ಅತ್ತೆ ವಿರುದ್ಧ ಖುದ್ದು ವಾದ ಮಂಡಿಸಿದ ಸೊಸೆ: ದೋಸೆ ಅಕ್ಕಿ ಅನ್ನ, ಡೌ ಶ್ಯಾಂಪೂ ಒತ್ತಾಯ 498A ಅಡಿ ಕ್ರೌರ್ಯವೇ?; ಹೈಕೋರ್ಟ್ ತೀವ್ರ ಪ್ರಶ್ನೆ
ಕರ್ನಾಟಕ ಹೈಕೋರ್ಟ್ 498ಎ ವರದಕ್ಷಿಣೆ ಕಿರುಕುಳ ಪ್ರಕರಣದ ವಿಚಾರಣೆ ನಡೆಸಿದ್ದು, ದೈನಂದಿನ ಕೌಟುಂಬಿಕ ಸಮಸ್ಯೆಗಳನ್ನು ಅಪರಾಧ ಅಥವಾ ಕ್ರೌರ್ಯ ಎಂದು ವ್ಯಾಖ್ಯಾನಿಸಬಹುದೇ ಎಂದು ಪ್ರಶ್ನಿಸಿದೆ. ಸೊಸೆಯು ಅತ್ತೆಯ ವಿರುದ್ಧ ದಾಖಲಿಸಿದ್ದ ದೂರಿನಲ್ಲಿ ಆಹಾರ, ಶ್ಯಾಂಪೂ ಕುರಿತಂತಹ ಸಣ್ಣಪುಟ್ಟ ವಿಷಯಗಳನ್ನು ಉಲ್ಲೇಖಿಸಿದ್ದು, ಇವು ಕ್ರೌರ್ಯವಲ್ಲ ಎಂದು ನ್ಯಾಯಾಲಯ ಹೇಳಿದೆ.

ಬೆಂಗಳೂರು ಜು. 28: ಅತ್ತೆಯ ವಿರುದ್ಧ ತಾವು ದಾಖಲಿಸಿದ್ದ 498ಎ ಮತ್ತು ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ನೀಡಲಾಗಿದ್ದ ತಡೆಯಾಜ್ಞೆಯನ್ನು (Stay) ತೆರವುಗೊಳಿಸುವಂತೆ ಕೋರಿ ಸೊಸೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, “ಸಂಸಾರದ ದೈನಂದಿನ ಸಣ್ಣಪುಟ್ಟ ಸಮಸ್ಯೆಗಳನ್ನು ಅಪರಾಧ ಅಥವಾ 498ಎ ಅಡಿಯ ಕ್ರೌರ್ಯ ಎಂದು ವ್ಯಾಖ್ಯಾನಿಸಲು ಸಾಧ್ಯವೇ?” ಎಂದು ತೀವ್ರವಾಗಿ ಪ್ರಶ್ನಿಸಿದೆ.
ಅರ್ಜಿದಾರ ಸೊಸೆಯು ಕೋರ್ಟ್ನಲ್ಲಿ ಖುದ್ದು ವಾದ ಮಂಡಿಸಿದ್ದು, ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಪ್ರಕರಣದ ಆದೇಶವನ್ನು ಕಾಯ್ದಿರಿಸಿದೆ. ತಮ್ಮ ದೂರಿನಲ್ಲಿ ಅತ್ತೆಯನ್ನು ‘ಟಾಕ್ಸಿಕ್ ಅತ್ತೆ’ ಎಂದು ಉಲ್ಲೇಖಿಸಿರುವ ಸೊಸೆ, ಅತ್ತೆ, ಅತ್ತೆಯ ಸಹೋದರ ಹಾಗೂ ಪತಿಯ ಸ್ನೇಹಿತನ ವಿರುದ್ಧ 498ಎ ಎಫ್ಐಆರ್ ದಾಖಲಿಸಿದ್ದರು. ವಿಚಾರಣೆ ವೇಳೆ ಅವರು ಮಂಡಿಸಿದ ವಾದಗಳು ಇದೀಗ ಎಲ್ಲಡೆ ವೈರಲ್ ಆಗಿದೆ.
ಪತಿಯ ಊಟ ಮುಗಿಯುವವರೆಗೆ ಅತ್ತೆ ನನಗೆ ಊಟ ನೀಡುತ್ತಿರಲಿಲ್ಲ. ಪತಿಗೆ ಬಿಸಿ ರಾಗಿ ಮುದ್ದೆ ಹಾಗೂ ಬಿಸಿ ದೋಸೆ ನೀಡಿದರೆ, ನನಗೆ ದಿನವೂ ದೋಸೆ ಅಕ್ಕಿಯ ಅನ್ನ ಮತ್ತು ದಾಲ್ ನೀಡುತ್ತಿದ್ದರು. ಸರಿಯಾದ ಪೌಷ್ಟಿಕಾಂಶಯುತ ಆಹಾರ ನೀಡದ ಕಾರಣ ನನಗೆ ಕೂದಲು ಉದುರಿದೆ. ಅಲ್ಲದೆ, ನಾನು ಬಳಸುತ್ತಿದ್ದ ‘ಮೀರಾ’ ಶ್ಯಾಂಪೂ ಬದಲಿಗೆ ‘ಡೌ (Dove)’ ಶ್ಯಾಂಪೂ ಬಳಸುವಂತೆ ಪತಿ ಒತ್ತಾಯಿಸುತ್ತಿದ್ದರು.
ಕಳೆದ ಒಂದು ತಿಂಗಳಿಂದ ಅತ್ತೆ ನನ್ನನ್ನು ಅಡುಗೆಮನೆಗೇ ಬಿಡುತ್ತಿಲ್ಲ. ಐದೂವರೆ ತಿಂಗಳ ಸಂಸಾರದಲ್ಲಿ ತೀವ್ರ ಕಿರುಕುಳ ನೀಡಿದ್ದು, ತವರು ಮನೆಯ ಮುಂದೆ ಬಂದು ತೆಗಳಿದ್ದಾರೆ ಎಂದು ವಾದಿಸಿದರು.
ಇದನ್ನೂ ಓದಿ: ಕಿವುಡ ತಂದೆಯ ಕನಸು ನನಸಾಗಿಸಿದ ಮಗ; AI ಎಂಜಿನಿಯರ್ ಆಗಿ 1.06 ಕೋಟಿ ರೂ. ಪ್ಯಾಕೇಜ್ ಪಡೆದ ಅಖಿಲೇಶ್
ಹೈಕೋರ್ಟ್ನ ಗಂಭೀರ ಪ್ರಶ್ನೆ:
ಸೊಸೆಯ ಈ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಕಠಿಣ ಪ್ರಾಸಂಗಿಕ ಪ್ರಶ್ನೆಗಳನ್ನು ಎತ್ತಿತು. “ಇಂತಹ ಮನೆಯ ದೈನಂದಿನ ಸಾಮಾನ್ಯ ಸಮಸ್ಯೆಗಳನ್ನು ವಿಚ್ಛೇದನದ ಅರ್ಜಿಯಲ್ಲಿ ಉಲ್ಲೇಖಿಸಿ. ಆದರೆ ಇವೆಲ್ಲವನ್ನೂ ೪೯೮ಎ ಅಡಿಯ ಕ್ರೌರ್ಯ ಅಥವಾ ಅಪರಾಧ ಎನ್ನಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿತು. ಕ್ರೌರ್ಯ ಎಂಬುದು ದೂರುದಾರರ ವೈಯಕ್ತಿಕ ದೃಷ್ಟಿಕೋನದಲ್ಲಿರುವುದಲ್ಲ, ಅದು ಕಾನೂನಿನಲ್ಲಿ ನಿರ್ವಚಿಸಿರುವಂತಿರಬೇಕು. ಮನೆಯ ದೈನಂದಿನ ಘಟನೆಗಳನ್ನು ಅಪರಾಧ ಎಂದು ವ್ಯಾಖ್ಯಾನಿಸಲು ಬರುವುದಿಲ್ಲ” ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟು, ಅರ್ಜಿಯ ಆದೇಶವನ್ನು ಕಾಯ್ದಿರಿಸಿತು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:13 pm, Tue, 28 July 26



