Mangaluru News: ನಾಳೆ ಮಂಗಳೂರು, ಉಡುಪಿಗೆ ಪ್ರಧಾನಿ ಮೋದಿ, ಸಂಚಾರ ಬದಲಾವಣೆ ವಿವರ ಇಲ್ಲಿದೆ

ಮಂಗಳೂರು ನಗರದಲ್ಲಿ ಮತ್ತು ಉಡುಪಿ - ಮಂಗಳೂರು ಮಾರ್ಗ ಮಧ್ಯೆ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಪರ್ಯಾಯ ಮಾರ್ಗಗಳ ಬಗ್ಗೆ ಮಂಗಳೂರು ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ವಿವರ ಇಲ್ಲಿದೆ.

Mangaluru News: ನಾಳೆ ಮಂಗಳೂರು, ಉಡುಪಿಗೆ ಪ್ರಧಾನಿ ಮೋದಿ, ಸಂಚಾರ ಬದಲಾವಣೆ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ

Updated on: May 02, 2023 | 2:45 PM

ಮಂಗಳೂರು: ರಾಜ್ಯ ವಿಧಾಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಆಡಳಿತಾರೂಢ ಬಿಜೆಪಿಯ ಪ್ರಚಾರ ಬಿರುಸುಗೊಂಡಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರಚಾರ ತೀವ್ರಗೊಂಡಿದ್ದು, ಮೇ 3ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ನೀಡಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ, ಮಂಗಳೂರು ನಗರದಲ್ಲಿ ಮತ್ತು ಉಡುಪಿ – ಮಂಗಳೂರು ಮಾರ್ಗ ಮಧ್ಯೆ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಪರ್ಯಾಯ ಮಾರ್ಗಗಳ ಬಗ್ಗೆ ಮಂಗಳೂರು ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ಜತೆಗೆ, ವಾಹನ ನಿಲುಗಡೆಗೆ ಸಂಬಂಧಿಸಿ ಮಾರ್ಗಸೂಚಿ ಹೊರಡಿಸಿದ್ದಾರೆ. ಮಂಗಳೂರು ಸಂಚಾರ ಪೊಲೀಸರ ಮಾರ್ಗಸೂಚಿ ಮೇ 3 ರಂದು ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೆ ಅನ್ವಯವಾಗಲಿದೆ.

ಉಡುಪಿಯಿಂದ ಮಂಗಳೂರಿಗೆ ಬರುವ ಎಲ್ಲಾ ವಾಹನಗಳು ಮೂಲ್ಕಿಯ ವಿಜಯ ಸನ್ನಿಧಿಯಿಂದ ಎಡಕ್ಕೆ ತಿರುಗಿ ಕಿನ್ನಿಗೋಳಿ-ಕಟೀಲು-ಬಜ್ಪೆ-ಕಾವೂರು ಮಾರ್ಗವಾಗಿ ಸಾಗಬೇಕು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ಎಲ್ಲಾ ವಾಹನಗಳು ಕೆಪಿಟಿ ಜಂಕ್ಷನ್‌ನಲ್ಲಿ ಬಲಕ್ಕೆ ಸಾಗಿ ಬೋಂದೇಲ್-ಕಾವೂರು-ಬಜ್ಪೆ-ಕಟೀಲು-ಕಿನ್ನಿಗೋಳಿ-ಮುಲ್ಕಿ ಮಾರ್ಗವಾಗಿ ಅಥವಾ ಕುಳೂರು ಜಂಕ್ಷನ್‌ನಿಂದ ಬಲಕ್ಕೆ ತೆಗೆದುಕೊಂಡು ಕಾವೂರು-ಬಜ್ಪೆ-ಕಟೀಲು-ಕಿನ್ನಿಗೋಳಿ ಮಾರ್ಗವಾಗಿ ಸಾಗಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಸುರತ್ಕಲ್ ಕಡೆಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು ಹಳೆಯಂಗಡಿ ಜಂಕ್ಷನ್‌ನಿಂದ ಬಲಕ್ಕೆ ತಿರುಗಿ ಪಕ್ಷಿಕೆರೆ-ಎಸ್ ಕೋಡಿ-ಮುಲ್ಕಿ ಮಾರ್ಗವಾಗಿ ಸಾಗಬೇಕು ಎಂದು ತಿಳಿಸಲಾಗಿದೆ.

ಹಳೆಯಂಗಡಿ ಜಂಕ್ಷನ್‌ನಿಂದ ಮುಲ್ಕಿ ವಿಜಯ ಸನ್ನಿಧಿಯವರೆಗೆ ರಾಷ್ಟ್ರೀಯ ಹೆದ್ದಾರಿ 66 ರ ಎರಡೂ ಬದಿಗಳಲ್ಲಿ ಮೇ 3 ರಂದು ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಪ್ರಧಾನಿ ಮೋದಿಯವರ ಸಾರ್ವಜನಿಕ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಅದೇ ರೀತಿ, ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳನ್ನು ಹೊರತುಪಡಿಸಿ ಕೊಳ್ನಾಡ್ ಜಂಕ್ಷನ್‌ನಿಂದ ಕೈಗಾರಿಕಾ ಪ್ರದೇಶಕ್ಕೆ ಮತ್ತು ಕೆಎಸ್ ರಾವ್ ನಗರಕ್ಕೆ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: Karnataka Polls: ರಾಜಕೀಯ ಪಕ್ಷಗಳ ಭವಿಷ್ಯಕ್ಕೆ ಈ ಆರು ಪ್ರದೇಶಗಳು ನಿರ್ಣಾಯಕ

ಕಾರ್ನಾಡ್ ಬೈಪಾಸ್ (ರಾಷ್ಟ್ರೀಯ ಹೆದ್ದಾರಿ), ಕಾರ್ನಾಡ್ ಜಂಕ್ಷನ್ (ಕಿನ್ನಿಗೋಳಿ ರಸ್ತೆ), ಮುಲ್ಕಿ ರೈಲು ನಿಲ್ದಾಣದ ಕ್ರಾಸ್ (ಕಿನ್ನಿಗೋಳಿ ರಸ್ತೆ) ಮತ್ತು ಎಸ್ ಕೋಡಿ ಕ್ರಾಸ್ (ಕಿನ್ನಿಗೋಳಿ ರಸ್ತೆ) ಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

ಹಳೆಯಂಗಡಿ ಜಂಕ್ಷನ್‌ನಿಂದ ಮುಲ್ಕಿ ವಿಜಯ ಸನ್ನಿಧಿವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲಗಳಲ್ಲಿ ಮೇ 3ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿಯಿಂದ ಕೆಎಸ್ ರಾವ್ ನಗರಕ್ಕೆ ಹೋಗುವ ರಸ್ತೆಯ ಎರಡೂ ಬದಿಗಳಲ್ಲಿ, ಕೊಳ್ನಾಡು ಜಂಕ್ಷನ್‌ನಿಂದ ಕೈಗಾರಿಕಾ ಪ್ರದೇಶ ಮತ್ತು ಕೆಎಸ್ ರಾವ್ ನಗರಕ್ಕೆ ಮತ್ತು ಕಾರ್ನಾಡ ಬೈಪಾಸ್‌ನಿಂದ ಕಾರ್ನಾಡ ಜಂಕ್ಷನ್‌ಗೆ ವಾಹನಗಳ ನಿಲುಗಡೆಗೆ ಅವಕಾಶವಿರುವುದಿಲ್ಲ.

ಕಾರ್ಯಕ್ರಮಕ್ಕೆ ಮಂಗಳೂರಿನಿಂದ ಆಗಮಿಸುವ ಬಸ್‌ಗಳು ಬೆಳಗ್ಗೆ 9 ಗಂಟೆಯ ಮೊದಲು ಸಾರ್ವಜನಿಕರನ್ನು ಪ್ರವೇಶ ದ್ವಾರದ ಬಳಿ ಇಳಿಸಿ ವಿಶ್ವ ಬಂಟ್ಸ್ ಸಂಘದ ಕಟ್ಟಡದ ಬಳಿ ವಾಹನಗಳನ್ನು ನಿಲ್ಲಿಸಬೇಕು. ಕಾರ್ಯಕ್ರಮಕ್ಕೆ ಉಡುಪಿಯಿಂದ ಆಗಮಿಸುವ ಬಸ್‌ಗಳು ಕಾರ್ನಾಡ್ ಬೈಪಾಸ್‌ನಲ್ಲಿ ಸಾರ್ವಜನಿಕರನ್ನು ಇಳಿಸಿ, ವಾಹನಗಳನ್ನು ಪಡುಬೈಲು ವಿಶ್ವ ಬಂಟ್ಸ್ ಅಸೋಸಿಯೇಷನ್ ​​ಕಟ್ಟಡದ ಬಳಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸುವ ವಿಐಪಿಗಳ ವಾಹನಗಳ ಪಾರ್ಕಿಂಗ್​ಗೆ ಮಂಗಳೂರು-ಉಡುಪಿ ರಸ್ತೆಯ ಪಶ್ಚಿಮ ಭಾಗದಲ್ಲಿ ಅವಕಾಶ ಒದಗಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳು ಬೆಳಗ್ಗೆ 10.30 ರಿಂದ ಹಳೆಯಂಗಡಿ ಜಂಕ್ಷನ್ ಮತ್ತು ಕಾರ್ನಾಡ್ ಬೈಪಾಸ್‌ನಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಸಂಚರಿಸುವುದನ್ನು ನಿಷೇಧಿಸಲಾಗಿದೆ. ಕೊಳ್ನಾಡ್ ಹೆಲಿಪ್ಯಾಡ್‌ನಿಂದ ಪ್ರಧಾನಮಂತ್ರಿಯವರು ಕಾರ್ಯಕ್ರಮದ ಸ್ಥಳಕ್ಕೆ ತಲುಪುವವರೆಗೆ ಈ ರಸ್ತೆಯಲ್ಲಿ ಸಂಚಾರ ನಿಷೇಧ ಇರಲಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us