ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ದುರಂತ: ಮಳೆಗೆ ಆಟೋ ಚಾಲಕ ಬಲಿ
ಬೆಂಗಳೂರಿನ ಇಂದು ಸುರಿದ ಧಾರಾಕಾರ ಮಳೆಗೆ ವಿಜಯನಗರದಲ್ಲಿ ಕ್ಲಬ್ ಕಾಂಪೌಂಡ್ ಗೋಡೆ ಕುಸಿದು ಓರ್ವ ಆಟೋ ಚಾಲಕ ಮೃತಪಟ್ಟಿರುವಂತಹ ಘಟನೆ ನಡೆದಿದೆ. ಮಳೆ ಆರ್ಭಟಕ್ಕೆ ಗೋಡೆ ಕುಸಿದು ಬಿದ್ದು ದುರಂತ ಸಂಭವಿಸಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ವಿಜಯನಗರ ಪೊಲೀಸರು ತನಿಖೆ ನಡೆಸಿದ್ದಾರೆ.

ಬೆಂಗಳೂರು, ಮೇ 29: ಇತ್ತೀಚೆಗೆ ಧಾರಾಕಾರ ಮಳೆಗೆ (Rain) ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನರು ಸಾವನ್ನಪ್ಪಿದ್ದರು. ಇದೀಗ ನಗರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಇಂದು ಸುರಿದ ಭಾರೀ ಮಳೆಗೆ ಕ್ಲಬ್ ಕಾಂಪೌಂಡ್ ಕುಸಿದು ಆಟೋ ಚಾಲಕ ಸಾವನ್ನಪ್ಪಿರುವಂತಹ (Death) ಘಟನೆ ವಿಜಯನಗರದಲ್ಲಿ ನಡೆದಿದೆ. ಗಂಗೊಂಡನಹಳ್ಳಿಯ ನಿವಾಸಿ ಶಿವಬೋರಯ್ಯ(56) ಮೃತ ಆಟೋ ಚಾಲಕ. ಸದ್ಯ ಶಿವಬೋರಯ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯಾಂಶಗಳು
- ಬೆಂಗಳೂರಿನಲ್ಲಿ ಧಾರಾಕಾರ ಮಳೆಗೆ ಓರ್ವ ಬಲಿ
- ಆಟೋ ಮೇಲೆ ಕಾಂಪೌಂಡ್ ಕುಸಿದು ದುರಂತ
- ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ
ಇದನ್ನೂ ಓದಿ: ಧಾರಾಕಾರ ಮಳೆ: ಅಂಡರ್ಪಾಸ್ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಇಂದು ಸಂಜೆ ಮತ್ತೆ ಎಂಟ್ರಿಕೊಟ್ಟಿದ್ದ ಮಳೆರಾಯ ರಾಜಧಾನಿಯ ದಶದಿಕ್ಕಿನಲ್ಲೂ ಅಬ್ಬರಿಸಿ ಬೊಬ್ಬಿರಿದಿದ್ದ. ಅಂಡರ್ಪಾಸ್ ಜಲಾವೃತ ಸೇರಿದಂತೆ ಸಾಲು ಸಾಲು ಮರಗಳು ಧರೆಗುರುಳಿದು ಅವಾಂತರಗಳು ಸಂಭವಿಸಿವೆ. ಈ ಮಧ್ಯೆ ಬಲಿ ಕೂಡ ಪಡೆದಿದೆ. ವಿಜಯನಗರ ಕ್ಲಬ್ ಕಾಂಪೌಂಡ್ ಪಕ್ಕದಲ್ಲೇ ನಿಲ್ಲಿಸಿದ್ದ ಆಟೋ ಮೇಲೆ ಕಾಂಪೌಂಡ್ ಕುಸಿದು ಬಿದ್ದು ಆಟೋ ಚಾಲಕ ಸಾವನ್ನಪ್ಪಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ವಿಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.
GBA ಕಮಿಷನರ್ ಮಹೇಶ್ವರ್ ರಾವ್ ಹೇಳಿದ್ದಿಷ್ಟು
ಇನ್ನು ಕೆ.ಆರ್. ಸರ್ಕಲ್ ಸೇರಿದಂತೆ ನಗರದ ಹಲವು ಅಂಡರ್ ಪಾಸ್ಗಳು ಜಲಾವೃತಗೊಂಡಿದ್ದವು. ಅಂಡರ್ ಪಾಸ್ ಗಳ ಬಳಿಗೆ ತೆರಳಿ GBA ಕಮಿಷನರ್ ಮಹೇಶ್ವರ್ ರಾವ್, ಪರಿಶೀಲಿಸಿದರು ಬಳಿಕ ಟಿವಿ9 ಜೊತೆ ಮಾತನಾಡಿದ ಅವರು, ಅಂಡರ್ ಪಾಸ್ ನಲ್ಲಿ ಸಂಗ್ರಹವಾಗುವ ಮಳೆ ನೀರನ್ನು ಶೀಘ್ರ ತೆರವಿಗೆ ಸೂಚಿಸಿದ್ದಾರೆ. ಅಂಡರ್ ಪಾಸ್ಗಳಲ್ಲಿ ನೀರು ಸಂಗ್ರಹವಾಗದಂತೆ, ರಸ್ತೆಗಳಲ್ಲಿ ನೀರು ಸಮರ್ಪಕವಾಗಿ ಸಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಕಸದ ವಿಲೇವಾರಿ ಸರಿಯಾದ ಪ್ರಮಾಣದಲ್ಲಿ ಆಗಬೇಕು. ಕಸ ರಸ್ತೆಯಲ್ಲಿ ಸಂಗ್ರಹವಾದರೆ ಮಳೆ ನೀರು ಸರಾಗವಾಗಿ ಹರಿಯುವುದಿಲ್ಲ. ಸಾರ್ವಜನಿಕರು ಸಮರ್ಪಕವಾಗಿ ಕಸ ವಿಲೇವಾರಿ ಮಾಡಬೇಕು. ರಸ್ತೆ ಬದಿ ಒಣಗಿದ ಮರಗಳು, ಕೊಂಬೆಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ.
ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ವ್ಯಕ್ತಿ ನೀರುಪಾಲು
ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ವ್ಯಕ್ತಿ ನೀರುಪಾಲಾಗಿರುವಂತಹ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ದರ್ಗಾ ಬಳಿ ನಡೆದಿದೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗುಡ್ಲೂರು ನಿವಾಸಿ ಶಿವಕುಮಾರ್ ಮೃತಪಟ್ಟ ದುರ್ದೈವಿ. ಪತ್ನಿ ಸತ್ಯಾ ಮತ್ತು ಸಂಬಂಧಿಕರ ಜೊತೆ ಪ್ರವಾಸಕ್ಕೆ ಬಂದಿದ್ದರು. ಬಂಡೆಗಳ ನಡುವೆ ಈಜಲು ತೆರಳಿದ್ದಾಗ ಆಯತಪ್ಪಿ ಬಿದ್ದು ಪತ್ನಿ, ಸಂಬಂಧಿಕರ ಕಣ್ಣೆದುರೇ ಶಿವಕುಮಾರ್ ಮೃತಪಟ್ಟಿದ್ದಾರೆ. ಸದ್ಯ ಶಿವಕುಮಾರ್ ಶವವನ್ನು ಸ್ಥಳೀಯ ಈಜುಗಾರರು ಹೊರತೆಗೆದಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:58 pm, Fri, 29 May 26





