಮೃತ ತಿಪ್ಪೇಸ್ವಾಮಿ ಪುತ್ರ ರಾಜಶೇಖರಪ್ಪ ಎನ್ನುವರು ಹೊಸದುರ್ಗ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಆದ್ರೆ, ದೂರಿನಲ್ಲಿ ಶಾಸಕ ಎಂ.ಚಂದ್ರಪ್ಪ, ತಾಲೂಕು ಪಂಚಾಯಿತಿ ಇಓ ರವಿ ಹೆಸರು ಉಲ್ಲೇಖವಿಲ್ಲ. ಸ್ವತಃ ತಿಪ್ಪೇಸ್ವಾಮಿಯೇ ನಿರ್ದಿಷ್ಟವಾಗಿ ಶಾಸಕರ ಹೆಸರು ಬರೆದಿಟ್ಟ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೆ, ಇದೀಗ ದೂರಿನಲ್ಲಿ ಅವರ ಹೆಸರು ಇಲ್ಲದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಚಿತ್ರದುರ್ಗ: ರೂಂಗೆ ಹಾಕಿ ವಾರ್ಡನ್​ಗೆ ಬಾರಿಸಿ ಎಂದಿದ್ದ ಶಾಸಕ ವೀರೇಂದ್ರ ಪಪ್ಪಿ ವಿಡಿಯೋ ವೈರಲ್

ದೂರಿನಲ್ಲಿ ಶಾಸಕ ಎಂ.ಚಂದ್ರಪ್ಪ, ತಾ.ಪಂ ಇಓ ರವಿ ಹೆಸರು ಉಲ್ಲೇಖವಿಲ್ಲ. ಆದ್ರೆ, ಕೇವಲ ಗ್ರಾಮ ಪಂಚಾಯಿತಿ ಸದಸ್ಯರಾದ ಮೋಹನ್, ಮೂರ್ತಿ, ಉಗ್ರಪ್ಪ, ಲವ, ರಾಜಪ್ಪ ಎಂಬುವರ ವಿರುದ್ಧ ಕಿರುಕುಳ ದೂರು ನೀಡಿದ್ದಾರೆ. ನಿನ್ನೆ(ಆಗಸ್ಟ್ 06) ಸಂಬಂಧಿಕರಿದ್ದ ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮಕ್ಕೆ ತೆರಳಿದ್ದಾಗ ತಿಪ್ಪೇಸ್ವಾಮಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ತಿಪ್ಪೇಸ್ವಾಮಿ ಆತ್ಮಹತ್ಯೆಗೂ ಮುನ್ನ ಡೆತ್​ನೋಟ್​ ಬರೆದಿಟ್ಟಿದ್ದು, ಇದರಲ್ಲಿ ಏನೆಲ್ಲ ಹೇಳಿಕೊಂಡಿದ್ದಾರೆ ಎನ್ನುವ ವಿವರ ಈ ಕೆಳಗಿನಂತಿದೆ ನೊಡಿ.

ಎಸ್​ಡಿಎ ಡೆತ್​ನೋಟ್​ನಲ್ಲೇನಿದೆ?

ಈ ಮೂಲಕ ಎಲ್ಲರಿಗೂ ಕೊನೆಯ ಶಭಾಶಯಗಳು. ಪತ್ರ ಬರೆದ ಉದ್ದೇಶವೆನೆಂದರೆ ನಾನು ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ದ್ವಿತಿಯ ದರ್ಜೆ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದೆ. ನಾನು ಸಾಯಲು ಕಾರವೇನಂದೆರೆ ಪಂಚಾಯಿತಿಯಲ್ಲಿ ಬಹಳ ಕಿರುಕುಳ ನೀಡುತ್ತಿದ್ದರು. ದಿನಾಂಕ 3-8-2023ರಂದು ಎಂಎಲ್​ಎ ಚಂದ್ರಪ್ಪನವರು, ನಿನ್ನನ್ನು ಅಮಾನತು ಮಾಡುಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಮತ್ತು ಇಓ ರವಿ ಅವರು ಹಿಂಸೆ ಕೊಡುತ್ತಿದ್ದರು. ಅಲ್ಲದೇ ಗ್ರಾಮ ಪಂಚಾಯಿತಿ ಸದಸ್ಯರಾದ ಮೋಹನ್, ಮೂರ್ತಿ, ಉಗ್ರಪ್ಪ, ಲವ, ರಾಜಪ್ಪ ಕಿರುಕುಳ ನೀಡುತ್ತಿದ್ದ ಅಂತೆಲ್ಲ ವಿವರವಾಗಿ ಪತ್ರ ಬರೆದಿದ್ದು, ನನ್ನ ಸಾವಿಗೆ ಮೇಲೆ ತಿಳಿಸಿರುವ ಎಲ್ಲರೂ ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶಾಸಕ ಚಂದ್ರಪ್ಪ ಹೇಳುವುದೇನು?

ಇನ್ನು ತಮ್ಮ ಹೆಸರು ಬರೆದಿಟ್ಟು SDA ತಿಪ್ಪೇಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿರು ಬಗ್ಗೆ ಚಂದ್ರಪ್ಪ ಟಿವಿ9ಗೆ ಪ್ರತಿಕ್ರಿಯಿಸಿದ್ದು, ನಾನು ಏನಾದರೂ ಕೆಲಸ ಮಾಡಿಸಬೇಕಾದರೆ ಇಒ, ಪಿಡಿಒಗೆ ಹೇಳುವೆ. ಮೃತ ಎಸ್​ಡಿಎ ತಿಪ್ಪೇಸ್ವಾಮಿಗೂ ನಮಗೂ ಯಾವುದೇ ಸಂಬಂಧವಿಲ್ಲ, ಈತ ಕ್ಲಾಸ್​4 ಉದ್ಯೋಗಿ, ಇವನಿಗೆ ಖಾತೆ ಮಾಡುವ ಅಧಿಕಾರವಿಲ್ಲ. ನಾನೊಬ್ಬ ಹಿರಿಯ ಶಾಸಕನಾಗಿ ಇವರ ಜೊತೆ ಸಂಪರ್ಕದಲ್ಲಿ ಇಲ್ಲ. ರವಿ ಕೂಡ ಹೊಸದಾಗಿ ಬಂದಿದ್ದು, ಅವರು ಪ್ರಭಾರ ಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾನು ಏನಾದರೂ ಕೆಲಸ ಮಾಡಿಸಬೇಕಿದ್ದರೆ ಸಿಇಒ, ಇಒಗೆ ಹೇಳುವೆ. ತೀರ ಅಗತ್ಯವಿದ್ದರೆ ಮಾತ್ರ ಪಿಡಿಒಗೆ ಹೇಳುವೆ, ಎಸ್​ಡಿಗೆ ಕೆಲಸ ಹೇಳಲ್ಲ. ಯಾವ ಕಾರಣಕ್ಕೆ ಆತ್ಮಹತ್ಯೆಮಾಡಿಕೊಂಡಿದ್ದಾರೆ ಕೇಳಿ ತಿಳಿದುಕೊಳ್ಳುವೆ ಎಂದು ಸ್ಪಷ್ಟಪಡಿಸಿದರು.

ಇನ್ನಷ್ಟು ಚಿತ್ರದುರ್ಗ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:04 pm, Sun, 6 August 23

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us