ಮಂಗಳೂರಿನಲ್ಲಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಯುವತಿ ಪತ್ತೆ: ಗ್ಯಾಂಗ್ ರೇಪ್ ಶಂಕೆ
ಮಂಗಳೂರು ಹೊರವಲಯದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಹೊರ ರಾಜ್ಯದ ಯುವತಿ ಪತ್ತೆಯಾಗಿದ್ದಾರೆ. ಅವರ ಮೈಮೇಲೆ ಗಾಯಗಳಿದ್ದು, ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಶಂಕೆ ವ್ಯಕ್ತವಾಗಿದೆ.ತಡರಾತ್ರಿ ನಶೆಯಲ್ಲಿದ್ದ ಯುವತಿ ಸ್ಥಳೀಯರ ಮನೆ ಬಾಗಿಲು ಬಡಿದಿದ್ದಾರೆ. ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಳ್ಳಾಲ ಠಾಣೆಯ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.

ಮಂಗಳೂರು, ಏಪ್ರಿಲ್ 17: ಮಂಗಳೂರು (Mangaluru) ಹೊರವಲಯದ ಕಲ್ಲಾಪು ನಿರ್ಜನ ಪ್ರದೇಶದಲ್ಲಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಅಂತರರಾಜ್ಯದ ಯುವತಿ ಪತ್ತೆಯಾಗಿದ್ದಾರೆ. ಯುವತಿ ಮೈಮೇಲೆ ಗಾಯದ ಗುರುತು ಪತ್ತೆಯಾಗಿದ್ದು ಮೇಲೆ ಸಾಮೂಹಿಕವಾಗಿ ಅತ್ಯಾಚಾರ (Gang Rape) ಎಸಗಿರುವ ಶಂಕೆ ವ್ಯಕ್ತವಾಗಿದೆ. ತಡರಾತ್ರಿ ಯುವತಿ ನಶೆಯಲ್ಲಿ ಸ್ಥಳೀಯರ ಮನೆ ಬಾಗಿಲು ಬಡಿದಿದ್ದರು. ನೀರು ಕೇಳಿ ಯುವತಿ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬುಧವಾರ (ಏ.16) ತಡರಾತ್ರಿ ಅಪರಿಚಿತ ನಾಲ್ವರ ತಂಡವೊಂದು ಬಂದಿರುವ ಬಗ್ಗೆ ಮಾಹಿತಿ ಪೊಲೀಸರಿಗೆ ದೊರೆತಿದೆ. ಸದ್ಯ ಉಳ್ಳಾಲ ಠಾಣೆಯ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಪಡೆಯುತ್ತಿರುವ ಯುವತಿಯನ್ನು ಪೊಲೀಸರು ವಿಚಾರಣೆ ನಡೆಸಿದರು.
ಠಾಣಾ ಸರಹದ್ದಿನಲ್ಲಿ ಪ್ರದೇಶದಲ್ಲಿ ನಿರ್ಜನ ಮನೆಯೊಂದಿದೆ. ಅಲ್ಲಿಗೆ, ನಿತ್ಯ ತಡರಾತ್ರಿ ಗಾಂಜಾ, ಅಮಲು ವ್ಯಸನಿಗಳು ನಿತ್ಯ ಬರುತ್ತಿರುತ್ತಾರೆ. ಅಲ್ಲೇ ಬುಧವಾರ ತಡರಾತ್ರಿ ನಾಲ್ವರ ತಂಡವೂ ಇತ್ತು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಆದರೆ ಯುವತಿ ನೆರೆಮನೆಗೆ ಬರುತ್ತಿದ್ದಂತೆ ನಾಲ್ವರ ತಂಡ ಪರಾರಿಯಾಗಿದೆ ತಿಳಿದುಬಂದಿದೆ.
ಯುವತಿಗೆ ಮದ್ಯ ಕುಡಿಸಿ ಅತ್ಯಾಚಾರ ಶಂಕೆ
ಯುವತಿ ಪಶ್ಚಿಮ ಬಂಗಾಳ ಮೂಲದವರು ಎಂದು ತಿಳಿದು ಬಂದಿದೆ. ಆದರೆ, ಯುವತಿ ಕೇರಳದ ಉಪ್ಪಳ ಎಂಬಲ್ಲಿ ವಾಸವಾಗಿದ್ದರು. ಆಟೋ ರಿಕ್ಷಾದಲ್ಲಿ ಯುವತಿಯನ್ನು ಕರೆತಂದು, ವಿಪರೀತ ಮದ್ಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಅನುಮಾನ ವ್ಯಕ್ತವಾಗಿದೆ. ಆಟೋ ಚಾಲಕ ಸಹಿತ ಮತ್ತೆ ಇಬ್ಬರು ಯುವಕರು ಜೊತೆಗಿದ್ದ ಶಂಕೆ ಇದೆ. ದೌರ್ಜನ್ಯ ಎಸಗಿ ಯುವತಿಯನ್ನು ಬಿಟ್ಟು ತೆರಳಿರುವ ಸಾಧ್ಯತೆ ಇದೆ.
ಆ ಬಳಿಕ ಯುವತಿ ನಡುರಾತ್ರಿ ಪಕ್ಕದ ಮನೆಯ ಬಾಗಿಲು ಬಡಿದಿದ್ದಾರೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಸಿಸಿಟಿವಿ ಕ್ಯಾಮೆರಾ ಆಧಾರದಲ್ಲಿ ಆಟೋ ರಿಕ್ಷಾ ಮಾಹಿತಿ ಲಭ್ಯವಾಗಿದೆ. ಕಡೆಯದಾಗಿ ಆಟೋ ಚಾಲಕನಿಗೆ ಯುವತಿ ಮೊಬೈಲ್ನಿಂದ 60 ರೂಪಾಯಿ ಗೂಗಲ್ ಪೇ ಮಾಡಲಾಗಿದೆ. ಇದೇ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಬೆಂಗಳೂರು ಸಂಚಾರ ಮಾರ್ಗದಲ್ಲಿ ಮಹತ್ವದ ಬದಲಾವಣೆ
ಇನ್ನು, ಯುವತಿಯನ್ನು ರಕ್ಷಣೆ ಮಾಡಿದ ಸ್ಥಳೀಯ ನಿವಾಸಿ ಪ್ರವೀಣ್ ಮಾತನಾಡಿ, ಮಧ್ಯರಾತ್ರಿ 12:30ಕ್ಕೆ ಯುವತಿ ಬಂದು ಬಾಗಿಲು ತಟ್ಟಿದರು. ಅವರ ಕುತ್ತಿಗೆ ಸೇರಿದಂತೆ ಮೈಮೇಲೆ ಗಾಯವಿತ್ತು. ಕುಡಿಯೋದಕ್ಕೆ ನೀರು ಕೇಳಿದರು. ಆಟೋ ರಿಕ್ಷಾದಲ್ಲಿ ಯಾರೋ ನನ್ನನ್ನು ಕರ್ಕೊಂಡು ಬಂದು ಬಿಟ್ಟು ಹೋಗಿರೋದಾಗಿ ಹೇಳಿದರು. ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು. ಊರು ಯಾವುದೆಂದು ಕೇಳಿದಾಗ ಬಿಹಾರ ಎಂದು ಹೇಳಿದ್ದಾರೆ.
ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದೆವು.ಪೊಲೀಸರು ಬಂದು ಯುವತಿಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಯುವತಿ ನಶೆಯಲ್ಲಿದ್ದರು. ಈ ಪ್ರದೇಶಕ್ಕೆ ರಾತ್ರಿ ಹೊತ್ತು ಅಪರಿಚಿತ ಯುವಕರು ಬರುತ್ತಾರೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದೆವು ಎಂದು ಹೇಳಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Thu, 17 April 25