ಟೊಮೆಟೊ ಆಯ್ತು, ಈಗ ಈರುಳ್ಳಿ ಸರದಿ; ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಬೆಲೆ ಏರಿಕೆ

Onion Price Hike; ಮಂಗಳೂರಿನಲ್ಲಿ ಕಳೆದ ಎರಡು ವಾರಗಳಿಂದ ಈರುಳ್ಳಿ ಬೆಲೆ ನಿರಂತರವಾಗಿ ಏರಿಕೆಯಾಗಿದೆ. ಕಳೆದ ವಾರ ಕ್ವಿಂಟಲ್‌ಗೆ 2000 ರೂ.ಗೆ ತಲುಪಿತ್ತು. ಇದೀಗ 2900 ರೂ. ದಾಟಿದೆ. ಕಳೆದ ವಾರ 26 ರೂ.ಗೆ ಮಾರಾಟವಾಗುತ್ತಿದ್ದ ಒಂದು ಕಿಲೋ ಈರುಳ್ಳಿ ಇದೀಗ 34 ರಿಂದ 35 ರೂ.ಗೆ ಮಾರಾಟವಾಗುತ್ತಿದೆ.

ಟೊಮೆಟೊ ಆಯ್ತು, ಈಗ ಈರುಳ್ಳಿ ಸರದಿ; ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಬೆಲೆ ಏರಿಕೆ
ಸಾಂದರ್ಭಿಕ ಚಿತ್ರ

Updated on: Aug 18, 2023 | 10:32 PM

ಮಂಗಳೂರು, ಆಗಸ್ಟ್ 18: ಟೊಮೆಟೊ ದರ ಕ್ರಮೇಣ ಇಳಿಮುಖವಾಗುತ್ತಿರುವಂತೆಯೇ ಇದೀಗ ಈರುಳ್ಳಿ ದರ (Onion Price) ಗಗನಮುಖಿಯಾಗತೊಡಗಿದೆ. ಮಂಗಳೂರು ನಗರ (Mangalore City) ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada District) ಈರುಳ್ಳಿ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ. ದೇಶದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರದಿಂದ ಪೂರೈಕೆ ಕಳೆದ ಎರಡು ವಾರಗಳಿಂದ ಕಡಿಮೆಯಾಗಿದೆ. ಹೀಗಾಗಿ ಈರುಳ್ಳಿ ಬೆಲೆ ಏರುಗತಿಯಲ್ಲಿ ಸಾಗಿದೆ ಎಂದು ಮೂಲಗಳು ತಿಳಿಸಿವೆ.

ನಾಸಿಕ್‌ನ ಲಾಸಲ್‌ಗಾಂವ್‌ನ ಎಪಿಎಂಸಿಯ ತರಕಾರಿಯ ಅತಿದೊಡ್ಡ ಸಗಟು ಮಾರುಕಟ್ಟೆಯಲ್ಲಿ ಆಗಸ್ಟ್ 4 ರಂದು ಈರುಳ್ಳಿ ಬೆಲೆ ಕ್ವಿಂಟಲ್‌ಗೆ 1550 ರೂ.ಗಳಿಂದ 2300 ರೂ. ವರೆಗೆ ಏರಿಕೆಯಾಗಿತ್ತು. ಇದು ಕಳೆದ ಎಂಟು ತಿಂಗಳಲ್ಲೇ ದಾಖಲಾದ ಗರಿಷ್ಠ ಬೆಲೆಯಾಗಿದೆ.

ಮಂಗಳೂರಿನಲ್ಲಿ ಕಳೆದ ಎರಡು ವಾರಗಳಿಂದ ಈರುಳ್ಳಿ ಬೆಲೆ ನಿರಂತರವಾಗಿ ಏರಿಕೆಯಾಗಿದೆ. ಕಳೆದ ವಾರ ಕ್ವಿಂಟಲ್‌ಗೆ 2000 ರೂ.ಗೆ ತಲುಪಿತ್ತು. ಇದೀಗ 2900 ರೂ. ದಾಟಿದೆ. ಕಳೆದ ವಾರ 26 ರೂ.ಗೆ ಮಾರಾಟವಾಗುತ್ತಿದ್ದ ಒಂದು ಕಿಲೋ ಈರುಳ್ಳಿ ಇದೀಗ 34 ರಿಂದ 35 ರೂ.ಗೆ ಮಾರಾಟವಾಗುತ್ತಿದೆ.

ನಾಸಿಕ್‌ನ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ಕಾರಣ, ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ. ಇದು ಬೆಲೆ ಏರಿಕೆಗೆ ಕಾರಣವಾಗಿದೆ. ಈ ಹಿಂದೆ ನಾಸಿಕ್ ಮಾರುಕಟ್ಟೆಯಿಂದ 25 ಸಾವಿರದಿಂದ 30 ಸಾವಿರ ಕ್ವಿಂಟಲ್ ಈರುಳ್ಳಿ ಪೂರೈಕೆಯಾಗುತ್ತಿತ್ತು. ಈಗ ಅದು 10,000 ಕ್ವಿಂಟಲ್‌ಗೆ ಇಳಿಕೆಯಾಗಿದೆ.

ಇದನ್ನೂ ಓದಿ: ಮಂಗಳೂರು: ಅಕ್ಕಿ ಇಲ್ಲವೆಂದು ಪೇಚಾಡುವ ಸರ್ಕಾರ; ತನ್ನದೇ ಗೋದಾಮಿನಿಂದ ಕೋಟ್ಯಾಂತರ ರೂ. ಅಕ್ಕಿ ಮಾಯ

ಲಭ್ಯವಿರುವ ಪೂರೈಕೆಗೆ ಹೋಲಿಸಿದರೆ ಸ್ಥಳೀಯ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಬೇಡಿಕೆ ಹೆಚ್ಚಿದೆ. ಮಳೆಯಿಂದಾಗಿ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಈರುಳ್ಳಿ ಕೊಯ್ಲು ಒಂದು ತಿಂಗಳು ವಿಳಂಬವಾಗಿದೆ. ಮಹಾರಾಷ್ಟ್ರದ ಅಹಮದ್ ನಗರದಲ್ಲಿಯೂ ಪೂರೈಕೆ ಕಡಿಮೆಯಾಗಿದೆ. ಬಾಂಗ್ಲಾದೇಶದಿಂದ ಈರುಳ್ಳಿಗೆ ಹೆಚ್ಚಿನ ಬೇಡಿಕೆ ಇದೆ, ಇದರ ಪರಿಣಾಮವಾಗಿ ಈರುಳ್ಳಿ ಬೆಲೆ ಏರುತ್ತಿದೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ