Dharmasthala Lakshadeepotsava: ಐದು ದಿನಗಳು ನಡೆಯುವ ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ದಿನಾಂಕ ನಿಗದಿ, ಕಾರ್ಯಕ್ರಮ ವಿವರ ಇಲ್ಲಿದೆ

| Updated By: ಆಯೇಷಾ ಬಾನು

Updated on: Nov 16, 2022 | 3:01 PM

ನವೆಂಬರ್19ರಿಂದ 23ರ ತನಕ ಕಾರ್ತಿಕಮಾಸದ ಲಕ್ಷದೀಪೋತ್ಸವ ಮತ್ತು ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಐದು ದಿನಗಳು ನಡೆಯುವ ಕಾರ್ಯಕ್ರಮ ವಿವರ ಇಲ್ಲಿದೆ.

Dharmasthala Lakshadeepotsava: ಐದು ದಿನಗಳು ನಡೆಯುವ ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ದಿನಾಂಕ ನಿಗದಿ, ಕಾರ್ಯಕ್ರಮ ವಿವರ ಇಲ್ಲಿದೆ
ಧರ್ಮಸ್ಥಳ (ಸಂಗ್ರಹ ಚಿತ್ರ)
Follow us on

ಮಂಗಳೂರು: ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯುವ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ(Dharmasthala Lakshadeepotsava) ದಿನಾಂಕ ನಿಗದಿಯಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ ಹೆಗ್ಗಡೆಯವರ(Veerendra Heggade) ಉಪಸ್ಥಿತಿಯಲ್ಲಿ ಕಾರ್ತಿಕಮಾಸದ ಲಕ್ಷದೀಪೋತ್ಸವ ಮತ್ತು ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನ ಇದೇ ನವೆಂಬರ್19ರಿಂದ 23ರ ತನಕ ನಡೆಯಲಿದೆ.

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಪಂಚ ಉತ್ಸವಗಳ ವಿವರ

  • ನ.19ರಂದು ಹೊಸಕಟ್ಟೆ ಉತ್ಸವ
  • ನ.20 ಕೆರೆಕಟ್ಟೆ ಉತ್ಸವ
  • ನ.21 ಲಲಿತೋದ್ಯಾನ ಉತ್ಸವ
  • ನ.22 ಕಂಚಿಮಾರುಕಟ್ಟೆ ಉತ್ಸವ
  • ನ.23 ಗೌರಿ ಮಾರುಕಟ್ಟೆ ಉತ್ಸವ

ನವೆಂಬರ್ 19ರಂದು ಶಾಸಕ ಹರೀಶ್‌ ಪೂಂಜ ಅವರು ವಸ್ತುಪ್ರದರ್ಶನಕ್ಕೆ ಚಾಲನೆ ನೀಡುತ್ತಾರೆ. ಚಾಲನೆ ಬಳಿಕ ವಸ್ತುಪ್ರದರ್ಶನ ಮಂಟಪ ಮತ್ತು ಅಮೃತವರ್ಷಿಣಿ ಸಭಾಭವನದಲ್ಲಿ ನಿತ್ಯವೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತೆ.

ನ.21ಕ್ಕೆ ಲಲಿತಕಲಾ ಗೋಷ್ಠಿ

ನವೆಂಬರ್ 21ರದು ಅಮೃತ ವರ್ಷಿಣಿ ಸಭಾಭವನದಲ್ಲಿ ಲಲಿತ ಕಲಾಗೋಷ್ಠಿ ನಡೆಯಲಿದೆ. ರಾತ್ರಿ 8.30ಕ್ಕೆ ವಿದುಷಿ ಡಾ.ಜಯಂತಿ ಮತ್ತು ಕುಮರೇಶ್‌ ತಂಡದವರಿಂದ ಜುಗಲ್‌ ಬಂದಿ ಕಾರ್ಯಕ್ರಮ ನಡೆಯಲಿದೆ

ನ.22ಕ್ಕೆ ಸರ್ವಧರ್ಮ ಸಮ್ಮೇಳನ; ಕೇಂದ್ರ ಸಚಿವೆ ಸ್ಮೃತಿ ಇರಾನಿ ಚಾಲನೆ

ನ.22ರ ಸಂಜೆ 5 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಶಿವಮೊಗ್ಗದ ನ್ಯಾಯವಾದಿ ಎಂ.ಆರ್‌. ಸತ್ಯನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ. ಬಸ್ರಿಕಟ್ಟೆ ಧರ್ಮಗುರು ಫಾದರ್‌ ಮಾರ್ಸೆಲ್‌ ಪಿಂಟೊ, ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕಷ ಹಾಸಿಂಪೀರ ಇ.ವಾಲೀಕಾರ, ವಿಶ್ರಾಂತ ಮುಖ್ಯೋಪಾಧ್ಯಾಯ, ವಾಗ್ಮಿ ಮೂಡಬಿದರೆಯ ಮುನಿರಾಜ ರೆಂಜಾಳ ಉಪನ್ಯಾಸ ನೀಡಲಿದ್ದಾರೆ.

ನ.23ಕ್ಕೆ ಸಾಹಿತ್ಯ ಸಮ್ಮೇಳನ

ನ.23ರ ಸಂಜೆ 5 ಗಂಟೆಗೆ ರಾಷ್ಟ್ರಪ್ರಶಸ್ತಿ ವಿಜೇತ ಶ್ರೇಷ್ಠ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿದ್ವಾಂಸ ಡಾ.ಎಚ್‌.ವಿ.ನಾಗರಾಜ ರಾವ್‌ ಮೈಸೂರು ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಪರಿಚಾರಿಕ ಮತ್ತು ಸುಶಿಕ್ಷಣ ಸೇವಾಪರ ಸಂಸ್ಥೆಯ ಸ್ಥಾಪಕ ಸತ್ಯೇಶ್‌ ಎನ್‌.ಬೆಳ್ಳೂರು, ಪತ್ರಕರ್ತ ರವೀಂದ್ರ ಭಟ್‌ ಐನಕೈ, ಲೇಖಕ ಗೀತಾ ವಸಂತ ಮತ್ತು ಇತರರು ಉಪನ್ಯಾಸ ನೀಡಲಿದ್ದಾರೆ.

ನ.24ಕ್ಕೆ ಸಮವಸರಣ ಪೂಜೆ

ಶ್ರೀಚಂದ್ರನಾಥ ಸ್ವಾಮಿ ಬಸದಿಯಲ್ಲಿ ನ.24ರಂದು ಸಂಜೆ 6.30ರಿಂದ ಬಾಹುಬಲಿ ಸೇವಾ ಸಮಿತಿ ಶ್ರಾವಕರಿಂದ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ. ಶ್ರೀಮತ್‌ ಪುಷ್ಪದಂತ ಭೂತಬಲಿ ವಿರಚಿತ ಷಟ್ಖಂಡಾಗಮಾಧಾರಿತ ಸಿದ್ಧಾಂತ ಶಿಖಾಮಣಿ-3 ಪುಸ್ತಕ ಬಿಡುಗಡೆ ಆಗಲಿದೆ. ಜೈನ ಸಾಹಿತ್ಯ ವಿಶಾರದೆ ವೀಣಾ ರಘುಚಂದ್ರ ಶೆಟ್ಟಿ ಭಟ್ಕೇರಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಇದಾಗಿ ಶ್ರಾವಕ-ಶ್ರಾವಕಿಯರಿಂದ ಜಿನಭಜನೆ ನಡೆಯಲಿದೆ.