ಪ್ರತ್ಯೇಕ ಘಟನೆ: ರಸ್ತೆ ಅಪಘಾತದಲ್ಲಿ ಮೂವರು ಸಾವು; ಮಾಜಿ ಶಾಸಕ ಸುರೇಶ್ ಗೌಡರಿಗೆ ಗಾಯ

ಚಿತ್ರದುರ್ಗ, ದೇವನಹಳ್ಳಿ ಮತ್ತು ಮಂಡ್ಯದಲ್ಲಿ ನಡೆದಿರುವ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಒಟ್ಟು ಮೂವರು ದಾರುಣವಾಗಿ ಮೃತಪಟ್ಟಿದ್ದು, ಮಾಜಿ ಶಾಸಕ ಸುರೇಶ್​​ ಗೌಡ ಸೇರಿದಂತೆ 5 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಹಿರಿಯೂರು ತಾಲೂಕಿನಲ್ಲಿ ಹಿಟ್ ಆ್ಯಂಡ್​​ ರನ್​​ಗೆ ಇಬ್ಬರು ಬಲಿಯಾಗಿದ್ದರೆ, ದೇವನಹಳ್ಳಿಯಲ್ಲಿ ಬೈಕ್​​ಗಳ ಮುಖಾಮುಖಿ ಡಿಕ್ಕಿಯಲ್ಲಿ ಒಬ್ಬರು ಅಸುನೀಗಿದ್ದಾರೆ.

ಪ್ರತ್ಯೇಕ ಘಟನೆ: ರಸ್ತೆ ಅಪಘಾತದಲ್ಲಿ ಮೂವರು ಸಾವು; ಮಾಜಿ ಶಾಸಕ ಸುರೇಶ್ ಗೌಡರಿಗೆ ಗಾಯ
ಹಿಟ್​ ಆ್ಯಂಡ್​ ರನ್​ಗೆ ಇಬ್ಬರು ಬಲಿ
Image Credit source: Tv9 Kannada
Edited By:

Updated on: Feb 22, 2026 | 9:07 AM

ಚಿತ್ರದುರ್ಗ/ ಮಂಡ್ಯ, ಫೆಬ್ರವರಿ 22: ಹಿಟ್​ ಆ್ಯಂಡ್​ ರನ್​ಗೆ ಇಬ್ಬರು ಬಲಿಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪಟ್ರೆಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ರಸ್ತೆಬದಿ ನಿಂತಿದ್ದವರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದರೆ, ಮತ್ತಿಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕಾರು ಕೆಟ್ಟಿದ್ದರಿಂದ ರಿಪೇರಿಗೆಂದು ರಸ್ತೆ ಬದಿ ನಾಲ್ವರು ನಿಂತಿದ್ದರು. ಈ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿದ್ದು, ಅಪಘಾತದ ಬಳಿಕ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೈಕ್​​ಗಳ ಮುಖಾಮುಖಿ ಡಿಕ್ಕಿ: ಓರ್ವ ಸಾವು

ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದ ಬಳಿ 2 ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ. ದಾಸಗೊಂಡನಹಳ್ಳಿಯ ನರಸಿಂಹಪ್ಪ(67) ಮೃತರಾಗಿದ್ದು, ಗಾಯಗೊಂಡ ಮತ್ತೋರ್ವನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮದುವೆ ಮುಗಿಸಿಕೊಂಡು ಮನೆಗೆ ಹೋಗ್ತಿದ್ದ ನರಸಿಂಹಪ್ಪಗೆ ಎದುರಿನಿಂದ ಬಂದ ಬೈಕ್​​ ಡಿಕ್ಕಿಯಾಗಿದ್ದು, ತೀವ್ರ ರಕ್ತ ಸಾವ್ರದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಫೆ.20ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಭೀಕರ ಅಪಘಾತ; ಟ್ರ್ಯಾಕ್ಟರ್​ ಪಲ್ಟಿಯಾಗಿ ಮಗು ಸೇರಿ ನಾಲ್ವರ ದುರ್ಮರಣ

ಮಾಜಿ ಶಾಸಕ ಸುರೇಶ್ ಗೌಡ ಕಾರು ಅಪಘಾತ

ಅಪಘಾತದಲ್ಲಿ ಜಖಂ ಆಗಿರುವ ಕಾರು

ಪಕ್ಷದ ಕಾರ್ಯಕರ್ತರ ಮದುವೆಗೆಂದು ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ  ಸುರೇಶ್ ಗೌಡ ಪ್ರಯಾಣಿಸುತ್ತಿದ್ದ ಕಾರು ಮಂಡ್ಯದ ಬೊಂತೆಕೊಪ್ಪಲು ಸಮೀಪ ನಿನ್ನೆ ರಾತ್ರಿ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಮಾಜಿ ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ‌ ಕಾರು ಪಲ್ಟಿಯಾಗಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಕಾರು ಭಾಗಶಃ ಜಖಂಗೊಂಡಿದ್ದು, ಸುರೇಶ್ ಗೌಡ ಕೈಗೆ ಪೆಟ್ಟಾಗಿದೆ. ಚಾಲಕನಿಗೂ ಸಣ್ಣಪುಟ್ಟ ಗಾಯಗಲಾಗಿದ್ದು, ತಕ್ಷಣ ಗನ್​ಮ್ಯಾನ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.