ದಾವಣಗರೆ ಪಾಲಿಕೆಯಲ್ಲಿ ಕಪ್ಪು ಕಾಣಿಕೆ ಕೊಟ್ಟರೆ ಟೆಂಡರ್ ಖಚಿತ; ಆಡಿಯೋ ವೈರಲ್ ಸಾಕ್ಷಿ

| Updated By: Rakesh Nayak Manchi

Updated on: Nov 12, 2022 | 7:37 AM

ದಾವಣಗೆರೆ ಪಾಲಿಕೆಯಲ್ಲಿ ಒಂದು ಕೋಟಿ ಒಳಗಿನ ಯಾವುದೇ ಕಾಮಗಾರಿ ಇದರೆ ಸಾಕು ಟೇಬಲ್ ಕೆಳಗಿನ ಕೈಗಳು ಕೆಲಸ ಮಾಡಿದರೆ ಟೆಂಡರ್​ಗಳು ಗೊತ್ತಿಲ್ಲದೇ ನವೀಕರಣ ಆಗುತ್ತವೆ.

ದಾವಣಗರೆ ಪಾಲಿಕೆಯಲ್ಲಿ ಕಪ್ಪು ಕಾಣಿಕೆ ಕೊಟ್ಟರೆ ಟೆಂಡರ್ ಖಚಿತ; ಆಡಿಯೋ ವೈರಲ್ ಸಾಕ್ಷಿ
ದಾವಣಗೆರೆ ಪಾಲಿಕೆಯಲ್ಲಿ ಭ್ರಷ್ಟಾಚಾರ ಆರೋಪ
Follow us on

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಒಂದು ಕೋಟಿ ಒಳಗಿನ ಯಾವುದೇ ಕಾಮಗಾರಿ ಇದ್ದರೆ ಸಾಕು ಟೇಬಲ್ ಕೆಳಗಿನ ಕೈಗಳು ಕೆಲಸ ಮಾಡಿದರೆ ಟೆಂಡರ್​ಗಳು ಗೊತ್ತಿಲ್ಲದೇ ನವೀಕರಣ ಆಗಿಬಿಡುತ್ತವೆ. ಇನ್ನೂ ಒಂದು ಕೋಟಿ ಮೇಲೆ ಇದ್ದ ಕಾಮಗಾರಿಗಳಿಗೆ ಕಪ್ಪು ಕಾಣಿಕೆ ಸಲ್ಲಿಸಿದವರಿಗೆ ಟೆಂಡರ್ ಖಚಿತವಂತೆ. ಇದಕ್ಕೆ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮತ್ತು ಹೊರಗುತ್ತಿಗೆದಾರನೊಬ್ಬನ ನಡುವಿನ ಕಾಲ್ ರೆಕಾರ್ಡ್ ಆಡಿಯೋ ಸಾಕ್ಷಿಯಾಗಿ ನಿಂತಿದೆ. ದಾವಣಗೆರೆ ನಗರದ ಬಹುತೇಕ ಕಡೆ ಇದ್ದಕ್ಕಿದ್ದಂತೆ ಹಂದಿಗಳು ಸತ್ತು ಬಿಳುತ್ತಿವೆ. ಆ ಕೆಟ್ಟ ವಾಸನೆಗೆ ಜನರು ಬೇಸತ್ತಿದ್ದಾರೆ. ಇನ್ನೊಂದೆಡೆ ಪಾಲಿಕೆಗೆ ಬಂದರೆ ಕೆಟ್ಟ ಭ್ರಷ್ಟಾಚಾರದ ವಾಸನೆ. “ಮೊನ್ನೆ ತಾನೇ 15 ಲಕ್ಷ ರೂಪಾಯಿ ಕೊಡಲಾಗಿದೆ ಎಂದು ಆಯುಕ್ತರು ಹೇಳಿದಾಗ ಗುತ್ತಿಗೆದಾರ “ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರಾ” ಅಂತಾ ಕೇಳುತ್ತಾರೆ. ಅದಕ್ಕೆ ಎಸ್ ಎನ್ನುತ್ತಾರೆ ವಿಶ್ವನಾಥ ಮುದಜ್ಜಿ. ಈ ಆಡಿಯೋ ವೈರಲ್ ಆಗಿ ಕಾಂಗ್ರೆಸ್​ಗೆ ಅಸ್ತ್ರವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಆರಂಭಿಸಿ ಸಚಿವರ ರಾಜೀನಾಮೆಗೆ ಆಗ್ರಹಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಭೈರತಿ ಬಸವರಾಜ್ ಜಿಲ್ಲೆಯ ಆಗುಗಳನ್ನ ನೋಡಲು ಬಾರದೇ ಜಿಲ್ಲೆಯನ್ನ ಸುಲಿದು ಕಬಳಿಸಲು ಲಕ್ಷ ಲಕ್ಷ ಹಣ ದೋಚಲು ಇಲ್ಲಿಗೆ ಬರುತ್ತಾರೆ ಎಂಬುದು ಬಹುತೇಕ ಸ್ಪಷ್ಟವಾಗಿದೆ. ಇದಾದ ಬಳಿಕ ಕಾಂಗ್ರೆಸ್ ಕೆಲ ದಾಖಲೆಗಳನ್ನ ಬಿಡುಗಡೆ ಮಾಡಿದೆ. ಜೊತೆಗೆ ಒಂದು ಕೋಟಿಗಿಂತ ಹೆಚ್ಚಿನ ಮೊತ್ತದ ಟೆಂಡರ್​ಗಳು ಮಾತ್ರ ಬರೀ ಗೋಲ್ ಮಾಲ್ ನಡೆಯುತ್ತಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹ ಕೇಳಿ ಬರುತ್ತಿವೆ.

ಭೈರತಿ ಭ್ರಷ್ಟಾಚಾರ ವೈರಲ್ ಆಗಿದ್ದೆ ತಡ ಕಾಂಗ್ರೆಸ್ ಮೈದಡವಿಕೊಂಡು ಎದ್ದು ನಿಂತಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ನೇತ್ರತ್ವದಲ್ಲಿ ಪಾಲಿಕೆ ಆವರಣದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಕಳೆದ ಕೆಲ ದಿನಗಳಿಂದ ಒಂದು ಕೋಟಿ ಮೊತ್ತಕ್ಕಿಂತ ಹೆಚ್ಚು ಮೊತ್ತದ ಎಲ್ಲ ಟೆಂಡರ್​ಗಳ ಬಗ್ಗೆ ತನಿಖೆಯಾಗಲಿ. ಶುಲ್ಕ ವಸೂಲಿಗೆ ಟೆಂಡರ್ ಕರೆಯದೇ ಹಿಂದೆ ಇದ್ದ 49 ಲಕ್ಷ ರೂಪಾಯಿ ಆದೇಶ ಮುಂದೂವರಿಸಿದ್ದಾರೆ. ಹೀಗೆ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇಲ್ಲಿ ನಡೆದಿವೆ ಎನ್ನಲಾಗುತ್ತಿದೆ. ಜನ ಸಾಮಾನ್ಯರು ಇಲ್ಲಿಗೆ ದುಡ್ಡಿಲ್ಲದೇ ಬರುವುದೇ ಕಷ್ಟ ಎಂಬ ಮಾತುಗಳು ಕೇಳಿ ಬರುತ್ತಿವೆ.

ಭೈರತಿ ಬಸವರಾಜ್ ಕಾಂಗ್ರೆಸ್ಸಿಗೆ ಕೈಕೊಟ್ಟು ಬಿಜೆಪಿ ಸೇರಿ ನಗರಾಭಿವೃದ್ಧಿ ಸಚಿವರಾದರು. ಇವರ ಕ್ಯಾಪ್ಟನ್ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಿಕ್ಕು ಮನೆ ಸೇರಿದರು. ಆದರೆ ಎಸ್.ಬಿಎಂ ಎಂದೇ ಹೆಸರಾದ ಸೋಮಶೇಖರ ಬೈರತಿ ಬಸವರಾಜ್, ಮುನಿರತ್ನ ಮಾತ್ರ ಬಿಜೆಪಿ ಸರ್ಕಾರದಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ಅವರು ಅಧಿಕಾರಕ್ಕಾಗಿ ಪಕ್ಷ ಬಿಟ್ಟು ಬಂದವರು ಹಣ ಲೂಟಿ ಮಾಡಲಿಕ್ಕಾಗಿಯೇ ಎಂದು ಜನ ಮಾತಾಡಿಕೊಳ್ಳುವುದು ವೈರಲ್ ವಿಡಿಯೋದಿಂದ ಸತ್ಯವಾಗಿದೆ. ಲೋಕಾಯುಕ್ತರು ಈಗಾಗಲೇ ಪಾಲಿಕೆ ಮೇಲೆ ದಾಳಿ ಮಾಡಿ ಓರ್ವನನ್ನ ಬಂಧಿಸಿದ್ದಾರೆ. ಇದರಲ್ಲಿ ತಿಮಿಂಗಿಲಗಳು ಇರುವುದರ ಬಗ್ಗೆ ಗಮನ ಹರಿಸಬೇಕಿದೆ.

ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:37 am, Sat, 12 November 22