ಯಕ್ಷಗಾನದ ವೇಷಭೂಷಣ ತೊಟ್ಟು ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಗೆ ಹಿರಿಯ ಕಲಾವಿದನಿಂದ ತರಾಟೆ, ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ

|

Updated on: Oct 23, 2023 | 1:09 PM

ದಾವಣಗೆರೆ ಮೂಲದವರು ಎನ್ನಲಾದ ವ್ಯಕ್ತಿಯೊಬ್ಬರು ಶನಿವಾರ ಬಿ.ಸಿ. ರಸ್ತೆಯ ಬ್ರಹ್ಮಶ್ರೀ ನಾರಾಯಣ ಮಂದಿರದ ಬಳಿ ಯಕ್ಷಗಾನ ಕಲಾವಿದರ ವೇಷ ಧರಿಸಿ ನಿಂತಿದ್ದರು. ಇದೇ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬಂದ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಅವರು ವ್ಯಕ್ತಿಯ ಮೇಲೆ ಸಿಟ್ಟಾಗಿ ಯಕ್ಷಗಾನ ವೇಷಭೂಷಣ ತೆಗೆಯುವಂತೆ ಹೇಳಿದ್ದಾರೆ.

ಯಕ್ಷಗಾನದ ವೇಷಭೂಷಣ ತೊಟ್ಟು ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಗೆ ಹಿರಿಯ ಕಲಾವಿದನಿಂದ ತರಾಟೆ, ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ
ಯಕ್ಷಗಾನ (ಸಾಂದರ್ಭಿಕ ಚಿತ್ರ)
Follow us on

ಬಂಟ್ವಾಳ, ಅ.23: ನವರಾತ್ರಿ (Navaratri) ಹಬ್ಬದ ಸಂದರ್ಭದಲ್ಲಿ ವಿವಿಧ ರೀತಿಯ ವೇಷಭೂಷಣಗಳನ್ನು ತೊಟ್ಟು ಕಲಾವಿದರು ರಸ್ತೆಯಲ್ಲಿ ಓಡಾಡುವುದನ್ನು ನೋಡುವುದು ಸಾಮಾನ್ಯ. ಆದರೆ ಯಕ್ಷಗಾನ ವೇಷಭೂಷಣ (Yakshagana Costume) ತೊಟ್ಟಿದ್ದಕ್ಕೆ ಹಿರಿಯ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಅವರು ವ್ಯಕ್ತಿಯೊಬ್ಬರನ್ನು ತಡೆದು ತರಾಟೆಗೆ ತೆಗೆದುಕೊಂಡ ಘಟನೆ ಬಂಟ್ವಾಳದ ಬಿ.ಸಿ. ರಸ್ತೆಯಲ್ಲಿ ನಡೆದಿದೆ. ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಮತ್ತು ಯಕ್ಷಗಾನ ವೇಷಧಾರಿ ವ್ಯಕ್ತಿ ನಡುವೆ ರಸ್ತೆಯಲ್ಲಿ ನಡೆದ ಮಾತಿನ ಚಕಮಕಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಾವಣಗೆರೆ ಮೂಲದವರು ಎನ್ನಲಾದ ವ್ಯಕ್ತಿಯೊಬ್ಬರು ಶನಿವಾರ ಬಿ.ಸಿ. ರಸ್ತೆಯ ಬ್ರಹ್ಮಶ್ರೀ ನಾರಾಯಣ ಮಂದಿರದ ಬಳಿ ಯಕ್ಷಗಾನ ಕಲಾವಿದರ ವೇಷ ಧರಿಸಿ ನಿಂತಿದ್ದರು. ಇದೇ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬಂದ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಅವರು ವ್ಯಕ್ತಿಯ ಮೇಲೆ ಸಿಟ್ಟಾಗಿ ಯಕ್ಷಗಾನ ವೇಷಭೂಷಣ ತೆಗೆಯುವಂತೆ ಹೇಳಿದ್ದಾರೆ. ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ.

ವೈರಲ್ ಆದ ವಿಡಿಯೋದಲ್ಲೇನಿದೆ?

“ನಾವು ಇಲ್ಲಿ ಯಕ್ಷಗಾನವನ್ನು ಪೂಜಿಸುತ್ತೇವೆ ಎಂದು ನಿಮಗೆ ತಿಳಿದಿದೆಯೇ? ನೀವು ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದೀರಾ?” ಎಂದು ಕಲಾವಿದ ಅಶೋಕ್ ದಾವಣಗೆರೆ ವ್ಯಕ್ತಿಯನ್ನು ಪ್ರಶ್ನಿಸಿದ್ದಾರೆ. ಆಗ ಅದಕ್ಕೆ ಉತ್ತರಿಸಿದ ವ್ಯಕ್ತಿ, ನಾನೇನಾದರೂ ತಪ್ಪು ಮಾಡಿದ್ದರೆ ಜನರೇ ನನ್ನ ಹೊಡೆದಿರುತ್ತಿದ್ದರು ಎಂದು ಹೇಳಿದ್ದಾರೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ: ಬೆಂಗಳೂರಿನ 10 ವರ್ಷದ ಬಾಲಕನ ಚಿತ್ರಕ್ಕೆ ಜಾಗತಿಕ ಅತ್ಯುತ್ತಮ ವನ್ಯಜೀವಿ ಛಾಯಾಚಿತ್ರ ಪ್ರಶಸ್ತಿ

ಇನ್ನು ಈ ವೇಷಭೂಷಣವನ್ನು ತೆಗೆದುಹಾಕದಿದ್ದರೆ ನಿನ್ನ ಕೈ-ಕಾಲುಗಳನ್ನು ಮುರಿಯುವುದಾಗಿ ಕಲಾವಿದ ಅಶೋಕ್ ವ್ಯಕ್ತಿಗೆ ಬೆದರಿಕೆ ಹಾಕಿದ್ದಾರೆ. ಇದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಗಳು ಶುರುವಾಗಿವೆ.

ಯಕ್ಷಗಾನ ಕಲೆಗೆ ಅವಮಾನ ಮಾಡುವುದು ಸರಿಯಲ್ಲ ಎಂದು ಒಂದು ಗುಂಪು ಹೇಳಿದರೆ, ಇನ್ನೊಂದೆಡೆ ದಾವಣಗೆರೆಯ ವ್ಯಕ್ತಿಗೆ ಬಲವಂತವಾಗಿ ವಸ್ತ್ರ ತೆಗೆಸಿರುವುದು ಅನ್ಯಾಯ, ಕ್ರೂರ ಎಂದು ಮತ್ತೊಂದು ಗುಂಪು ವಾದಿಸುತ್ತಿದೆ. ಯಾವ ವೇಷಭೂಷಣಗಳನ್ನು ಧರಿಸಬೇಕು ಎಂದು ಜಿಲ್ಲಾಡಳಿತ ಸುತ್ತೋಲೆ ಹೊರಡಿಸಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತಹ ಸುತ್ತೋಲೆ ಇಲ್ಲದಿರುವುದರಿಂದ ಅನಧಿಕೃತ ವೇಷಭೂಷಣದ ಹೆಸರಿನಲ್ಲಿ ಯಾರನ್ನೂ ತಡೆಯುವ ಹಕ್ಕು ಯಾರಿಗೂ ಇಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ