ಮಂಗಳೂರು: ತುಂಬೆ ಅಣೆಕಟ್ಟೆ ತುಂಬಿದ್ದರೂ ಕುಡಿಯುವ ನೀರಿಗೆ ತತ್ವಾರ! ಕಾರಣ ಇಲ್ಲಿದೆ

Drinking Water Problem In Mangaluru: ರಾಜ್ಯ ಬರ ಪರಿಸ್ಥಿತಿ ಎದುರಿಸುತ್ತಿದ್ದರೂ, ಮಂಗಳೂರನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗಿದ್ದರೂ ನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಬೆ ಅಣೆಕಟ್ಟೆಯಲ್ಲಿ ಸಾಕಷ್ಟು ನೀರಿದೆ. ಆದರೆ ಮಂಗಳೂರು ನಗರದ ಜನರಿಗೆ ಮಾತ್ರ ಕುಡಿಯುವ ನೀರಿಗೆ ತೊಂದರೆಯಾಗಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ನೋಡಿ

ಮಂಗಳೂರು: ತುಂಬೆ ಅಣೆಕಟ್ಟೆ ತುಂಬಿದ್ದರೂ ಕುಡಿಯುವ ನೀರಿಗೆ ತತ್ವಾರ! ಕಾರಣ ಇಲ್ಲಿದೆ
ತುಂಬೆ ಅಣೆಕಟ್ಟೆ
Follow us
|

Updated on:Feb 28, 2024 | 3:05 PM

ಮಂಗಳೂರು, ಫೆಬ್ರವರಿ 28: ತುಂಬೆ ಅಣೆಕಟ್ಟೆಯಲ್ಲಿ (Thumbe Dam) ಪ್ರಸ್ತುತ ಆರು ಅಡಿ ನೀರು (Water) ಇದ್ದು ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ಆದಾಗ್ಯೂ, ಮಂಗಳೂರು ಮಹಾನಗರ ಪಾಲಿಕೆಯ (MCC) ಒಟ್ಟು 60 ವಾರ್ಡ್‌ಗಳ ಪೈಕಿ ಸುಮಾರು 30 ವಾರ್ಡ್‌ಗಳು ಕುಡಿಯುವ ನೀರಿನ ಅಭಾವವನ್ನು ಎದುರಿಸುತ್ತಿವೆ. ತುಂಬೆ ವೆಂಟೆಡ್ ಡ್ಯಾಂನಿಂದ ಪ್ರತಿದಿನ 160 ಮಿಲಿಯನ್ ಲೀಟರ್ ನೀರನ್ನು (ಎಂಎಲ್‌ಡಿ) ಪಂಪ್ ಮಾಡಲಾಗುತ್ತದೆ. ಆದರೆ, ಮಂಗಳೂರು ನಗರ ತಲುಪುವ ವೇಳೆಗೆ ಲಭ್ಯವಿರುವ ನೀರಿನ ಪ್ರಮಾಣ 120 ಎಂಎಲ್‌ಡಿಗೆ ಇಳಿಯುತ್ತದೆ. ಈ ಇಳಿಕೆಗೆ ಪ್ರಮುಖ ಕಾರಣವೆಂದರೆ ಮುಖ್ಯ ಪೈಪ್‌ಲೈನ್‌ಗೆ ವಿವಿಧ ಸ್ಥಳಗಳಲ್ಲಿ ಕಿಡಿಗೇಡಿಗಳು ರಂಧ್ರ ಕೊರೆದಿರುವುದು ಎನ್ನಲಾಗಿದೆ.

ಮುಖ್ಯ ಪೈಪ್‌ಲೈನ್‌ನಲ್ಲಿ 110 ಕ್ಕೂ ಹೆಚ್ಚು ಅಕ್ರಮ ರಂಧ್ರಗಳನ್ನು ಕೊರೆಯಲಾಗಿದೆ. ಇದರಿಂದ ಸರಿಸುಮಾರು 40 ಎಂಎಲ್‌ಡಿ ನೀರು ಪೋಲಾಗುತ್ತಿದೆ. ಇದು ನಗರದ ನೀರಿನ ಪೂರೈಕೆಯಲ್ಲಿ ಕೊರತೆಗೆ ಕಾರಣವಾಗುತ್ತದೆ ಎಂದು ವರದಿಯಾಗಿದೆ.

ಶ್ರೀಮಂತರು, ವಾಣಿಜ್ಯ ಸಂಸ್ಥೆಗಳಿಂದಲೇ ನೀರು ಕಳವು!

ಪೈಪ್‌ಲೈನ್‌ಗೆ ವಿವಿಧ ಕಡೆಗಳಲ್ಲಿ ಕೊರೆಯಲಾಗಿರುವ ರಂಧ್ರಗಳಲ್ಲಿ ಹೆಚ್ಚಿನವುಗಳನ್ನು ಶ್ರೀಮಂತ ವ್ಯಕ್ತಿಗಳು ತಮ್ಮ ಒಡೆತನದ ವಾಣಿಜ್ಯ ಸಂಸ್ಥೆಗಳು ಮತ್ತು ಸಭಾಂಗಣಗಳ ಬಳಕೆಗಾಗಿ ನೀರನ್ನು ಬಳಸಲು ಕೊರೆಯುತ್ತಾರೆ. ಹೆಚ್ಚುವರಿಯಾಗಿ, ಕೃಷಿ ಉದ್ದೇಶಗಳಿಗಾಗಿ ನೀರಿನ ಕಳ್ಳತನವಾಗುತ್ತಿದೆ. ಇದರಿಂದ ಯಥಾವತ್ತಾಗಿ ತೆರಿಗೆ ಪಾವತಿಸುವ ನಗರ ಪಾಲಿಕೆ ನಿವಾಸಿಗಳು ಸಾಕಷ್ಟು ನೀರಿಲ್ಲದೆ ಪರದಾಡುವಂತಾಗಿದೆ.

ನಗರದಲ್ಲಿ ಕುಡಿಯುವ ನೀರಿನ ತೀವ್ರ ಅಭಾವದ ಹಿನ್ನೆಲೆಯಲ್ಲಿ ನಗರ ಪಾಲಿಕೆ ಆಡಳಿತವು ಅಕ್ರಮ ಸಂಪರ್ಕ ಕಡಿತಗೊಳಿಸಲು ನಾಲ್ಕು ತಂಡಗಳನ್ನು ರಚಿಸಿತ್ತು. ಆದಾಗ್ಯೂ, ಕ್ರಮ ಕೈಗೊಂಡ ಕೆಲವೇ ದಿನಗಳಲ್ಲಿ ಖದೀಮರು ಮುಖ್ಯ ಪೈಪ್‌ಲೈನ್‌ಗೆ ರಂಧ್ರಗಳನ್ನು ಮತ್ತೆ ಕೊರೆದಿದು ತೊಂದರೆ ಉಂಟು ಮಾಡಿದ್ದಾರೆ.

ನೀರಿನ ಸಮಸ್ಯೆ ಪರಿಹಾರಕ್ಕೆ ಇತ್ತೀಚೆಗೆ ಕರೆದಿದ್ದ ವಿಶೇಷ ಸಭೆಯಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರು 30ಕ್ಕೂ ಹೆಚ್ಚು ವಾರ್ಡ್‌ಗಳಿಗೆ ನೀರಿನ ಕೊರತೆ ಉಂಟಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನೀರಿನ ದುರುಪಯೋಗವನ್ನು ತಡೆಗಟ್ಟಲು ಆಡಳಿತವು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಮಂಗಳೂರು ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರವೀಣಚಂದ್ರ ಆಳ್ವ ಹೇಳಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಇದನ್ನೂ ಓದಿ: ಪಾಕಿಸ್ತಾನ ಪರ ಘೋಷಣೆ ಆರೋಪ‌; ಮಂಗಳೂರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ವಶ

ನಿರ್ದಿಷ್ಟ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಖ್ಯ ಪೈಪ್‌ಲೈನ್‌ನಿಂದ ಅನಧಿಕೃತವಾಗಿ ನೀರು ತೆಗೆಯುವುದನ್ನು ತಡೆಯಲು ಎಂಟು ವಾಲ್‌ಮೆನ್‌ಗಳನ್ನು ನೇಮಿಸಲಾಗಿದೆ. ಪಡೀಲ್ ಮತ್ತು ತುಂಬೆಯಲ್ಲಿ ಬೃಹತ್ ನೀರಿನ ಮೀಟರ್ ಅಳವಡಿಸಲಾಗಿದೆ ಎಂದು ಎಂಸಿಸಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:01 pm, Wed, 28 February 24