AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಸೋಮೇಶ್ವರ ಪೆರಿಬೈಲ್ ಮಸೀದಿಯಲ್ಲಿ ಪೊಲೀಸರು ಮೈಕ್ ಬಂದ್ ಮಾಡಿಸಿದ ಆರೋಪ

ಮಂಗಳೂರಿನ ಉಳ್ಳಾಲದ ಪೆರಿಬೈಲ್ ಮಸೀದಿಯಲ್ಲಿ ಪೊಲೀಸರು ಮೈಕ್ ಬಂದ್ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ನಗರದಲ್ಲಿ ಮತ್ತೆ ಮೈಕ್ ವಿವಾದ ಉಂಟಾಗುವ ಸಾಧ್ಯತೆ ಗೋಚರಿಸಿದೆ. ಕಾನೂನು ಪ್ರಕಾರವೇ ಮೈಕ್ ಬಳಸುತ್ತಿದ್ದರೂ ತಡೆದ ಪೊಲೀಸರ ಕ್ರಮ ಸರಿಯಲ್ಲ. ಇದರ ವಿರುದ್ಧ ಪ್ರತಿಭಟನೆ ಮಾಡಲಿದ್ದೇವೆ ಎಂದು ಮಸೀದಿ ಆಡಳಿತ ಎಚ್ಚರಿಕೆ ನೀಡಿದೆ. ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಕ್ಷೇತ್ರದಲ್ಲೇ ವಿವಾದ ಸೃಷ್ಟಿಯಾಗಿದೆ.

ಮಂಗಳೂರು: ಸೋಮೇಶ್ವರ ಪೆರಿಬೈಲ್ ಮಸೀದಿಯಲ್ಲಿ ಪೊಲೀಸರು ಮೈಕ್ ಬಂದ್ ಮಾಡಿಸಿದ ಆರೋಪ
ಪೆರಿಬೈಲ್ ಮಸೀದಿಯಲ್ಲಿ ಪೊಲೀಸರು ಹಾಗೂ ಮುಸ್ಲಿಂ ಮುಖಂಡರ ನಡುವೆ ಮಾತಿನ ಚಕಮಕಿ
ಅಶೋಕ್​ ಪೂಜಾರಿ, ಮಂಗಳೂರು
| Updated By: Digi Tech Desk|

Updated on:Dec 12, 2024 | 11:13 AM

Share

ಮಂಗಳೂರು, ಡಿಸೆಂಬರ್ 12: ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಪ್ರತಿನಿಧಿಸುತ್ತಿರುವ ಉಳ್ಳಾಲ ವಿಧಾನಸಭಾ ಕ್ಷೇತ್ರದ ಪೆರಿಬೈಲ್ ಮಸೀದಿಯಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿದ್ದ ವೇಳೆ ಪೊಲೀಸರು ಮೈಕ್ ಬಂದ್ ಮಾಡಿಸಿದ ಆರೋಪ ಕೇಳಿಬಂದಿದೆ. ಇದರಿಂದಾಗಿ, ಮಂಗಳೂರಿನಲ್ಲಿ ಮತ್ತೆ ಮಸೀದಿ ಮೈಕ್ ವಿವಾದ ತಲೆ ಎತ್ತಿತೇ ಎಂಬ ಅನುಮಾನ ಉಂಟಾಗಿದೆ. ಅನುಮತಿ ಇರುವ ಸಮಯದಲ್ಲೇ ಮೈಕ್ ಬಳಸಿದ್ದರೂ ಪೊಲೀಸರು ತಡೆದಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡಲಿದ್ದೇವೆ ಎಂದು ಮಸೀದಿ ಆಡಳಿತ ಹೇಳಿದೆ.

ಪೆರಿಬೈಲ್ ಮಸೀದಿಯಲ್ಲಿ ನಡೆದಿದ್ದೇನು?

ಪೆರಿಬೈಲ್ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಸಂಜೆ 7 ಗಂಟೆ ವೇಳೆಗೆ ಮಸೀದಿಯಲ್ಲಿ ಧ್ವನಿವರ್ಧಕ ಬಳಸಲಾಗಿತ್ತು. ಇದೇ ವೇಳೆ, ಅನುಮಾನಾಸ್ಪದ ಚಟುವಟಿಕೆ ಆರೋಪಿಸಿ ಅಪರಿಚಿತರು ‘112’ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದರು. ತಕ್ಷಣ ಮಸೀದಿಗೆ ದೌಡಾಯಿಸಿದ ಉಳ್ಳಾಲ ಪೊಲೀಸರು, ಧಾರ್ಮಿಕ ಕಾರ್ಯಕ್ರಮ ತಡೆದು ಗದರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಸೀದಿಯ ಮುಖಂಡರು ಆರೋಪಿಸಿದ್ದಾರೆ.

ಮುಸ್ಲಿಂ ಮುಖಂಡರಿಂದ ಆಕ್ಷೇಪ

ಪೊಲೀಸರ ನಡೆಯ ವಿರುದ್ಧ ಪೆರಿಬೈಲ್ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಧಾರ್ಮಿಕ ಕಾರ್ಯಕ್ರಮದ ವೇಳೆ ಪೊಲೀಸರು ಬಂದು ಗದರಿಸಿದ್ದಾರೆ. ನಾವು ಸಮಯವಲ್ಲದ ಸಮಯದಲ್ಲಿ ಮೈಕ್ ಬಳಸಿಲ್ಲ. ಸಂಜೆ 7 ಗಂಟೆಗೆ ಮೈಕ್ ಹಾಕಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ರಾತ್ರಿ 10 ಗಂಟೆವರೆಗೆ ಮೈಕ್ ಬಳಸಲು ಅವಕಾಶ ಇದೆ, ಮತ್ತೆ ನಮಗ್ಯಾಕೆ ವಿರೋಧ ಎಂದು ಮುಸ್ಲಿಂ ಮುಖಂಡರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು ಸಿಂಗಾಪುರ ಮಧ್ಯೆ ಜನವರಿ 21ರಿಂದ ನೇರ ವಿಮಾನ ಸಂಚಾರ: ಇಲ್ಲಿದೆ ವೇಳಾಪಟ್ಟಿ

ನಾವು ರಾತ್ರಿ 10 ರಿಂದ ಬೆಳಗ್ಗೆ 6 ವರೆಗೂ ಮೈಕ್ ಬಳಸುವುದಿಲ್ಲ ಎಂದು ಮುಚ್ಚಳಿಕೆ ಬರೆದಿದ್ದೇವೆ. ಪೊಲೀಸರು ಮಸೀದಿ, ಮದರಸದ ಬಳಿ ಗದರಿಸುವುದು ಹಾಗೂ ಬೆದರಿಸುವುದನ್ನು ನಿಲ್ಲಿಸಬೇಕು. ಜಿಲ್ಲಾಡಳಿತ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಬೇಕು. ಮಂಗಳೂರು ಪೊಲೀಸ್ ಕಮಿಷನರ್ ಗಮನಕ್ಕೆ ಬರುವವರೆಗೂ ಹೋರಾಡುತ್ತೇವೆ ಎಂದು ಪೆರಿಬೈಲ್ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ ಹೇಳಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:52 am, Thu, 12 December 24