ಪದ್ಮಶ್ರೀ ಪುರಸ್ಕೃತ ಅಂಕೇಗೌಡರ 20 ಲಕ್ಷ ಪುಸ್ತಕಗಳ ಸಂರಕ್ಷಣೆಗೆ ಸಿಎಂ ಡಿಕೆ ಶಿವಕುಮಾರ್ ಭರ್ಜರಿ ಕೊಡುಗೆ

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿರುವ, ಪದ್ಮಶ್ರೀ ಪುರಸ್ಕೃತ ಎಂ. ಅಂಕೇಗೌಡರ ‘ಅಂಕೇಗೌಡ ಜ್ಞಾನ ಪ್ರತಿಷ್ಠಾನ’ದ 20 ಲಕ್ಷಕ್ಕೂ ಹೆಚ್ಚು ಅಪರೂಪದ ಪುಸ್ತಕಗಳ ಸಂರಕ್ಷಣೆಗೆ ಖುದ್ದು ಸಿಎಂ ಡಿಕೆ ಶಿವಕುಮಾರ್ ಕ್ರಮ ಕೈಗೊಂಡಿದ್ದಾರೆ. ಖಾಯಂ ಸುಸಜ್ಜಿತ ಕಟ್ಟಡ ಮತ್ತು ಗ್ರಂಥಾಲಯ ನಿರ್ಮಿಸಲು 2 ಎಕರೆ ಜಮೀನು ಹಾಗೂ 5 ಕೋಟಿ ರೂಪಾಯಿ ಅನುದಾನವನ್ನು ತಕ್ಷಣವೇ ಮಂಜೂರು ಮಾಡಲು ಆದೇಶಿಸಿದ್ದಾರೆ.

ಪದ್ಮಶ್ರೀ ಪುರಸ್ಕೃತ ಅಂಕೇಗೌಡರ 20 ಲಕ್ಷ ಪುಸ್ತಕಗಳ ಸಂರಕ್ಷಣೆಗೆ ಸಿಎಂ ಡಿಕೆ ಶಿವಕುಮಾರ್ ಭರ್ಜರಿ ಕೊಡುಗೆ
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಅಂಕೇಗೌಡರು (ಚಿತ್ರ ಕೃಪೆ: ಡಿಕೆ ಶಿವಕುಮಾರ್ ಎಕ್ಸ್ ಹ್ಯಾಂಡಲ್)
Image Credit source: @DKShivakumar

Updated on: Jun 23, 2026 | 11:54 AM

ಬೆಂಗಳೂರು, ಜೂನ್ 23: ನಾಡಿನ ಹೆಮ್ಮೆಯ ಪುಸ್ತಕ ಪ್ರೇಮಿ, ಪದ್ಮಶ್ರೀ ಪುರಸ್ಕೃತ ಎಂ ಅಂಕೇಗೌಡ (M Ankegowda) ಜೀವಮಾನವಿಡೀ ಸಂಗ್ರಹಿಸಿರುವ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಅಪರೂಪದ ಗ್ರಂಥಗಳ ಸುರಕ್ಷತೆಗೆ ಕೊನೆಗೂ ಸರ್ಕಾರ ಮುಂದಾಗಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿಯಾದ ಅಂಕೇಗೌಡರು, ಸೂಕ್ತ ಜಾಗ ಹಾಗೂ ಸುಸಜ್ಜಿತ ಕಟ್ಟಡದ ಕೊರತೆಯಿಂದಾಗಿ ಪುಸ್ತಕಗಳನ್ನು ಕಾಯ್ದಿಟ್ಟುಕೊಳ್ಳಲು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿದರು. ವಿನಂತಿಯನ್ನು ಆಲಿಸಿದ ಬೆನ್ನಲ್ಲೇ ಮುಖ್ಯಮಂತ್ರಿಗಳು ಭರವಸೆ ನೀಡಿ, ಮಂಡ್ಯ ಜಿಲ್ಲೆಯಲ್ಲಿ ಹೊಸ ಗ್ರಂಥಾಲಯದ ಸ್ಥಾಪನೆಗಾಗಿ 2 ಎಕರೆ ಭೂಮಿ ಮತ್ತು 5 ಕೋಟಿ ರೂಪಾಯಿಗಳ ಆರ್ಥಿಕ ಸಹಾಯವನ್ನು ಘೋಷಿಸಿ ಆದೇಶದ ಪತ್ರದ ಮೇಲೆ ಸಹಿ ಹಾಕಿದ್ದಾರೆ.

ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ತಾವು ಸಂಗ್ರಹಿಸಿರುವ ಹಳೆಯ ಅಪರೂಪದ ನಾಣ್ಯಗಳು ಹಾಗೂ ಅಂಚೆ ಚೀಟಿಗಳನ್ನು ಸಿಎಂಗೆ ತೋರಿಸಿ ಅಂಕೇಗೌಡ ಗಮನ ಸೆಳೆದರು. ಅಲ್ಲದೆ, ನವೀನ ಓದುವ ಕೊಠಡಿ, ಕಂಪ್ಯೂಟರ್ ವ್ಯವಸ್ಥೆ ಹಾಗೂ ಪುರಾತನ ಕೃತಿಗಳ ರಕ್ಷಣೆಗೆ ಡಿಜಿಟಲೀಕರಣದ ಅಗತ್ಯತೆ ಕುರಿತು ಲಿಖಿತ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ (MLC) ದಿನೇಶ್ ಗೂಳಿಗೌಡ ಉಪಸ್ಥಿತರಿದ್ದರು.

ಅಂಕೇಗೌಡ ಯಾರು, ಸಾಧನೆ ಏನು?

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರಳಹಳ್ಳಿ ಮೂಲದ ಎಂ. ಅಂಕೇಗೌಡ ಜ್ಞಾನದಾಸೋಹದ ಅನನ್ಯ ಸಾಕಾರ ಮೂರ್ತಿ. ಸಹಕಾರ ಸಕ್ಕರೆ ಕಾರ್ಖಾನೆಯೊಂದರಲ್ಲಿ ಸಾಮಾನ್ಯ ಉದ್ಯೋಗಿಯಾಗಿದ್ದ (ಟೈಮ್ ಕೀಪರ್) ಇವರು, ಸಂಪಾದನೆಯ ಬಹುಪಾಲು ಹಣವನ್ನು ಪುಸ್ತಕಗಳ ಖರೀದಿಗೆ ಬಳಸಿದರು. ಕೇವಲ ವೈಯಕ್ತಿಕ ಹವ್ಯಾಸವಾಗಿ ಆರಂಭವಾದ ಇವರ ಈ ಕಾರ್ಯ, ಇಂದು ದೇಶದ ಅತಿ ದೊಡ್ಡ ವೈಯಕ್ತಿಕ ಗ್ರಂಥಾಲಯವಾದ ‘ಪುಸ್ತಕ ಮನೆ’ಯಾಗಿ ಮಾರ್ಪಟ್ಟಿದೆ. ಇವರ ‘ಅಂಕೇಗೌಡ ಜ್ಞಾನ ಪ್ರತಿಷ್ಠಾನ’ದಲ್ಲಿ ಹಸ್ತಪ್ರತಿಗಳು, ಹಳೆಯ ಪತ್ರಿಕೆಗಳು ಹಾಗೂ ಅಳಿವಿನಂಚಿನಲ್ಲಿರುವ ಅಪರೂಪದ ಕೃತಿಗಳು ಸೇರಿದಂತೆ 20 ಲಕ್ಷಕ್ಕೂ ಹೆಚ್ಚು ಸಾಹಿತ್ಯಿಕ ದಾಖಲೆಗಳಿವೆ. ಇವರ ಈ ಅಪ್ರತಿಮ ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 2022 ರಲ್ಲಿ ಇವರಿಗೆ ದೇಶದ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.

ಸಿಎಂ ಡಿಕೆ ಶಿವಕುಮಾರ್ ಅಧಿಕೃತ ಎಕ್ಸ್ ಖಾತೆಯಲ್ಲಿ ಹಳಗನ್ನಡದ ಕವಿತೆಯನ್ನು ಉಲ್ಲೇಖಿಸಿ ಅಂಕೇಗೌಡರೊಂದಿಗಿನ ಭೇಟಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಎಕ್ಸ್ ಸಂದೇಶ


“ವಿಪುಲೈಶ್ವರ್ಯಮಯಿಯಾದ ಸಾಕ್ಷಾತ್‌ ತಾಯಿ ಸರಸ್ವತೀದೇವಿಯೆ, ಸೆರಗು ಓಸರಿಸಿ, ಸ್ವರ್ಣ ಕಲಶಸದೃಶ್ಯಗಳಾದ ತನ್ನ ದುಗ್ದಪೀನ ಪಯೋಧರಗಳನ್ನು ತನ್ನ ಮುಗ್ಧ ಕವಿನಂದನ ಮುಂದೆ ಚಾಚಿ ನಿಂತಂತಿತ್ತು, ‘ಬಾ ಪೀಯುಷ ಪಾನಗೈ’ ಎಂದು”. ವಿಶ್ವಮಾನವ ಕುವೆಂಪು ಅವರು ತಮ್ಮ ಆತ್ಮಕಥೆ ʻನೆನಪಿನ ದೋಣಿಯಲ್ಲಿʼ ಮೊದಲ ಬಾರಿಗೆ ಗ್ರಂಥಾಲಯಕ್ಕೆ ಭೇಟಿ ನೀಡಿದಾಗ ಅನುಭವಿಸಿದ ಜ್ಞಾನದ ಹಸಿವನ್ನು ಹೀಗೆ ಬಣ್ಣಿಸಿದ್ದರು ಎಂದು ಎಕ್ಸ್ ಸಂದೇಶದಲ್ಲಿ ಡಿಕೆ ಶಿವಕುಮಾರ್ ಉಲ್ಲೇಖಿಸಿದ್ದಾರೆ.

ಅಂತಹದ್ದೇ ಜ್ಞಾನದ ದಾಸೋಹವನ್ನು ಲಕ್ಷಾಂತರ ಪುಸ್ತಕಗಳ ಸಂಗ್ರಹದ ಮೂಲಕ ನಾಡಿಗೆ ಉಣಬಡಿಸುತ್ತಿರುವ ಮಹಾನ್ ಚೇತನ, ಪದ್ಮಶ್ರೀ ಪುರಸ್ಕೃತರು ಹಾಗೂ ‘ಪುಸ್ತಕ ಮನೆ’ಯ ರೂವಾರಿಗಳಾದ ಶ್ರೀ ಅಂಕೇಗೌಡ ಎಂ. ಅವರು ಇಂದು ವಿಧಾನಸೌಧದಲ್ಲಿ ಭೇಟಿಯಾಗಿ ಸಮಾಲೋಚಿಸಿದರು. ಪುಸ್ತಕ ಲೋಕದ ಈ ಅನನ್ಯ ಸಾಧಕರೊಂದಿಗಿನ ಭೇಟಿ ಅತ್ಯಂತ ಅರ್ಥಪೂರ್ಣವಾಗಿತ್ತು ಎಂದು ಡಿಕೆಶಿ ಬರೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us