ಮಂಡ್ಯ ಹನುಮ ಧ್ವಜ ವಿವಾದ: ಗ್ರಾ.ಪಂ ಸಭೆಯಲ್ಲಿ ಸರ್ವ ಪಕ್ಷಗಳಿಂದಲೇ ಸಿಕ್ಕಿತ್ತು ಬೆಂಬಲ

| Updated By: ಆಯೇಷಾ ಬಾನು

Updated on: Jan 30, 2024 | 1:45 PM

ಹನುಮಧ್ವಜ ಹಾರಾಟ ಬಗ್ಗೆ ಗ್ರಾ.ಪಂ ಸಭೆಯಲ್ಲಿ ಚರ್ಚೆ ನಡೆದಿತ್ತು. ಆಗ ಪಕ್ಷಭೇದ ಮರೆತು ಸರ್ವ ಪಕ್ಷ ಬೆಂಬಲಿತ ಸದಸ್ಯರು ಹನುಮ ಸ್ತಂಭಕ್ಕೆ ಒಪ್ಪಿಗೆ ಸೂಚಿಸಿದ್ದರು. ಆದರೆ ಈಗ ಹನುಮಧ್ವಜ ಹಾರಾಟ ಬಳಿಕ ತಕರಾರು ಶುರು ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. 20 ಸದಸ್ಯರ ಪೈಕಿ‌ 18 ಸದಸ್ಯರು ಹನುಮ ಸ್ತಂಭಕ್ಕೆ ಒಪ್ಪಿಗೆ ಸೂಚಿಸಿದ್ದರು.

ಮಂಡ್ಯ, ಜ.30: ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರವು (Mandya Hanuman Flag Issue) ಖಂಡಿಸಿ BJP, JDS & ಹಿಂದೂ ಸಂಘಟನೆ ಕಾರ್ಯಕರ್ತರು ಮಂಡ್ಯ ಡಿಸಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ಶಾಸಕ ರವಿಕುಮಾರ್ ಗಣಿಗ (Ravikumar Ganiga) ಫ್ಲೆಕ್ಸ್ ಹರಿದು, ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ರಾಜಕಾರಣಿಗಳ ಪರ-ವಿರೋಧ ಟೀಕೆಗಳು ಈ ಗಲಾಟೆಗೆ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಆಗುತ್ತಿದೆ. ಫೆಬ್ರವರಿ 9ಕ್ಕೆ ಮಂಡ್ಯ ಬಂದ್​ಗೆ ಕರೆ (Mandya Bandh) ಕೊಡಲಾಗಿದೆ. ಇವೆಲ್ಲದರ ನಡುವೆ ಈಗ ಈ ಗಲಾಟೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪಕ್ಷಭೇದ ಮರೆತು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಬೆಂಬಲಿತ ಕೆರಗೋಡು ಗ್ರಾ.ಪಂ ಸದಸ್ಯರು ಹನುಮ ಸ್ತಂಭಕ್ಕೆ ಬೆಂಬಲ ಸೂಚಿಸಿದ್ದರು ಎಂಬುವುದು ತಿಳಿದು ಬಂದಿದೆ.

ಹನುಮ ಧ್ವಜಕ್ಕೆ ತಕರಾರು ಮಾಡುತ್ತಿರುವ ರಾಜಕೀಯ ಪಕ್ಷಗಳೇ ಈ ಹಿಂದೆ ಹನುಮ ಧ್ವಜ ಹಾರಾಟಕ್ಕೆ ಅನುಮತಿ ಕೊಟ್ಟಿದ್ದವು. ಹನುಮಧ್ವಜ ಹಾರಾಟ ಬಗ್ಗೆ ಗ್ರಾ.ಪಂ ಸಭೆಯಲ್ಲಿ ಚರ್ಚೆ ನಡೆದಿತ್ತು. ಕೆರಗೋಡು ಗ್ರಾ.ಪಂಯಿಂದಲೇ ಮೊದಲು ಹನುಮ ಸ್ತಂಭಕ್ಕೆ ಅನುಮತಿ ಸಿಕ್ಕಿತ್ತು. ಪಕ್ಷಭೇದ ಮರೆತು ಸರ್ವ ಪಕ್ಷ ಬೆಂಬಲಿತ ಸದಸ್ಯರು ಹನುಮ ಸ್ತಂಭಕ್ಕೆ ಒಪ್ಪಿಗೆ ಸೂಚಿಸಿದ್ದರು. ಜೆಡಿಎಸ್ ಬೆಂಬಲಿತ 10 ಸದಸ್ಯರು, ಕಾಂಗ್ರೆಸ್ ಬೆಂಬಲಿತ 10 ಸದಸ್ಯರು, ಬಿಜೆಪಿ ಬೆಂಬಲಿತ ಇಬ್ಬರು ಸೇರಿ ಒಟ್ಟು 22 ಸದಸ್ಯರ ಸಭೆ ಕರೆಯಲಾಗಿತ್ತು ಅದರಲ್ಲಿ ಇಬ್ಬರು ಗೈರಾಗಿದ್ದರು. ಹಾಜರಾದ 20 ಸದಸ್ಯರ ಪೈಕಿ‌ 18 ಸದಸ್ಯರು ಹನುಮ ಸ್ತಂಭಕ್ಕೆ ಒಪ್ಪಿಗೆ ಸೂಚಿಸಿದ್ದರು. ಒಬ್ಬ ಸದಸ್ಯ ಸ್ತಂಭ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದರು. ಓರ್ವ ಸದಸ್ಯ ಈ ವಿಚಾರದಲ್ಲಿ ತಟಸ್ಥರಾಗಿದ್ದರು.

ಕೆರಗೋಡು ಗ್ರಾಮ ಪಂಚಾಯತಿಯ ಸದಸ್ಯರೇ ಒಪ್ಪಿಗೆ ನೀಡಿ ಹನುಮ ಸ್ತಂಭ ನೆಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ರಾಷ್ಟ್ರೀಯ ಮತ್ತು ನಾಡ ಹಬ್ಬಗಳಲ್ಲಿ ತ್ರಿವರ್ಣ ಧ್ವಜ ಹಾರಾಟ. ಉಳಿದ ದಿನ ಹನುಮಧ್ವಜ ಹಾರಾಟಕ್ಕೆ ಸದಸ್ಯರು ಸಹಮತ ನೀಡಿದ್ದರು. ಹನುಮಧ್ವಜ ಹಾರಾಟ ಬಳಿಕ ತಕರಾರು ಅರ್ಜಿ ಸಲ್ಲಿಕೆಯಾಗಿದೆ.

ಇದನ್ನೂ ಓದಿ: ಮಂಡ್ಯ ಹನುಮ ಧ್ವಜ ವಿವಾದ: ಸರ್ಕಾರವೇ ನಕಲಿ ದಾಖಲೆ ಸೃಷ್ಟಿಸಿದೆ ಎಂದ ಕುಮಾರಸ್ವಾಮಿ

ಹನುಮಧ್ವಜ ಪ್ರಕರಣ ಬಗ್ಗೆ ಪರ-ವಿರೋಧ ದಾಖಲೆ ರಿಲೀಸ್ ಮಾಡಲಾಗಿದೆ. ಗ್ರಾಮಸ್ಥರು ಗ್ರಾ.ಪಂ ನಡಾವಳಿ ಪತ್ರ ಬಿಡುಗಡೆ ಮಾಡಿದ್ದಾರೆ. ರಾಷ್ಟ್ರ ಹಾಗೂ ನಾಡ ಧ್ವಜ ಹಾರಿಸಲು ಒಪ್ಪಿಗೆ ಸಂಬಂಧ ಶ್ರೀ ಗೌರಿಶಂಕರ ಟ್ರಸ್ಟ್ ಬರೆದಿದ್ದ ಮುಚ್ಚಳಿಕೆ ಪತ್ರವನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಇನ್ನು ನಕಲಿ ದಾಖಲೆ ಸೃಷ್ಟಿಸಿ ಧ್ವಜ ತೆರವು ಸಮರ್ಥಿಸಿಕೊಳ್ತಾ ಸರ್ಕಾರ? ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ. ಯಾವುದೇ ವಿವಾದ ಸೃಷ್ಟಿಯಾಗದಂತೆ ತಡೆಯಲು ಹನುಮಧ್ವಜ ಇಳಿಸಿ ರಾಷ್ಟ್ರ ಧ್ವಜ ಹಾರಿಸಿದ್ದಾಗಿ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ.

ಮಂಡ್ಯ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:42 pm, Tue, 30 January 24