Oxygen Shortage| ಜೀವವಾಯು ಆಕ್ಸಿಜನ್​ಗಾಗಿ ಬಂಧುಗಳ ಪರದಾಟ.. ಕಣ್ಣ ಮುಂದೆಯೇ ಪತ್ನಿ ಸಾವು, ಪತಿಗೆ ಮುಂದುವರಿದ ಚಿಕಿತ್ಸೆ

ಆಕ್ಸಿಜನ್ ಸಿಗದೆ 61 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ 8.30ಕ್ಕೆ ಆಕ್ಸಿಜನ್ ಕೊರತೆಯಿಂದ ಮಹಿಳೆ ಕೊನೆಯುಸಿರೆಳೆದಿದ್ದಾರೆ.

Oxygen Shortage| ಜೀವವಾಯು ಆಕ್ಸಿಜನ್​ಗಾಗಿ ಬಂಧುಗಳ ಪರದಾಟ.. ಕಣ್ಣ ಮುಂದೆಯೇ  ಪತ್ನಿ ಸಾವು, ಪತಿಗೆ ಮುಂದುವರಿದ ಚಿಕಿತ್ಸೆ
ಸಂಗ್ರಹ ಚಿತ್ರ
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Apr 20, 2021 | 2:53 PM

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ನೀಡಲು ಈಗ ಆಕ್ಸಿಜನ್ ಕೊರತೆ ಎದುರಾಗಿದೆ. ಹೆಮ್ಮಾರಿ ದಾಳಿಗೆ ತುತ್ತಾಗಿ ಆಸ್ಪತ್ರೆ ಸೇರಿದವರು, ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾರೆ. ಉಸಿರಾಡೋಕೆ ಆಗದೇ, ಒದ್ದಾಡ್ತಿದ್ದಾರೆ. ನಡುವೆ ಆಕ್ಸಿಜನ್ ಸಿಗದೆ 61 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ 8.30ಕ್ಕೆ ಆಕ್ಸಿಜನ್ ಕೊರತೆಯಿಂದ ಮಹಿಳೆ ಕೊನೆಯುಸಿರೆಳೆದಿದ್ದಾರೆ.

ಕಳೆದ ನಾಲ್ಕು ದಿನದ ಹಿಂದೆ ಕೊವಿಡ್ ಪರೀಕ್ಷೆಗೆ ಒಳಪಟ್ಟಿದ್ದ ದಂಪತಿಗೆ ಪಾಸಿಟಿವ್ ಇರೋದು ದೃಢಪಟ್ಟಿತ್ತು. ಕೂಡಲೇ ಬನಶಂಕರಿ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಾಲಾಗಿದ್ದರು. ನಿನ್ನೆ ಸಂಜೆ ಕೊರೊನಾ ಸೋಂಕಿತ ಮಹಿಳೆಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಆದ್ರೆ ಇದೇ ವೇಳೆ ಆಸ್ಪತ್ರೆಯಲ್ಲಿ ಜೀವ ರಕ್ಷಕ ಆಕ್ಸಿಜನ್ ಕೊರತೆ ಉಂಟಾಗಿದೆ. ತಕ್ಷಣವೇ ಮಹಿಳೆಯನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ತಿಳಿಸಿದ್ದಾರೆ. ದಂಪತಿ ಸ್ನೇಹಿತರು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯ ಹೆಲ್ಫ್ ಲೈನ್​ಗೆ ಕರೆ ಮಾಡಿದ್ದಾರೆ.

ಸಾಕಷ್ಟು ಬಾರಿ ಕರೆ ಮಾಡಿ ಮಹಿಳೆಗೆ ಆಕ್ಸಿಜನ್ ಬೇಕಾಗಿದೆ. ಅದಷ್ಟು ಬೇಗ ಬೆಡ್ ವ್ಯವಸ್ಥೆ ಮಾಡಿ ಎಂದು ಎಷ್ಟೇ ಅಂಗಲಾಚಿದರೂ ಬಿಯು ನಂಬರ್ ಇಲ್ಲದೇ ಆಸ್ಪತ್ರೆಗೆ ಸೇರಿಸಲು ಆಗಲ್ಲ ಎಂದು 108 ಸಿಬ್ಬಂದಿ ಅಸಡ್ಡೆ ಮಾಡಿದ್ದಾರೆ. ನಾಲ್ಕು ದಿನದ ಹಿಂದೆಯೇ ಕೊವಿಡ್ ದೃಢಪಟ್ಟಿದ್ರು ಇಲ್ಲಿವರೆಗೆ ಬಿಯು ನಂಬರ್ ಜನರೇಟ್ ಆಗಿರಲಿಲ್ಲ. ಜೊತೆಗೆ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಮತ್ತು ಆಕ್ಸಿಜನ್ ಸಿಗದೇ ಮಹಿಳೆ ಮೃತಪಟ್ಟಿದ್ದಾರೆ. ಸದ್ಯ ಪತಿ ಅದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಸಾವಿಗೂ ಮುನ್ನ ಕೊರೊನಾ ಕರಾಳತೆ, ಆಸ್ಪತ್ರೆ ಅವ್ಯವಸ್ಥೆ ಬಯಲು ಮಾಡಿದ ಯುವಕ.. ಕೊನೆಗೆ ನರಳಿ ನರಳಿ ಪ್ರಾಣ ಬಿಟ್ಟ

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us