ಉಪ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಭರದ ಸಿದ್ಧತೆ: ಡಿಕೆ ಸುರೇಶ್​ ಹೆಸರಿನಲ್ಲಿ ಮಾಜಿ ಶಾಸಕರಿಂದ ಚಂಡಿಕಾಯಾಗ!

| Updated By: ಗಣಪತಿ ಶರ್ಮ

Updated on: Oct 17, 2024 | 2:26 PM

ಉಪ ಚುನಾವಣೆ ಸಮರ ಮೂರೂ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಶತಾಯಗತಾಯ ಗೆದ್ದೇ ಗೆಲ್ಲಬೇಕು ಎಂದು ನಾಯಕರು ಪಣ ತೊಟ್ಟಿದ್ದಾರೆ. ನವೆಂಬರ್ 13ಕ್ಕೆ ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೆರೆಮರೆಯಲ್ಲೇ ನಾನಾ ತಂತ್ರಗಾರಿಕೆ ನಡೆಯುತ್ತಿದೆ. ಅದರಲ್ಲೂ ಈ ಬಾರಿ ಚನ್ನಪಟ್ಟಣ ಹೈವೋಲ್ಟೇಜ್ ಕ್ಷೇತ್ರವಾಗಿದೆ. ದಳಪತಿಗಳಿಗೆ ಚಾಲೆಂಜ್ ಆಗಿದ್ರೆ, ಸೋಲಿನಿಂದ ಕಂಗೆಟ್ಟಿರೋ ಡಿಕೆ ಸಹೋದರರಿಗೆ ಪುಟಿದೇಳಲು ಹೊಸ ಯುದ್ಧದ್ದಂತಿದೆ. ಈ ನಡುವೆಯೇ ಇದೀಗ ಕಾಂಗ್ರೆಸ್​ ಪಾಳಯದಿಂದ ಪ್ರಬಲ ಹೆಸರೇ ಮುನ್ನೆಲೆಗೆ ಬಂದಿದೆ.

ಉಪ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಭರದ ಸಿದ್ಧತೆ: ಡಿಕೆ ಸುರೇಶ್​ ಹೆಸರಿನಲ್ಲಿ ಮಾಜಿ ಶಾಸಕರಿಂದ ಚಂಡಿಕಾಯಾಗ!
ಉಪ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಭರದ ಸಿದ್ಧತೆ: ಡಿಕೆ ಸುರೇಶ್​ ಹೆಸರಿನಲ್ಲಿ ಮಾಜಿ ಶಾಸಕರಿಂದ ಚಂಡಿಕಾಯಾಗ!
Follow us on

ಬೆಂಗಳೂರು, ಅಕ್ಟೋಬರ್ 17: ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಸ್ಥಾನಕ್ಕೆ ಮಾಜಿ ಸಂಸದ ಡಿಕೆ ಸುರೇಶ್ ಹೆಸರು ಕೇಳಿ ಬರುತ್ತಿದೆ. ಈ ಮಧ್ಯೆ ಡಿಕೆ ಸುರೇಶ್ ಹೆಸರಿನಲ್ಲಿ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ವಿಶೇಷ ಪೂಜೆ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಡಿಕೆ ಸುರೇಶ್ ಹೆಸರಿನಲ್ಲಿ ಮಾಜಿ ಶಾಸಕ ಎಂಸಿಅಶ್ವತ್ಥ್ ಚಂಡಿಕಾಯಾಗ ಮಾಡಿಸಿದ್ದಾರೆ. ಗೆಲುವಾಗಲಿ ಎಂದು ಪ್ರಾರ್ಥನೆ ಕೂಡ ಮಾಡಿದ್ದಾರೆ.

ಪದೇ ಪದೇ ನಾನೇ ಅಭ್ಯರ್ಥಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳುತ್ತಲೇ ಇದ್ದಾರೆ. ಬುಧವಾರವಷ್ಟೇ ಚನ್ನಪಟ್ಟಣ ಅಭ್ಯರ್ಥಿಯಾಗಿ ಡಿಕೆ ಸುರೇಶ್ ಕಣಕ್ಕಿಳಿಯಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕೂಡ ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆ ನೋಡುತ್ತಿದ್ದರೆ ಡಿಕೆ ಸುರೇಶ್​ ಅವರೇ ಅಭ್ಯರ್ಥಿಯಾಗುತ್ತಾರಾ ಎಂಬ ಪ್ರಶ್ನೆ ಇದೀಗ ಬಲವಾಗಿದೆ.

ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿದ ರಾಜ್ಯ ಕಾಂಗ್ರೆಸ್

ಮೊನ್ನೆಯಷ್ಟೇ ರಾಜ್ಯಕ್ಕೆ ಕೆಸಿ ವೇಣುಗೋಪಾಲ್ ಎಂಟ್ರಿ ಕೊಟ್ಟಿದ್ದಾರೆ. ಉಪಚುನಾವಣೆಯ ಬಗ್ಗೆ ಸಿಎಂ, ಡಿಸಿಎಂ ಜೊತೆ ಗಂಭೀರವಾಗಿ ಚರ್ಚೆ ನಡೆಸಿದ್ದಾರೆ. ಮೂರು ಕ್ಷೇತ್ರದಲ್ಲೂ ಗೆಲ್ಲುವ ಬಗ್ಗೆ ಚರ್ಚೆ ಮಾಡಿದ್ದಾರೆ. ಇನ್ನು ಚನ್ನಪಟ್ಟಣದಲ್ಲಿ ಬಿಜೆಪಿಯ ಗೊಂದಲವನ್ನೇ ಪ್ಲಸ್​ ಮಾಡಿಕೊಳ್ಳುವ ಬಗ್ಗೆಯೂ ಚರ್ಚೆ ಆಗಿದೆ. ಹೀಗಾಗಿ ಹೋಬಳಿ ಮಟ್ಟದಲ್ಲಿ ಸಚಿವರನ್ನು ನಿಯೋಜಿಸಲು ಕೆಸಿ ವೇಣುಗೋಪಾಲ್ ಸೂಚನೆ ಕೊಟ್ಟಿದ್ದಾರೆ.

ಚನ್ನಪಟ್ಟಣ ಬೈಎಲೆಕ್ಷನ್ ಟಿಕೆಟ್​ಗೆ ಬೇಡಿಕೆ ಇಟ್ಟ ತೇಜಸ್ವಿನಿಗೌಡ

ಚನ್ನಪಟ್ಟಣ ಕಾಂಗ್ರೆಸ್​ ಟಿಕೆಟ್​ಗೆ ಮಾಜಿ ಎಂಎಲ್​ಸಿ ತೇಜಸ್ವಿನಿ ಗೌಡ ಬೇಡಿಕೆ ಇಟ್ಟಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ನೀಡಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ. ಡಿಸಿಎಂ ಡಿಕೆಶಿ, ಕೆಸಿ ವೇಣುಗೋಪಾಲ್​ಗೂ ಮನವಿ ಮಾಡಿದ್ದಾರೆ.

ಸಭೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮೂರು ಕ್ಷೇತ್ರದ ಚುನಾವಣೆಗೆ ನಾವು ಸಿದ್ಧ ಆಗಿದ್ದೇವೆ. ಅದಕ್ಕಾಗಿ ಎಲ್ಲಾ ಪೂರ್ವ ತಯಾರಿ ಮಾಡಿಕೊಂಡಿದ್ದೇವೆ ಅಂದಿದ್ದಾರೆ.

ಚನ್ನಪಟ್ಟಣ ಟಿಕೆಟ್​ಗೆ ಸಿಪಿವೈ ಪಟ್ಟು: ದಳಪತಿಗಳಿಗೆ ಇಕ್ಕಟ್ಟು

ಚನ್ನಪಟ್ಟಣ ಟಿಕೆಟ್​ ನನಗೆ ಸಿಕ್ಕೇ ಸಿಗುತ್ತದೆ. ಜನರ ಮುಂದೆ ಬಂದೇ ಬರುತ್ತೇನೆ ಎಂದು ಬುಧವಾರ ಕಾರ್ಯಕರ್ತರ ಸಭೆಯಲ್ಲೇ ಸಿಪಿ ಯೋಗೇಶ್ವರ್ ಘೋಷಣೆ ಮಾಡಿದ್ದಾರೆ. ಇದೇ ವಿಚಾರದಲ್ಲಿ ಇದೀಗ ದಳಪತಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಿಪಿ ಯೋಗೇಶ್ವರ್​ನ್ನ ಮನವೊಲಿಸಿ ಚುನಾವಣೆ ನಡೆಸಬೇಕು ಎಂದು ಯೋಜನೆ ಹಾಕಿಕೊಂಡಿದ್ದ ಹೆಚ್​ಡಿ ಕುಮಾರಸ್ವಾಮಿಗೆ ಆತಂಕ ಶುರುವಾಗಿದೆ. ಇನ್ನು ನಿಖಿಲ್ ಕುಮಾರಸ್ವಾಮಿಯನ್ನೇ ಕಣಕ್ಕಿಳಿಸಬೇಕು ಎಂದು ಕಾರ್ಯಕರ್ತರ ಒತ್ತಡ ಕೂಡ ಇದೆ. ಇದರ ಬಗ್ಗೆ ಹೈಕಮಾಂಡ್ ನಾಯಕರ ಜೊತೆಯೂ ಹೆಚ್​ಡಿಕೆ ಚರ್ಚೆ ಮಾಡಿದ್ದಾರೆ. ಇದೀಗ ಟಿಕೆಟ್ ಫೈನಲ್ ಸಂಬಂಧ ಇವತ್ತು ಅಥವಾ ನಾಳೆ ಚನ್ನಪಟ್ಟಣ ಕಾರ್ಯಕರ್ತರ ಜೊತೆ ಹೆಚ್​ಡಿಕೆ ಮಹತ್ವದ ಸಭೆ ಮಾಡಲಿದ್ದಾರೆ.

ಪುತ್ರನಿಗೆ ಟಿಕೆಟ್ ಕೊಡಿಸಲು ಬೊಮ್ಮಾಯಿ ಕಸರತ್ತು

ಇನ್ನು ಶಿಗ್ಗಾಂವಿ ಬೈಎಲೆಕ್ಷನ್​ ಟಿಕೆಟ್​ಗೆ ಬಿಜೆಪಿಯಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಪುತ್ರನಿಗೆ ಟಿಕೆಟ್ ಕೊಡಿಸಲು ಸಂಸದ ಬಸವರಾಜ ಬೊಮ್ಮಾಯಿ ಕಸರತ್ತು ನಡೆಸುತ್ತಿದ್ದಾರೆ. ಇನ್ನು ರೇಸ್​ನಲ್ಲಿ ಮುರುಗೇಶ್ ನಿರಾಣಿ, ಶ್ರೀಕಾಂತ್ ದುಂಡಿಗೌಡರ ಹೆಸರು ಮುಂಚೂಣಿಯಲ್ಲಿದೆ. ಹೀಗಾಗಿ ವರಿಷ್ಠರ ನಿರ್ಧಾರಕ್ಕೆ ಬೊಮ್ಮಾಯಿ ಕಾದು ಕುಳಿತಿದ್ದಾರೆ.

ಯಡಿಯೂರಪ್ಪ ಭೇಟಿಯಾದ ಸಂಸದ ಬೊಮ್ಮಾಯಿ

ಟಿಕೆಟ್​ ವಿಚಾರವಾಗಿ ವರಿಷ್ಠರ ಜೊತೆ ಚರ್ಚೆ ಮಾಡುವ ಮುನ್ನ ಯಡಿಯೂರಪ್ಪರನ್ನ ಭೇಟಿಯಾಗಿ ಬೊಮ್ಮಾಯಿ ಚರ್ಚೆ ಮಾಡಿದ್ದಾರೆ. ಬೆಂಗಳೂರಿನ ಡಾಲರ್ಸ್​ ಕಾಲೋನಿಯಲ್ಲಿರುವ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ.

‘ಶಿಗ್ಗಾಂವಿ ಕ್ಷೇತ್ರದ ಆಕಾಂಕ್ಷಿ ನಾನು ಅಲ್ಲ’ ಎಂದ ನಿರಾಣಿ

ಮಾಜಿ ಸಚಿವ ಮುರುಗೇಶ್ ನಿರಾಣಿ ಹೆಸರು ಮುಂಚೂಣಿಯಲ್ಲಿದ್ದರೂ, ಶಿಗ್ಗಾಂವಿ ಕ್ಷೇತ್ರದ ಆಕಾಂಕ್ಷಿ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಉಪಚುನಾವಣೆ ತಂತ್ರ: ಡಿಸಿಎಂ, ಸಿಎಂಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣಗೋಪಾಲ ಖಡಕ್​ ಸೂಚನೆ

ಒಟ್ಟಾರೆಯಾಗಿ ಉಪಚುನಾವಣೆ ಗೆಲ್ಲಲು ಮೂರು ರಾಜಕೀಯ ನಾಯಕರು ಸನ್ನದ್ಧವಾಗಿದ್ದಾರೆ. ಗೆಲ್ಲುವ ಸೇನಾನಿಗಳ ಕಣಕ್ಕಿಳಿಸಲು ತೆರೆಮರೆಯಲ್ಲೇ ತಂತ್ರಗಾರಿಕೆ ನಡೆಯುತ್ತಿದೆ. ಆದರೆ, ಹೈವೋಲ್ಟೇಜ್ ಕದನವಾಗಿರುವ ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎಂಬ ಬಗ್ಗೆಯೇ ಭಾರೀ ಚರ್ಚೆ ನಡೆಯುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ