ಯಾವ ಕಾರಣಕ್ಕಾಗಿ ಸಂವಿಧಾನವನ್ನು ತಿದ್ದಬೇಕೆಂದು ಬಿಜೆಪಿ ಹೇಳಲಿ, ಇಲ್ಲವೇ ಅನಂತ್ ಕುಮಾರ್ ಹೆಗಡೆಯನ್ನು ಕಿತ್ತುಹಾಕಿ: ಕಾಂಗ್ರೆಸ್​​

ಸಂವಿಧಾನ ತಿದ್ದುಪಡಿ ಮಾಡಲು ಬಿಜೆಪಿ 400 ಸ್ಥಾನಗಳನ್ನು ಗೆಲ್ಲಬೇಕು ಎಂಬ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಇದೀಗ ಕಾಂಗ್ರೆಸ್​ ಕಿಡಿಕಾರಿದೆ. ಯಾವ ಕಾರಣಕ್ಕಾಗಿ ಸಂವಿಧಾನವನ್ನು ತಿದ್ದಬೇಕು ಎಂಬುದನ್ನು ಬಿಜೆಪಿ ಹೇಳಬೇಕು, ಇಲ್ಲವೇ ಅನಂತ್ ಕುಮಾರ್ ಹೆಗಡೆ ಎಂಬ ಕೀಚಕನನ್ನು ಪಕ್ಷದಿಂದ ಕಿತ್ತುಹಾಕಿ ಆತನ ಪರವಾಗಿ ಕ್ಷಮೆ ಯಾಚಿಸಬೇಕು ಎಂದು ವಾಗ್ದಾಳಿ ಮಾಡಿದೆ.

ಯಾವ ಕಾರಣಕ್ಕಾಗಿ ಸಂವಿಧಾನವನ್ನು ತಿದ್ದಬೇಕೆಂದು ಬಿಜೆಪಿ ಹೇಳಲಿ, ಇಲ್ಲವೇ ಅನಂತ್ ಕುಮಾರ್ ಹೆಗಡೆಯನ್ನು ಕಿತ್ತುಹಾಕಿ: ಕಾಂಗ್ರೆಸ್​​
ಅನಂತ್ ಕುಮಾರ್ ಹೆಗಡೆ, ಕಾಂಗ್ರೆಸ್​
Follow us
|

Updated on: Mar 10, 2024 | 8:11 PM

ಬೆಂಗಳೂರು, ಮಾರ್ಚ್​ 10:ಯಾವ ಕಾರಣಕ್ಕಾಗಿ ಸಂವಿಧಾನವನ್ನು ತಿದ್ದಬೇಕು ಎಂಬುದನ್ನು ಬಿಜೆಪಿ ಹೇಳಬೇಕು, ಇಲ್ಲವೇ ಅನಂತ್ ಕುಮಾರ್ ಹೆಗಡೆ (Anantkumar Hegde) ಎಂಬ ಕೀಚಕನನ್ನು ಪಕ್ಷದಿಂದ ಕಿತ್ತುಹಾಕಿ ಆತನ ಪರವಾಗಿ ಕ್ಷಮೆ ಯಾಚಿಸಬೇಕು ಎಂದು ರಾಜ್ಯ ಕಾಂಗ್ರೆಸ್ ವಾಗ್ದಾಳಿ ಮಾಡಿದೆ. ಈ ಕುರಿತಾಗಿ ಟ್ವೀಟ್​ ಮಾಡಿರುವ ಕಾಂಗ್ರೆಸ್ ಸಂವಿಧಾನವನ್ನು ಬದಲಿಸುತ್ತೇವೆ, ಸಂವಿಧಾನವನ್ನು ತಿದ್ದುಪಡಿ ಮಾಡುತ್ತೇವೆ ಎನ್ನುತ್ತಿರುವ ಬಿಜೆಪಿಗೆ ಸಂವಿಧಾನದ ಯಾವ ಭಾಗ, ಯಾವ ಅಂಶ, ಯಾವ ಅನುಚ್ಚೇದ, ಯಾವ ಕಲಂ ಬಗ್ಗೆ ಅಸಹನೆ ಹೊಂದಿದೆ ಎಂದು ಹೇಳಬೇಕು? ಸಂವಿಧಾನದಲ್ಲಿರುವ ಸ್ವತಂತ್ರದ ಹಕ್ಕಿನ ಬಗ್ಗೆ ಆಕ್ಷೇಪಣೆಯೇ? ಸಮತೆ, ಸಮಾನತೆ ಬೇಡವಾಗಿದೆಯೇ? ಶೋಷಣೆಯ ವಿರುದ್ಧದ ಹಕ್ಕು ಇರಬಾರದೇ? ಧಾರ್ಮಿಕ ಸ್ವತಂತ್ರದ ಹಕ್ಕು ಇರಬಾರದೇ? ವಾಕ್ ಹಾಗೂ ಅಭಿವ್ಯಕ್ತಿ ಸ್ವತಂತ್ರ ಬೇಡವೇ? ಶಿಕ್ಷಣದ ಹಕ್ಕು ಅಪರಾಧವೇ ಎಂದು ಪ್ರಶ್ನಿಸಿದೆ.

ನಾಲ್ಕೂವರೆ ವರ್ಷ ಮಲಗಿದ್ದು, ಚುನಾವಣೆಗಾಗಿ ಎದ್ದು ಬರುವ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಎಂಬ ಕ್ರಿಮಿ ಸಂಸತ್ತಿನಲ್ಲಿ ಕರ್ನಾಟಕದ ಪರ, ತನ್ನ ಕ್ಷೇತ್ರದ ಪರ ಮಾತಾಡಿದ ಇತಿಹಾಸವೇ ಇಲ್ಲ. ದಲಿತರನ್ನು “ಬೊಗಳುವ ನಾಯಿಗಳು” ಎಂದು ಅವಮಾನಿಸಿದ್ದ ಈ ಕೋಮುಕ್ರಿಮಿಯನ್ನು ಪಕ್ಷದಲ್ಲಿ ಇಟ್ಟುಕೊಳ್ಳುವ ಮೂಲಕ ಬಿಜೆಪಿ ಪಕ್ಷ ದಲಿತ ವಿರೋಧಿ, ಸಂವಿಧಾನ ವಿರೋಧಿ ಎಂದು ಸಾಬೀತು ಮಾಡಿದೆ ಎಂದು ಕಿಡಿಕಾರಿದೆ.

ಕಾಂಗ್ರೆಸ್​ ಟ್ವೀಟ್​

ಸಂವಿಧಾನದ ಅಡಿಯಲ್ಲಿ ನಡೆಯುತ್ತಿರುವ ಈ ದೇಶದಲ್ಲಿ ರಾಜಕೀಯ ಮಾಡುವುದಕ್ಕೆ, ಅಸ್ತಿತ್ವದಲ್ಲಿ ಇರುವುದಕ್ಕೆ ಬಿಜೆಪಿಗೆ ಅರ್ಹತೆ ಇಲ್ಲ. ದಲಿತರ ವಿರುದ್ಧ, ಸಂವಿಧಾನದ ವಿರುದ್ಧ ಸದಾ ಕಿಡಿಕಾರುವ ಬಿಜೆಪಿಯನ್ನು ಈ ರಾಜ್ಯದ ಹಾಗೂ ದೇಶದ ಜನ ತಿರಸ್ಕರಿಸುವುದು ಖಚಿತ ಎಂದಿದ್ದಾರೆ.

ಇದನ್ನೂ ಓದಿ: ಸಂವಿಧಾನ ತಿದ್ದುಪಡಿ ಮಾಡಲು ಬಿಜೆಪಿ 400 ಸ್ಥಾನಗಳನ್ನು ಗೆಲ್ಲಬೇಕು: ಅನಂತ್ ಕುಮಾರ್ ಹೆಗಡೆ

ಸಂವಿಧಾನ ಬದಲಿಸಲು 400 ಸ್ಥಾನಗಳು ಬೇಕು ಎಂಬ ಬಿಜೆಪಿ ಸಂಸದರ ಹೇಳಿಕೆ ನರೇಂದ್ರ ಮೋದಿ ಮತ್ತು ಅವರ ‘ಸಂಘ ಪರಿವಾರ’ದ ಗುಪ್ತ ಉದ್ದೇಶಗಳ ಬಹಿರಂಗ ಘೋಷಣೆಯಾಗಿದೆ. ಬಾಬಾ ಸಾಹೇಬರ ಸಂವಿಧಾನವನ್ನು ನಾಶ ಮಾಡುವುದೇ ನರೇಂದ್ರ ಮೋದಿ ಮತ್ತು ಬಿಜೆಪಿಯ ಅಂತಿಮ ಗುರಿಯಾಗಿದೆ. ಅವರು ನ್ಯಾಯ, ಸಮಾನತೆ, ನಾಗರಿಕ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​ ಟ್ವೀಟ್​

ಸಮಾಜವನ್ನು ವಿಭಜಿಸುವ ಮೂಲಕ, ಮಾಧ್ಯಮವನ್ನು ಗುಲಾಮರನ್ನಾಗಿ ಮಾಡುವ ಮೂಲಕ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸುವ ಮೂಲಕ, ವಿರೋಧವನ್ನು ತೊಡೆದುಹಾಕಲು ಸಂಚು ರೂಪಿಸುವ ಮೂಲಕ ಭಾರತದ ಮಹಾನ್ ಪ್ರಜಾಪ್ರಭುತ್ವವನ್ನು ಸಂಕುಚಿತ ಸರ್ವಾಧಿಕಾರವಾಗಿ ಪರಿವರ್ತಿಸಲು ಹೊರಟಿದ್ದಾರೆ ಎಂದರು.

ಇದನ್ನೂ ಓದಿ: ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್​ ನಾಯಕರು ಕರಿಮಣಿ ಮಾಲೀಕ ನಾನಲ್ಲ ಅಂತಿದ್ದಾರೆ: ಅನಂತ್ ಕುಮಾರ್ ಹೆಗಡೆ ವ್ಯಂಗ್ಯ

ಸ್ವಾತಂತ್ರ್ಯ ಸೇನಾನಿಗಳ ಕನಸುಗಳ ಜೊತೆಗಿನ ಈ ಷಡ್ಯಂತ್ರಗಳನ್ನು ನಾವು ಯಶಸ್ವಿಯಾಗಲು ಬಿಡುವುದಿಲ್ಲ ಮತ್ತು ನಮ್ಮ ಕೊನೆಯ ಉಸಿರು ಇರುವವರೆಗೂ ಸಂವಿಧಾನದ ಆಶಯಗಳು ಹಾಗು ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.