
ಮಂಗಳೂರು, ಸೆ.9: ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ನಡುಮನೆ, ಸುದೆಕಟ್ಟೆಮಾರು ಹಾಗೂ ಪುಂಜಾವು ಭಾಗದ ಸಾರ್ವಜನಿಕರು ವರ್ಷಗಳಿಂದ ಬಳಸುತ್ತಿದ್ದ 150 ವರ್ಷ ಹಳೆಯ ಸಾಂಪ್ರದಾಯಿಕ ಕಾಲುದಾರಿಯನ್ನು ಇತ್ತೀಚೆಗೆ ಬಂದ್ ಮಾಡಲಾಗಿದೆ. ಇದೀಗ ಈ ದಾರಿಯನ್ನು ಬಂದ್ ಮಾಡಿ ಜನರಿಗೆ ಸಂಚಾರ ಮಾಡಲು ಕಷ್ಟವಾಗುತ್ತಿದೆ. ಈ ದಾರಿ ಮುಚ್ಚಿದಕ್ಕೆ ಸಾರ್ವಜನಿಕರಲ್ಲಿ ಅಕ್ರೋಶ ವ್ಯಕ್ತವಾಗಿದೆ. ದಾರಿಯನ್ನು ತಕ್ಷಣವೇ ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಬಂಟ್ವಾಳ ತಹಶೀಲ್ದಾರ್ಗೆ ಮನವಿ ಸಲ್ಲಿಸಿದ್ದಾರೆ.
ಅನಂತಾಡಿ ಗ್ರಾಮದ ಸರ್ವೆ ನಂಬರ್ 137ರಲ್ಲಿರುವ ಈ ಕಾಲುದಾರಿಯನ್ನು ಕಳೆದ ಒಂದೂವರೆ ಶತಮಾನಕ್ಕೂ ಹೆಚ್ಚು ಕಾಲದಿಂದ ಗ್ರಾಮಸ್ಥರು ಬಳಸಿಕೊಂಡು ಬರುತ್ತಿದ್ದರು. ಆದರೆ ಇತ್ತೀಚೆಗೆ ಈ ದಾರಿಯನ್ನು ದಿಢೀರ್ ಬಂದ್ ಮಾಡಲಾಗಿದ್ದು, ಇದರಿಂದ ಈ ಮಾರ್ಗವನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡಿದ್ದ 50ಕ್ಕೂ ಹೆಚ್ಚು ಕುಟುಂಬಗಳು ನಿತ್ಯದ ಓಡಾಟಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ದಾರಿಯ ತಡೆಯಿಂದಾಗಿ ಗ್ರಾಮದ ಶಾಲಾ ಮಕ್ಕಳು, ವೃದ್ಧರು ಹಾಗೂ ಸಾರ್ವಜನಿಕರಿಗೆ ದಿನನಿತ್ಯ ಕೆಲಸಕ್ಕೆ ಹೋಗಲು ಕಷ್ಟವಾಗಿದೆ. ಪುಟ್ಟ ಪುಟ್ಟ ಮಕ್ಕಳು ಅಂಗನವಾಡಿಗೆ, ಹಾಲು ಡೈರಿ, ಅಂಚೆ ಕಚೇರಿ (ಪೋಸ್ಟ್ ಆಫೀಸ್)ಆಸ್ಪತ್ರೆಗಳಿಗೆ ತೆರಳಲು ತೀವ್ರ ತೊಂದರೆಯಾಗುತ್ತಿದೆ. ವಿಶೇಷವಾಗಿ ವಯೋವೃದ್ಧರು ತಮ್ಮ ವೃದ್ಧಾಪ್ಯ ವೇತನ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅಂಚೆ ಕಚೇರಿಗೆ ತಲುಪಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿನಿಯರ ಉಡುಪು ಕಳ್ಳತನ ಮಾಡ್ತಿದ್ದ ವ್ಯಕ್ತಿ ಬಂಧನ
ಸಾರ್ವಜನಿಕ ಹಿತದೃಷ್ಟಿಯಿಂದ ತಹಶೀಲ್ದಾರ್ ಅವರು ತಕ್ಷಣ ಮಧ್ಯಪ್ರವೇಶಿಸಿ, ಕಾಲುದಾರಿಗೆ ಹಾಕಲಾಗಿರುವ ತಡೆಯನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಂತ್ರಸ್ತ ಗ್ರಾಮಸ್ಥರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:51 pm, Wed, 9 September 26