D Roopa Moudgil: ಯಾರು ಡಿ ರೂಪಾ ಮೌದ್ಗಿಲ್? ರೋಹಿಣಿ ಸಿಂಧೂರಿ ಜತೆ ಕದನಕ್ಕೆ ಕಾರಣವೇನು? ಇಲ್ಲಿದೆ ವಿವರ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜೆಡಿಎಸ್ ಶಾಸಕ ಸಾರಾ ಮಹೇಶ್ ಜತೆ ಸಂಧಾನಕ್ಕೆ ಮುಂದಾಗಿದ್ದರು ಎಂಬ ವರದಿಗಳ ಬಗ್ಗೆ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಪ್ರಶ್ನೆಗಳನ್ನೆತ್ತಿರುವುದು ಈಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ರೂಪಾ ಮೌದ್ಗಿಲ್ ಯಾರು? ಈ ಹಿಂದೆ ಅವರು ಯಾವೆಲ್ಲ ಪ್ರಕರಣಗಳಲ್ಲಿ ಸುದ್ದಿಯಾಗಿದ್ದಾರೆ? ಇಲ್ಲಿದೆ ಮಾಹಿತಿ.

D Roopa Moudgil: ಯಾರು ಡಿ ರೂಪಾ ಮೌದ್ಗಿಲ್? ರೋಹಿಣಿ ಸಿಂಧೂರಿ ಜತೆ ಕದನಕ್ಕೆ ಕಾರಣವೇನು? ಇಲ್ಲಿದೆ ವಿವರ
ಡಿ. ರೂಪಾ ಮತ್ತು ರೋಹಿಣಿ ಸಿಂಧೂರಿ
Follow us
| Updated By: Digi Tech Desk

Updated on:Feb 20, 2023 | 3:53 PM

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಅವರು ಜೆಡಿಎಸ್ ಶಾಸಕ ಸಾರಾ ಮಹೇಶ್ (SaRa mahesh) ಜತೆ ಸಂಧಾನಕ್ಕೆ ಮುಂದಾಗಿದ್ದರು ಎಂಬ ವರದಿಗಳ ಬಗ್ಗೆ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ (D Roopa Moudgil) ಪ್ರಶ್ನೆಗಳನ್ನೆತ್ತಿರುವುದು ಈಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ರೋಹಿಣಿ ಸಿಂಧೂರಿ ಮತ್ತು ರೂಪಾ ಮೌದ್ಗಿಲ್ ನಡುವಣ ಆರೋಪ – ಪ್ರತ್ಯಾರೋಪಗಳು ಮತ್ತು ವಾಕ್ಸಮರಗಳು ತಾರಕಕ್ಕೇರಿವೆ. ರೋಹಿಣಿ ಸಿಂಧೂರಿ ಸಂಧಾನಕ್ಕೆ ತೆರಳಿದ್ದ ವಿಚಾರವಾಗಿ ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮ ಫೇಸ್​ಬುಕ್​ನಲ್ಲಿ ಪ್ರಸ್ತಾಪಿಸಿದ್ದ ರೂಪಾ, ಐಎಎಸ್ ಅಧಿಕಾರಿ ಆಗಿ ರಾಜಕಾರಣಿಗಳ ಬಳಿ ಸಂಧಾನಕ್ಕೆ ಯಾಕೆ ಹೋಗಬೇಕು? ದೇಶದ ಇತಿಹಾಸದಲ್ಲಿ ಮೊದಲ ಬಾರಿ ಐಎಎಸ್ ರಾಜಕಾರಣಿ ಬಳಿ ಸಂಧಾನಕ್ಕೆ ಹೋಗಿದ್ದಾರೆ. ರಾಜಕಾರಣಿ ಬಳಿ ಐಎಎಸ್ ಅಧಿಕಾರಿ ಹೋಗಿರುವುದು ಖೇದ ಅನಿಸುತ್ತಿದೆ ಎಂದ ಹೇಳಿದ್ದರು. ಜತೆಗೆ ರೋಹಿಣಿ ಸಿಂಧೂರಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ಆಗಬೇಕು ಎಂದೂ ಆಗ್ರಹಿಸಿದ್ದರು. ರೋಹಿಣಿ ಸಿಂಧೂರಿ ಕಳುಹಿಸಿದ್ದು ಎನ್ನಲಾದ ಕೆಲವು ಖಾಸಗಿ ಫೋಟೊಗಳನ್ನೂ ಬಹಿರಂಗಪಡಿಸಿದ್ದರು. ಹಾಗಿದ್ದರೆ ಈ ರೂಪಾ ಮೌದ್ಗಿಲ್ ಯಾರು? ಈ ಹಿಂದೆ ಅವರು ಯಾವೆಲ್ಲ ಪ್ರಕರಣಗಳಲ್ಲಿ ಸುದ್ದಿಯಾಗಿದ್ದಾರೆ? ಇಲ್ಲಿದೆ ಮಾಹಿತಿ.

2000ನೇ ಇಸ್ವಿಯ ಬ್ಯಾಚ್​​ನ ಐಪಿಎಸ್ ಅಧಿಕಾರಿಯಾಗಿರುವ ರೂಪಾ ಮೌದ್ಗಿಲ್ ಮೂಲತಃ ದಾವಣಗೆರೆಯವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಪದವಿ ಪೂರೈಸಿದ್ದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಯುಪಿಎಸ್​ಸಿ ಪರೀಕ್ಷೆಯಲ್ಲಿ 43ನೇ ರ‍್ಯಾಂಕ್ ಗಳಿಸಿದ್ದ ಇವರು ಹೈದರಾಬಾದ್​​ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಆ ಬ್ಯಾಚ್​​ನಲ್ಲಿ ತರಬೇತಿ ಪಡೆದ ಅಧಿಕಾರಿಗಳ ಪೈಕಿ ಐದನೇ ರ‍್ಯಾಂಕ್ ಗಳಿಸಿದ್ದರು. ನಂತರ ಕರ್ನಾಟಕ ಕೇಡರ್​​ನ ಅಧಿಕಾರಿಯಾಗಿ ನಿಯುಕ್ತಿಗೊಂಡರು.

20 ವರ್ಷಗಳಿಗಿಂತಲೂ ಹೆಚ್ಚಿನ ಸೇವೆ

ತರಬೇತಿಯ ನಂತರ, ರೂಪಾ ಅವರನ್ನು ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) ನಿಯೋಜಿಸಲಾಯಿತು. ಗದಗ ಜಿಲ್ಲೆ, ಬೀದರ್ ಮತ್ತು ಅಂತಿಮವಾಗಿ ಯಾದಗಿರಿ ಜಿಲ್ಲೆಯಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ ನಂತರ ಅವರು ಬೆಂಗಳೂರಿಗೆ ವರ್ಗಾವಣೆಗೊಂಡರು.

ಉಮಾಭಾರತಿಯ ಬಂಧಿಸಿದ್ದ ರೂಪಾ

2007ರಲ್ಲಿ, ಹುಬ್ಬಳ್ಳಿಯ ನ್ಯಾಯಾಲಯದ ಆದೇಶದಂತೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆಗಿನ ಮಧ್ಯಪ್ರದೇಶದ ಮುಖ್ಯಮಂತ್ರಿ ಮತ್ತು ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಅವರನ್ನು ರೂಪಾ ಬಂಧಿಸಿದ್ದರು. 2013ರಲ್ಲಿ ಅವರು ಸೈಬರ್​ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಧಿಕಾರ ಸ್ವೀಕರಿಸಿದರು. ಇದರೊಂದಿಗೆ ಸೈಬರ್​ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯಾಗಿ ನಿಯುಕ್ತಿಗೊಂಡ ದೇಶದ ಮೊದಲ ಮಹಿಳಾ ಪೊಲೀಸ್ ಅಧಿಕಾರಿಯಾಗಿಯೂ ಗುರುತಿಸಿಕೊಂಡರು.

20 ವರ್ಷಗಳಲ್ಲಿ 40 ಬಾರಿ ವರ್ಗಾವಣೆ

ನೇರ, ನಿಷ್ಠುರ ಸ್ವಭಾವದಿಂದ ಮತ್ತು ದಿಟ್ಟ ನಡೆಗಳಿಂದಲೇ ಕಾರ್ಯಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಡಿ. ರೂಪಾ 20 ವರ್ಷಗಳಿಗೂ ಹೆಚ್ಚು ಅವಧಿಯ ಸೇವೆಯಲ್ಲಿ ಸುಮಾರು 40 ಬಾರಿ ವರ್ಗಾವಣೆಗೊಂಡಿದ್ದಾರೆ. 2017ರ ಜೂನ್​ನಲ್ಲಿ ಬಂದೀಖಾನೆ ಡಿಐಜಿಪಿಯಾಗಿ ಅಧಿಕಾರ ವಹಿಸಿದ್ದರು. ಆ ಸಂದರ್ಭದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾನೂನುಬಾಹಿರವಾಗಿ ಸವಲತ್ತುಗಳನ್ನು ಒದಗಿಸಿಕೊಡುತ್ತಿರುವುದನ್ನು ಬಹಿರಂಗಪಡಿಸಿದ್ದರು. ಬಳಿಕ ಅವರನ್ನು ರಸ್ತೆ ಸುರಕ್ಷತೆ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು.

ಇದನ್ನೂ ಓದಿ: Rohini Sindhuri: ರೋಹಿಣಿ ಸಿಂಧೂರಿ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ದಿನೇಶ್​ ಕಲ್ಲಹಳ್ಳಿ ದೂರು

ಹೇಮಂತ್ ನಿಂಬಾಳ್ಕರ್ ವಿರುದ್ಧ ಆರೋಪ ಮಾಡಿದ್ದ ರೂಪಾ

2020ರಲ್ಲಿ 612 ಕೋಟಿ ರೂ. ವೆಚ್ಚದ ‘ಸುರಕ್ಷ ನಗರ’ ಯೋಜನೆ ಟೆಂಡರ್ ವಿಚಾರದಲ್ಲಿ ಆಗಿನ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಕಮಿಷನರ್ (ಆಡಳಿತ) ಹೇಮಂತ್ ನಿಂಬಾಳ್ಕರ್ ವಿರುದ್ಧ ರೂಪಾ ಅಕ್ರಮದ ಆರೋಪ ಮಾಡಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ನಂತರ ಇಬ್ಬರನ್ನೂ ಸರ್ಕಾರ ವರ್ಗಾವಣೆ ಮಾಡಿತ್ತು.

ಈಗ ಯಾವ ಹುದ್ದೆಯಲ್ಲಿದ್ದಾರೆ ರೂಪಾ?

ರೂಪಾ ಅವರು ಪ್ರಸ್ತುತ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾರೆ. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿಗೆ ಆ ಹುದ್ದೆ ಕೊಟ್ಟ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ 2022ರ ಅಕ್ಟೋಬರ್​​ನಲ್ಲಿ ಸುದ್ದಿಯಾಗಿದ್ದರು. ರಾಘವೇಂದ್ರ ಶೆಟ್ಟಿ ವಿರುದ್ಧ 31 ಕ್ರಿಮಿನಲ್ ಕೇಸ್, 15 ವಾರಂಟ್ ಇದೆ. ಅಂಥವರಿಗೆ ಯಾಕೆ ಆ ಹುದ್ದೆ ಕೊಟ್ಟಿದ್ದಾರೆ ಗೊತ್ತಿಲ್ಲ ಎಂದು ಹೇಳಿದ್ದರು.

ರೋಹಿಣಿ ಸಿಂಧೂರಿ ಜತೆ ಜಟಾಪಟಿ

ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕರ್ತವ್ಯ ಲೋಪ ಸೇರಿದಂತೆ ಹಲವು ಆರೋಪಗಳನ್ನು ರೂಪಾ ಮಾಡಿದ್ದಾರೆ. ಸಾರಾ ಮಹೇಶ್ ಜತೆಗಿನ ಸಂಧಾನ ಯತ್ನದ ವರದಿಗಳ ಬೆನ್ನಲ್ಲೇ, ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಪಡಿಸಿದ್ದಾರೆ. ಇದು ಇಬ್ಬರ ನಡುವಣ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:36 pm, Mon, 20 February 23