
ಚಿತ್ರದುರ್ಗ, ಏ.2: “ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್” ಎಂಬ ಮಾತಿದೆ. ಕಾಲೇಜು ಜೀವನದಲ್ಲಿ ಎಲ್ಲವೂ ಚಂದ, ಆದರೆ ಅಲ್ಲಿ ಕೆಲವೊಂದು ಅತಿರೇಖದ ವಿಚಾರಗಳು ನಡೆಯುತ್ತದೆ, ವಿದ್ಯಾರ್ಥಿಗಳ ನಡುವೆ ಲವ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಮಿತಿಮೀರಿದ ಸಂಬಂಧಗಳು, ಹೀಗೆ ಹಲವೂ ಘಟನೆಗಳು ನಡೆದಿರುತ್ತದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಇರಬೇಕಾದ ಗುರು ಹಾಗೂ ಶಿಷ್ಯರ ಸಂಬಂಧಕ್ಕೆ ಬೇರೆ ಅರ್ಥವನ್ನು ಕಲ್ಪಿಸುವ ಚಟ ಈಗ ಕಾಲೇಜಿಗಳಲ್ಲಿ ಶುರುವಾಗಿದೆ. ಇದೀಗ ಇಂತಹದೇ ಒಂದು ವಿಚಾರಕ್ಕೆ ವಿದ್ಯಾರ್ಥಿಯೊಬ್ಬಳ ಜೀವ ಕಳೆದುಕೊಂಡಿದ್ದಾಳೆ. ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಮಲ್ಲಾಡಿಹಳ್ಳಿಯ ಆಯುರ್ವೇದ ಕಾಲೇಜಿನ ಬಿಎಎಂಎಸ್ ವಿದ್ಯಾರ್ಥಿನಿ ಲಿಖಿತಾ (23), ತನ್ನ ಅಧ್ಯಾಪಕರ ಜೊತೆ ಸಂಬಂಧ ಕಲ್ಪಿಸಿ ನಡೆಸಲಾದ ಅಪಪ್ರಚಾರಕ್ಕೆ ಮನನೊಂದು ನೇಣಿಗೆ ಶರಣಾಗಿದ್ದಾರೆ.
ಹೊಳಲ್ಕೆರೆ ಪಟ್ಟಣದ ಬಸವ ಲೇಔಟ್ನ ಮನೆಯಲ್ಲಿ ಲಿಖಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಧ್ಯಾಪಕ ಡಾ. ರಾಜು ಅವರೊಂದಿಗೆ ಸಂಬಂಧವಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ, ತನ್ನ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದರಿಂದ ನೊಂದಿದ್ದ ವಿದ್ಯಾರ್ಥಿನಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೂ ಮುನ್ನ ಲಿಖಿತಾ ಬರೆದಿಟ್ಟಿರುವ ಡೆತ್ ನೋಟ್ನಲ್ಲಿ ಪ್ರಾಧ್ಯಾಪಕ ಡಾ. ರಾಜು, ಅವರ ಪತ್ನಿ ನಿಶಾ ಹಾಗೂ ಕೆಲವು ವಿದ್ಯಾರ್ಥಿನಿಯರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇವರ ಕಿರುಕುಳ ಮತ್ತು ಅಪಪ್ರಚಾರವೇ ನನ್ನ ಸಾವಿಗೆ ಕಾರಣ ಎಂದು ಅವರು ಡೆತ್ ನೋಟ್ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕೋಲಾರ: ಗಂಡನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ಮೇಲೆ ಆ್ಯಸಿಡ್ ದಾಳಿ ಮಾಡಿದ ಪತ್ನಿ
ಘಟನೆಗೆ ಸಂಬಂಧಿಸಿದಂತೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಧ್ಯಾಪಕ ರಾಜು, ಪತ್ನಿ ನಿಶಾ ಮತ್ತು ಡೆತ್ ನೋಟ್ನಲ್ಲಿ ಹೆಸರಿಸಲಾದ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:28 am, Thu, 2 April 26