
ಬೆಳ್ತಂಗಡಿ, ಜೂ.2: ತಾಲೂಕಿನ ಬೆಳಾಲು ಗ್ರಾಮದ ಮಾಯ ಪರಿಸರದ ಮುಂಡ್ರೋಟ್ಟು ಎಂಬಲ್ಲಿನ ನಿವಾಸಿಗಳು ತೀವ್ರ ಕುಡಿಯುವ ನೀರಿನ ಸಮಸ್ಯೆಯಿಂದ ತತ್ತರಿಸುತ್ತಿದ್ದು, ದೈನಂದಿನ ಬಳಕೆಗಾಗಿ ಕಲುಷಿತಗೊಂಡ ಹೊಂಡದ ನೀರನ್ನೇ ಆಶ್ರಯಿಸಬೇಕಾದ ದಾರುಣ ಸ್ಥಿತಿ ನಿರ್ಮಾಣವಾಗಿದೆ. ಈ ಭಾಗದ ಸಣ್ಣ ಹೊಂಡ ಅಥವಾ ಗುಂಡಿಗಳಲ್ಲಿ ಶೇಖರಣೆಯಾಗುವ, ಕೀಟ ಹಾಗೂ ಕಸಕಡ್ಡಿಗಳಿಂದ ಕಲುಷಿತಗೊಂಡಿರುವ ಅಶುದ್ಧ ನೀರನ್ನೇ ಇಲ್ಲಿನ ಮಹಿಳೆಯರು ಮತ್ತು ಮಕ್ಕಳು ಕೊಡಗಳಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದಾರೆ. ಕುಡಿಯಲು, ಅಡುಗೆ ಮಾಡಲು ಹಾಗೂ ಸ್ನಾನ ಸೇರಿದಂತೆ ಇತರೆ ಎಲ್ಲಾ ಗೃಹ ಬಳಕೆಗೂ ಇದೇ ನೀರನ್ನು ಬಳಸುತ್ತಿರುವುದರಿಂದ ಸ್ಥಳೀಯರ ಆರೋಗ್ಯದ ಮೇಲೆ ತೀವ್ರ ನಿಗಾ ಇಡಬೇಕಾದ ಆತಂಕ ಎದುರಾಗಿದೆ. ಈ ಬಗ್ಗೆ ವಿಜೆ ಶಿವು (@vj___shivu) ಎಂಬ ಇನ್ಸ್ಟಾಗ್ರಾಮ್ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಅಕ್ರೋಶ ವ್ಯಕ್ತವಾಗಿದೆ.
ಸ್ಥಳೀಯರ ಆಕ್ರೋಶಕ್ಕೆ ಮುಖ್ಯ ಕಾರಣವೆಂದರೆ, ಈ ಮುಂಡ್ರೋಟ್ಟು ನಿವಾಸಿಗಳ ಮನೆಯಿಂದ ಕೇವಲ 500 ಮೀಟರ್ ದೂರದಲ್ಲೇ ಗ್ರಾಮೀಣ ನೀರು ಸರಬರಾಜು ಯೋಜನೆಯಡಿ ನಿರ್ಮಿಸಲಾದ ಬೃಹತ್ ಓವರ್ಹೆಡ್ ವಾಟರ್ ಟ್ಯಾಂಕ್, ಬೋರ್ವೆಲ್ ಮತ್ತು ಮೋಟಾರ್ ಶೆಡ್ಗಳಿವೆ. ಕಳೆದ ನಾಲ್ಕು ವರ್ಷಗಳಿಂದ ಈ ಯೋಜನೆಯ ಕಾಮಗಾರಿಗಳು ನಡೆಯುತ್ತಿದ್ದು, ಪ್ರಸ್ತುತ ಕಾಮಗಾರಿ ಬಹುತೇಕ ಅಂತಿಮ ಹಂತ ತಲುಪಿದ್ದರೂ ಸಹ ಸಾರ್ವಜನಿಕರಿಗೆ ಮಾತ್ರ ಇನ್ನು ನೀರು ಸರಬರಾಜಾಗಿಲ್ಲ.
“ಎಲ್ಲಾ ವ್ಯವಸ್ಥೆಗಳು ಕಣ್ಣೆದುರೇ ಇದ್ದರೂ ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತದ ನಿರ್ಲಕ್ಷ್ಯ ಮತ್ತು ಸಮನ್ವಯದ ಕೊರತೆಯಿಂದಾಗಿ ನಮಗೆ ನೀರು ಸಿಗುತ್ತಿಲ್ಲ” ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿ ದಿನವೂ ದೂರದ ಹೊಂಡಗಳಿಂದ ನೀರನ್ನು ತಲೆಹೊತ್ತು ತರುವುದು ಇಲ್ಲಿನ ಮಹಿಳೆಯರಿಗೆ ಕಡು ಕಷ್ಟದ ಕೆಲಸವಾಗಿ ಪರಿಣಮಿಸಿದೆ.
ಇದನ್ನೂ ಓದಿ: ಮಂಗಳೂರಿನಿಂದ ಮಂತ್ರಾಲಯಕ್ಕೆ ನೇರ ಸಂಪರ್ಕ; ಜೂನ್ ಪೂರ್ತಿ ಓಡಲಿದೆ 24 ಬೋಗಿಗಳ ಬೃಹತ್ ವಿಶೇಷ ರೈಲು!
ಈ ಗಂಭೀರ ಸಮಸ್ಯೆಯು ಇನ್ನು ಕೂಡ ಕ್ಷೇತ್ರದ ಶಾಸಕರ ಗಮನಕ್ಕೆ ಬಂದಿಲ್ಲ ಎನ್ನಲಾಗುತ್ತಿದ್ದು, ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಮತ್ತು ನಿವಾಸಿಗಳು ಈ ದುಸ್ಥಿತಿಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಶಾಸಕರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಸಿದ್ಧವಾಗಿರುವ ನೀರಿನ ಟ್ಯಾಂಕ್ ಮೂಲಕ ಮುಂಡ್ರೋಟ್ಟು ಪರಿಸರದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ