Oscar Fernandes Death: ಆಸ್ಕರ್ ಫರ್ನಾಂಡಿಸ್ ಪಾರ್ಥಿವ ಶರೀರ ಉಡುಪಿಗೆ ಶಿಫ್ಟ್, ಸೆಪ್ಟೆಂಬರ್ 16 ರಂದು ಬೆಂಗಳೂರಲ್ಲಿ ಅಂತ್ಯ ಸಂಸ್ಕಾರ

ಬರೋಬ್ಬರಿ 5 ದಶಕಗಳಿಂದಲೂ ಎಐಸಿಸಿ ಹಾಗೂ ಕೆಪಿಸಿಸಿ ನಡುವೆ ಇದ್ದ ಬಹುದೊಡ್ಡ ಕೊಂಡಿ ಕಳಚಿದೆ. ಹಿರಿಯನಾಯಕ ಹಾಗೂ ಮಾಜಿ ಕೇಂದ್ರಸಚಿವ ಆಸ್ಕರ್ ಫರ್ನಾಂಡಿಸ್ ಇಹಲೋಕ ತ್ಯಜಿಸಿದ್ದಾರೆ. ಅಜಾತಶತ್ರುವನ್ನ ಕಳೆದುಕೊಂಡು ರಾಜಕೀಯ ವಲಯ ಕಂಬನಿ ಮಿಡಿದಿದೆ. ಇನ್ನು ಸೆಪ್ಟೆಂಬರ್ 16 ರಂದು ಆಸ್ಕರ್ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

Oscar Fernandes Death: ಆಸ್ಕರ್ ಫರ್ನಾಂಡಿಸ್ ಪಾರ್ಥಿವ ಶರೀರ ಉಡುಪಿಗೆ ಶಿಫ್ಟ್, ಸೆಪ್ಟೆಂಬರ್ 16 ರಂದು ಬೆಂಗಳೂರಲ್ಲಿ ಅಂತ್ಯ ಸಂಸ್ಕಾರ
ಆಸ್ಕರ್ ಫರ್ನಾಂಡಿಸ್ ಪಾರ್ಥಿವ ಶರೀ
Edited By: ಆಯೇಷಾ ಬಾನು

Updated on: Sep 14, 2021 | 8:18 AM

ರಾಜ್ಯ ಕಂಡ ಸರಳ ಸಜ್ಜನಿಕೆಯ ರಾಜಕಾರಣಿ, ಕಾಂಗ್ರೆಸ್‌ನ ಹಿರಿಯ ನಾಯಕ, ಕರಾವಳಿಯ ಪುತ್ರ, ಕೇಂದ್ರದ ಮಾಜಿ ಸಚಿವ ನಿನ್ನೆ ವಿಧಿವಶರಾಗಿದ್ದಾರೆ. ಬರೋಬ್ಬರಿ 5 ದಶಕಗಳ ಕಾಲ ದಿಲ್ಲಿ ಹಾಗೂ ಕರ್ನಾಟಕ ಕಾಂಗ್ರೆಸ್ನ ಮಧ್ಯೆ ಕೊಂಡಿಯಂತೆ ಕಾರ್ಯನಿರ್ವಹಿಸಿದ್ದ ಆಸ್ಕರ್‌ ಫರ್ನಾಂಡಿಸ್ ಕೊನೆಯುಸಿರೆಳೆದಿದ್ದಾರೆ. ಆಸ್ಕರ್‌ ನಿಧನಕ್ಕೆ ಸಾವಿರಾರು ಕಾರ್ಯಕರ್ತರು, ನೂರಾರು ನಾಯಕರು ಕಂಬನಿ ಮಿಡಿದಿದ್ದಾರೆ.

ಆಸ್ಕರ್ ಫರ್ನಾಂಡಿಸ್ ಪಾರ್ಥಿವ ಶರೀರ ಉಡುಪಿಗೆ ಶಿಫ್ಟ್
ಇಂದು ಬೆಳಗ್ಗೆ 9.30ಕ್ಕೆ ಆಸ್ಕರ್ ಫರ್ನಾಂಡಿಸ್ ಪಾರ್ಥಿವ ಶರೀರ ಉಡುಪಿಗೆ ಶಿಫ್ಟ್ ಮಾಡಲಾಗುತ್ತಿದ್ದು ಉಡುಪಿಯ ಚರ್ಚ್ನಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ. ಬೆಳಗ್ಗೆ 10.30ರಿಂದ 2.30ರವರೆಗೆ ಉಡುಪಿಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3.30ಕ್ಕೆ ಮಂಗಳೂರಿನ ‘ಕೈ’ ಕಚೇರಿಯಲ್ಲಿ ಅಂತಿಮ ದರ್ಶನ ನೆರವೇರುತ್ತೆ. ನಂತರ ಮಂಗಳೂರಿನ ಮಿಲಾಗ್ರಿಸ್ ಚರ್ಚ್ನಲ್ಲಿ ಪೂಜೆ ಸಲ್ಲಿಸಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಪಾರ್ಥಿವ ಶರೀರ ಶಿಫ್ಟ್ ಮಾಡಿ ನಾಳೆ ಬೆಳಗ್ಗೆ 10.30ಕ್ಕೆ ಬೆಂಗಳೂರಿಗೆ ಪಾರ್ಥಿವ ಶರೀರ ಶಿಫ್ಟ್ ಮಾಡಲಾಗುತ್ತೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಂತಿಮ ದರ್ಶನ ನಡೆಯಲಿದ್ದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರ, ರಾಜ್ಯ ನಾಯಕರಿಂದ ಅಂತಿಮ ದರ್ಶನವಾಗುವ ಸಾಧ್ಯತೆ ಇದೆ. ಬಳಿಕ ಬೆಂಗಳೂರಿನ ಸೇಂಟ್‌ ಪ್ಯಾಟ್ರಿಕ್ಸ್ ಚರ್ಚ್ನಲ್ಲಿ ಆಸ್ಕರ್ ಫರ್ನಾಂಡಿಸ್ ಅಂತ್ಯಕ್ರಿಯೆ ನಡೆಯುತ್ತೆ.

ಅಜಾತ ಶತ್ರು ಆಸ್ಕರ್ ಫರ್ನಾಂಡಿಸ್ ಒಟ್ಟು 5 ಬಾರಿ ಲೋಕಸಭೆ ಮತ್ತು 4 ಬಾರಿ ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಕರ್ನಾಟಕ ಕಾಂಗ್ರೆಸ್ಸಿನಿಂದ ದೆಹಲಿಯಲ್ಲಿ ಛಾಪು ಮೂಡಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ತಮ್ಮ ಬದುಕಿನ ಯಾತ್ರೆ ಕೊನೆಗೊಳಿಸಿದ್ದಾರೆ. ರಾಜಕೀಯ ವಿರೋಧಿಗಳಿಂದ್ಲೂ ಗೌರವಿಸಲ್ಪಟ್ಟ ಆಸ್ಕರ್, ಅಜಾತ ಶತ್ರು ಅಂತಲೇ ಗುರುತಿಸಿಕೊಂಡವ್ರು. ಆದ್ರೆ ಆಸ್ಕರ್ ಅವರ ಬಾಳಲ್ಲಿ ವಿಧಿಬರಹವೇ ಬೇರೆಯಾಗಿತ್ತು. 2 ತಿಂಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದ ಆಸ್ಕರ್, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಕೊನೆಯುಸಿರೆಳೆದಿದ್ದಾರೆ.

ಸೆಪ್ಟೆಂಬರ್15 ರಂದು ಬೆಂಗಳೂರಿಗೆ ಮೃತದೇಹ ರವಾನಿಸಲಾಗುತ್ತೆ. ಮೃತದೇಹ ಏರ್ಲಿಫ್ಟ್ ಮಾಡೋ ಸಾಧ್ಯತೆ ಇದ್ದು, ಸೆಪ್ಟೆಂಬರ್ 15 ರಂದು ಪಾರ್ಥಿವ ಶರೀರವನ್ನು ಬೆಂಗಳೂರಿನಲ್ಲೇ ಇರಿಸಿ ಬಳಿಕ ಸೆಪ್ಟೆಂಬರ್ 16 ರಂದು ಬೆಂಗಳೂರಿನ ಚರ್ಚ್ನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಆಸ್ಕರ್, ಜುಲೈ 19ರಂದು ಮನೆಯಲ್ಲಿ ಯೋಗ ಮಾಡುತ್ತಿದ್ದಾಗ ಕುಸಿದು ಬಿದ್ದು ತಲೆಗೆ ಏಟು ಮಾಡಿಕೊಂಡಿದ್ದರು. ಆಗ ಮೆದುಳಿನಲ್ಲಿ ರಕ್ತಸ್ರಾವವಾಗಿ ಕೋಮಾಗೆ ಜಾರಿದ್ದರು. ಹೀಗೆ ಕೋಮಾಗೆ ಹೋದವರು ಮತ್ತೆ ಮರಳಿ ಮನೆಗೆ ಬರಲೇ ಇಲ್ಲ. ಚಿಕಿತ್ಸೆ ಪಡೆಯುತ್ತಲೇ ಬಾರದ ಲೋಕಕ್ಕೆ ತೆರಳಿರುವ ಆಸ್ಕರ್ ಫರ್ನಾಂಡಿಸ್ರನ್ನ ನೆನೆದು ಗಣ್ಯರು ಕಂಬನಿ ಮಿಡಿದಿದ್ದಾರೆ.
Oscar Fernandes

ಇದನ್ನೂ ಓದಿ: Oscar Fernandes Death: ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನ

YouTube video player

Published On - 7:42 am, Tue, 14 September 21

Follow Us