ಮಂಗಳೂರು: ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಪ್ರಕರಣ

| Updated By: Ganapathi Sharma

Updated on: Nov 30, 2024 | 6:08 PM

ಅದು ಕಡಲನಗರಿ ಮಂಗಳೂರಿನ ಸುಂದರ ದ್ವೀಪ ಪ್ರದೇಶ. ಆದರೆ ಐಲ್ಯಾಂಡ್ ಪ್ರದೇಶವನ್ನು ಮರಳು ದಂಧೆಕೋರರು ನೀರು ಪಾಲು ಮಾಡಿದ್ದರು. ಇದರ ವಿರುದ್ದ ದ್ವೀಪ ನಿವಾಸಿಗಳು ಆಡಳಿತ ವ್ಯವಸ್ಥೆಗೆ ಎಷ್ಟೇ ಮೊರೆಯಿಟ್ಟರೂ ಅಕ್ರಮ ಮರಳುಗಾರಿಕೆ ನಿಂತಿರಲಿಲ್ಲ. ಇದೀಗ ಈ ವಿಚಾರದಲ್ಲಿ ರಾಷ್ಟ್ರೀಯ ಹಸಿರು ಪ್ರಾಧಿಕಾರ ಎಂಟ್ರಿ ಕೊಟ್ಟಿದ್ದು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.‌

ಮಂಗಳೂರು: ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಪ್ರಕರಣ
ಅಕ್ರಮ ಮರಳುಗಾರಿಕೆ ವಿರೋಧಿಸಿ ಪಾವೂರು ನಿವಾಸಿಗಳಿಂದ ಪ್ರತಿಭಟನೆ
Follow us on

ಮಂಗಳೂರು, ನವೆಂಬರ್ 30: ಕಡಲನಗರಿ ಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆ ಹೆಚ್ಚಾಗಿದೆ. ರಾತ್ರಿಯಾಗುತ್ತಿದ್ದಂತೆಯೇ ಎಂಟ್ರಿಯಾಗುವ ಮರಳುದಂಧೆಕೋರರು ರಾತ್ರಿ ಬೆಳಗಾಗುವಷ್ಟರಲ್ಲಿ ಟನ್​ಗಟ್ಟಲೇ ಮರಳನ್ನು ದೋಚಿರುತ್ತಾರೆ. ಗಣಿ ಇಲಾಖೆ, ಪೊಲೀಸ್ ಇಲಾಖೆಗೆ ಈ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ದೂರು ಬಂದರೂ ಸಹ ನಾಟಕೀಯ ದಾಳಿ ನಡೆಸಿ ಸುಮ್ಮನಾಗುತ್ತಿದ್ದಾರೆ.‌

ಇದೇ ರೀತಿ ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಾವೂರು ಉಳಿಯ ದ್ವೀಪದಲ್ಲಿಯು ಅಕ್ರಮ ಮರಳುಗಾರಿಕೆ ನಡೆಯುತಿತ್ತು. ಪರಿಣಾಮ ದ್ವೀಪ ಪ್ರದೇಶ ವಿನಾಶದ ಅಂಚಿಗೆ ತಲುಪಿತ್ತು. ಮರಳು ದಂಧೆಕೋರರ ಅಟ್ಟಹಾಸಕ್ಕೆ ಸುಮಾರು 80 ಎಕರೆ ಇದ್ದ ದ್ವೀಪ ಪ್ರದೇಶ ಇದೀಗ 40 ಎಕರೆಗೆ ಬಂದಿತ್ತು. ಇದರ ವಿರುದ್ಧ ಇಲ್ಲಿನ ಸ್ಥಳೀಯರು ಆಡಳಿತ ವ್ಯವಸ್ಥೆಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಆದ್ರೆ ಇದೀಗ ಈ ವಿಚಾರದಲ್ಲಿ ರಾಷ್ಟ್ರೀಯ ಹಸಿರು ಪ್ರಾಧಿಕಾರ ಮಧ್ಯ ಪ್ರವೇಶಿಸಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಈಗಾಗಲೇ ಒಂದು ಹಂತದ ವಿಚಾರಣೆ ನಡೆದಿದ್ದು, ಮುಂದಿನ ವಿಚಾರಣೆ ಜನವರಿ ತಿಂಗಳಿಗೆ ಮುಂದೂಡಲಾಗಿದೆ.

ಈ ದ್ವೀಪ ಪ್ರದೇಶದಲ್ಲಿ ಸುಮಾರು ಐವತ್ತೈದ್ದಕೂ ಹೆಚ್ಚು ಕುಟುಂಬಗಳು ನೂರಾರು ವರ್ಷಗಳಿಂದ ವಾಸವಾಗಿದ್ದು, ಅಕ್ರಮ ಮರಳುಗಾರಿಕೆಯಿಂದ ಇವರುಗಳ ಮನೆ ಅಪಾಯದಲ್ಲಿದೆ. ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ ಪ್ರತಿನಿಧಿಸುವ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ದ್ವೀಪವಿದ್ದು ಸ್ವತಃ ಸ್ಪೀಕರ್ ಅವರೇ ಈ ಅಕ್ರಮ ಮರಳುಗಾರಿಕೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸಮತಿಯೊಂದನ್ನು ರಚಿಸಿದ್ದಾರೆ. ಕಂದಾಯ, ಗಣಿ, ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ಈ ಹಿಂದೆ ಎಷ್ಟು ಜಾಗವಿತ್ತು? ಈಗ ಎಷ್ಟಿದೆ ಎಂಬ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ‌.

ಇದನ್ನೂ ಓದಿ: ಆಕಾಶದಲ್ಲಿ ತೇಲುತ್ತಾ ಊಟ ಸವಿಯಲು ಕರಾವಳಿಯಲ್ಲಿ ಪ್ರಾರಂಭವಾಗಿದೆ ಸ್ಕೈ ಡೈನಿಂಗ್‌

ಕೇವಲ ನನ್ನ ಕ್ಷೇತ್ರ ಮಾತ್ರವಲ್ಲ ಜಿಲ್ಲೆಯ ಯಾವ ಪ್ರದೇಶದಲ್ಲಿಯೂ ಅಕ್ರಮ ಮರಳುಗಾರಿಕೆ ನಡೆದರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ಪೀಕರ್ ಖಾದರ್ ಹೇಳಿದ್ದಾರೆ. ಸದ್ಯ ಪಾವೂರಿನಲ್ಲಿ ನಡೆದ ಅಕ್ರಮ ಮರಳುಗಾರಿಕೆ ಬಗ್ಗೆ ತನಿಖೆ ನಡೆಸಲು ಸಮಿತಿ ರಚನೆಯಾಗಿದ್ದರೆ ಇನ್ನೊಂದು ಕಡೆ ರಾಷ್ಟ್ರೀಯ ಹಸಿರು ಪ್ರಾಧಿಕಾರವು ಎಂಟ್ರಿ ಕೊಟ್ಟಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಅಕ್ರಮಗಳಿಗೆ ಕಡಿವಾಣ ಬೀಳುತ್ತಾ ಎಂದು ಕಾದು ನೋಡಬೇಕಾಗಿದೆ‌.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:05 pm, Sat, 30 November 24