Shakthi Scheme: ಉಚಿತ ಬಸ್‌ ಪ್ರಯಾಣಕ್ಕೆ 12 ದಿನ -ದಕ್ಷಿಣ ಕನ್ನಡದಲ್ಲಿ 2,000 ಕ್ಕೂ ಹೆಚ್ಚು ಖಾಸಗಿ ಬಸ್‌ ಲಾಸ್​, ಮೂರ್ನಾಲ್ಕು ಬೇಡಿಕೆ ಮುಂದಿಟ್ಟ ಮಾಲೀಕರು!

dakshina kannada: ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗದಲ್ಲಿ ಖಾಸಗಿ ಬಸ್‌ಗಳ ದೊಡ್ಡ ಮಟ್ಟದ ಪ್ರಾಬಲ್ಯವಿದೆ. ಇದನ್ನು ನಂಬಿ ಸಾವಿರಾರು ಮಂದಿ ನೇರ ಉದ್ಯೋಗ ಮಾಡುತ್ತಿದ್ದಾರೆ. ಆದ್ರೆ ಶಕ್ತಿ ಯೋಜನೆ ಖಾಸಗಿ ಸಾರಿಗೆ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ.

Shakthi Scheme: ಉಚಿತ ಬಸ್‌ ಪ್ರಯಾಣಕ್ಕೆ 12 ದಿನ -ದಕ್ಷಿಣ ಕನ್ನಡದಲ್ಲಿ 2,000 ಕ್ಕೂ ಹೆಚ್ಚು ಖಾಸಗಿ ಬಸ್‌ ಲಾಸ್​, ಮೂರ್ನಾಲ್ಕು ಬೇಡಿಕೆ ಮುಂದಿಟ್ಟ ಮಾಲೀಕರು!
ಉಚಿತ ಬಸ್‌ ಪ್ರಯಾಣಕ್ಕೆ 12 ದಿನ
ಸಾಧು ಶ್ರೀನಾಥ್​

Updated on: Jun 23, 2023 | 9:01 AM

ರಾಜ್ಯದಲ್ಲಿ ಸರ್ಕಾರಿ ಬಸ್‌ನಲ್ಲಿ (karnataka government) ಮಹಿಳೆಯರಿಗೆ (women) ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆ ಜಾರಿಯಾಗಿ 12 ದಿನ ಕಳೆದಿದೆ. ಆದ್ರೆ ಈ ಯೋಜನೆ ಜಾರಿ ಬಳಿಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (dakshina kannada) ಖಾಸಗಿ ಸಾರಿಗೆಯ ಶಕ್ತಿಯನ್ನು ಈ ಗ್ಯಾರಂಟಿ ಯೋಜನೆ ಕಸಿದಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಳವಾಗುವ ಆತಂಕ ವ್ಯಕ್ತವಾಗಿದೆ. ಹೌದು.. ಶಕ್ತಿ ಯೋಜನೆಯ ಬಳಿಕ ರಾಜ್ಯದಲ್ಲಿ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಸೀಟು ಹಿಡಿಯಲು ಡ್ರೈವರ್ ಸೀಟ್‌ನಿಂದ, ವಿಂಡೋದಿಂದ ಹತ್ತಿ ಕೆಲ ಮಹಿಳೆಯರು ಸಾಹಸ ಮೆರೆದಿರೋದು ಸಹ ಎಲ್ಲರಿಗೂ ಗೊತ್ತಿದೆ. ಆದ್ರೆ ಇದೆಲ್ಲದಕ್ಕೂ ತದ್ವಿರುದ್ದ ಎನ್ನುವಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್‌ನಲ್ಲಿ ಪ್ರಯಾಣಿಕರಿಲ್ಲದೇ ಬಸ್ಸು ಮತ್ತು ಖಾಸಗಿ ಬಸ್ ಸ್ಟ್ಯಾಂಡ್ ಬಿಕೋ ಎನ್ನುತಿದೆ.

ಒಂದು ಕಡೆ ಈ ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರಿಗೆ ಲಾಭವಾದ್ರೆ ಇನ್ನೊಂದು ಕಡೆ ಇದರ ನೇರ ಹೊಡೆತ ಖಾಸಗಿ ಬಸ್ ವಲಯಕ್ಕೆ ತಟ್ಟಿದೆ. ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಖಾಸಗಿ ಬಸ್‌ಗಳಿದ್ದು ಇದೀಗ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿ ಖಾಸಗಿ ಬಸ್ ಮಾಲೀಕರು ಕಂಗಾಲಾಗಿದ್ದಾರೆ. ಪ್ರತಿನಿತ್ಯದ ಟ್ರಿಪ್‌ಗಳ ಸಂಖ್ಯೆಯನ್ನು ಕಡಿತಗೊಳಿಸುವ ಅನಿವಾರ್ಯ ಪರಿಸ್ಥಿತಿಗೆ ತಲುಪಿದ್ದಾರೆ.

ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗದಲ್ಲಿ ಖಾಸಗಿ ಬಸ್‌ಗಳ ದೊಡ್ಡ ಮಟ್ಟದ ಪ್ರಾಬಲ್ಯವಿದೆ. ಇದನ್ನು ನಂಬಿ ಸಾವಿರಾರು ಮಂದಿ ನೇರ ಉದ್ಯೋಗ ಮಾಡುತ್ತಿದ್ದಾರೆ. ಆದ್ರೆ ಶಕ್ತಿ ಯೋಜನೆ ಖಾಸಗಿ ಸಾರಿಗೆ ವ್ಯವಸ್ಥೆ ಮೇಲೆ ಪರಿಣಾಮ ಬೀರಿದ್ದು, ಪ್ರಯಾಣಿಕರಿಲ್ಲದೆ ಕಲೆಕ್ಷನ್ ಕಡಿಮೆಯಾಗಿ ಬಸ್‌ಗಳ ನಿರ್ವಹಣೆ ಮಾಡಲು ಕಷ್ಟಸಾಧ್ಯವಾಗಿದೆ.

ಬಸ್ಸಿನ ತೆರಿಗೆ, ವಿಮೆ, ಖರ್ಚು ವೆಚ್ಚ ಭರಿಸಲು ಸಾಧ್ಯವಾಗದೆ ಬಹುತೇಕ ಮಂದಿ ಉದ್ಯೋಗ, ಉದ್ಯಮದಿಂದ ವಿಮುಖರಾಗುವ ಸಾಧ್ಯತೆಯಿದೆ. ಈ ಹಿಂದೆ ಕರಾವಳಿ ಭಾಗದಲ್ಲಿ ಕೆಎಸ್ಆರ್‌ಟಿಸಿ ಕೆಂಪು ಬಸ್ಸುಗಳಿಗೆ ಇಲ್ಲಿನ ಜನ ಜೈ ಅಂದಿದ್ದು ಕಡಿಮೆ. ಆದ್ರೆ ಯಾವಾಗ ಶಕ್ತಿ ಯೋಜನೆ ಜಾರಿಯಾಯಿತೋ ಅಂದಿನಿಂದ ಮಹಿಳೆಯರು, ಯುವತಿಯರು, ವಿದ್ಯಾರ್ಥಿನಿಯರು ಕೆಂಪು ಬಸ್‌ಗೆ ಮಾರು ಹೋಗಿದ್ದಾರೆ. ಇದರಿಂದಾಗಿ ಖಾಸಗಿ ಬಸ್‌ನ ಚಾಲಕ ನಿರ್ವಾಹಕರು ಅಂತತ್ರರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರ ಕೆಎಸ್‌ಆರ್‌ಟಿಸಿಗೆ ಟಿಕೆಟ್ ದರ ಮರುಪಾವತಿ ಮಾಡುವುದಾದರೆ ಖಾಸಗಿ ಬಸ್ ಮಾಲೀಕರಿಗೆ ಮಾಡಲು ಯಾಕೆ ಸಾಧ್ಯವಿಲ್ಲ ಎಂಬ ಪ್ರಶ್ನೆಯನ್ನು ಖಾಸಗಿ ಬಸ್ ಮಾಲೀಕರು ಎತ್ತಿದ್ದಾರೆ. ಇದು ಸಾಧ್ಯವಾಗದಿದ್ದರೆ ತೆರಿಗೆ ಹಣ ಕಡಿಮೆ ಮಾಡಿ, ಡಿಸೇಲ್ ಸಬ್ಸಿಡಿ ನೀಡಿದ್ರು ಸಹ ಖಾಸಗಿ ಸಾರಿಗೆ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಬಹುದು ಎಂಬ ಆಶಾಭಾವವು ಇದೆ. ಒಟ್ಟಿನಲ್ಲಿ ಖಾಸಗಿ ಸಾರಿಗೆ ವ್ಯವಸ್ಥೆ ಉಳಿಸುವಲ್ಲಿ ಸರ್ಕಾರ ಕ್ರಮವಹಿಸುತ್ತಾ ಎಂದು ಕಾದುನೋಡಬೇಕಿದೆ.

ದಕ್ಷಿಣ ಕನ್ನಡ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:56 am, Fri, 23 June 23

Loading...
Unable to load recommendations.
Follow Us