AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಕೆರೆಯಲ್ಲಿ ವಿಜಯನಗರ ಕಾಲದ ಪುರಾತನ ಶಿಲ್ಪ ಪತ್ತೆ

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿ ಸವಳಂಗ ಗ್ರಾಮದ ಹೊರವಲಯದಲ್ಲಿರುವ ಹೊಸಕೆರೆಯಲ್ಲಿ ಕಪ್ಪು ಕಲ್ಲಿನಲ್ಲಿ ಕೆತ್ತಲಾದ ಚತುರ್ಭುಜಗಳ ಮೂರ್ತಿಯೊಂದು ಪತ್ತೆಯಾಗಿದೆ. ಮೇಲ್ನೋಟಕ್ಕೆ ಭೈರವ, ಕಾಳಿ ಮತ್ತು ವೀರಭದ್ರ ಶಿಲ್ಪಗಳಿಗೆ ಹೊಂದಾಣಿಕೆಯಾಗುವ ಲಕ್ಷಣವಿರುವ ಶಿಲ್ಪ ಇದಾಗಿದೆ.

ದಾವಣಗೆರೆ: ಕೆರೆಯಲ್ಲಿ ವಿಜಯನಗರ ಕಾಲದ ಪುರಾತನ ಶಿಲ್ಪ ಪತ್ತೆ
ದಾವಣಗೆರೆ: ಕೆರೆಯಲ್ಲಿ ವಿಜಯನಗರ ಕಾಲದ ಪುರಾತನ ಶಿಲ್ಪ ಪತ್ತೆ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಆಯೇಷಾ ಬಾನು|

Updated on: Jul 17, 2024 | 8:29 AM

Share

ದಾವಣಗೆರೆ, ಜುಲೈ.17: ಜಿಲ್ಲೆಯ ಕೆರೆಯೊಂದರಲ್ಲಿ ವಿಜಯನಗರ ಕಾಲದ (Vijayanagara Empire) ಪುರಾತನ ಶಿಲಾ ಶಿಲ್ಪ ಪತ್ತೆಯಾಗಿದೆ. ದಾವಣಗೆರೆ (Davanagere) ಜಿಲ್ಲೆಯ ನ್ಯಾಮತಿ ತಾಲೂಕಿ ಸವಳಂಗ ಗ್ರಾಮದ ಹೊರವಲಯದಲ್ಲಿರುವ ಹೊಸಕೆರೆಯಲ್ಲಿ ಮೂರ್ತಿಯೊಂದು ಪತ್ತೆಯಾಗಿದೆ. ಮೇಲ್ನೋಟಕ್ಕೆ ಭೈರವ, ಕಾಳಿ ಮತ್ತು ವೀರಭದ್ರ ಶಿಲ್ಪಗಳಿಗೆ ಹೊಂದಾಣಿಕೆಯಾಗುವ ಲಕ್ಷಣವಿರುವ ಶಿಲ್ಪ ಇದಾಗಿದೆ. ಕಪ್ಪು ಶಿಲೆಯಲ್ಲಿ ಕೆತ್ತಲಾಗಿದ್ದು ವಿಜಯನಗರ ಕಾಲಕ್ಕೆ ಸೇರಿದ್ದೆನ್ನಲಾಗಿದೆ.

ಚತುರ್ಭುಜಗಳಿದ್ದು, ಬಲ ಭಾಗದ ಮುಂಗೈನಲ್ಲಿ ಖಡ್ಗ, ಮೇಲ್ಮುಖವಾಗಿ ಭುಜದ ಮೇಲಿದೆ. ಬಲಭಾಗದ ಇನ್ನೊಂದು ಕೈಯಲ್ಲಿ ತ್ರಿಶೂಲವಿದ್ದು ಎಡಗೈಯೊಂದು ಭಗ್ನಗೊಂಡಿದೆ. ಇನ್ನೊಂದು ಕೈಯಲ್ಲಿ ಪಾಶವಿರುವಂತ ಲಕ್ಷಣ ಶಿಲ್ಪದಲ್ಲಿ ಕಂಡುಬಂದಿದೆ. ಶಿರದ ಎಡ, ಬಲ ಭಾಗದಲ್ಲಿ ಸೂರ್ಯ ಚಂದ್ರರ ಕೆತ್ತನೆ ಇದೆ. ಶಿಲ್ಪದಲ್ಲಿ ಯಾವುದೇ ಶಾಸನ ಕೆತ್ತನೆ ಇಲ್ಲ ಎನ್ನಲಾಗಿದೆ. ಸದ್ಯ ಇದು ಯಾವ ರಾಜರ ಕಾಲದ್ದು, ಏಕೆ ಕೆತ್ತಿಸಲಾಗಿತ್ತು. ಕೆತ್ತಿದ್ದು ಯಾರು ಎಂಬ ಬಗ್ಗೆ ಸಂಶೋಧನೆ ನಡೆಯಬೇಕಿದೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಕರ್ನಾಟಕದ ಈ ರೈಲುಗಳು ತಾತ್ಕಾಲಿಕವಾಗಿ ರದ್ದು

ನಾಗಮಂಗಲದಲ್ಲಿ ಹೊಯ್ಸಳರ ಕಾಲದ ಅಪರೂಪದ ಕಲ್ಲು ಪತ್ತೆ

ಇನ್ನು ಮತ್ತೊಂದೆಡೆ ಇತ್ತೀಚೆಗೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಮಾಚಲಘಟ್ಟ ಕುಗ್ರಾಮದ ಮಲ್ಲೇಶ್ವರ ದೇವಸ್ಥಾನದ ಬಳಿ ಹೊಯ್ಸಳರ ಕಾಲದ ಶಾಸನಗಳು ಮತ್ತು ರೇಖಾಚಿತ್ರಗಳು ಇರುವ ಅಪರೂಪದ ಕಲ್ಲು ಪತ್ತೆಯಾಗಿತ್ತು. ಪ್ರೀಮಿಯರ್ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್​​ (CIIL) ನ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರದ ಸಂಶೋಧಕರು ನಡೆಸಿದ ಕ್ಷೇತ್ರ ಕಾರ್ಯದಲ್ಲಿ ಶಿಲೆ ಪತ್ತೆಯಾಗಿತ್ತು. ತಜ್ಞರ ಪ್ರಕಾರ, ಇದು 16 ನೇ ಶತಮಾನದ ಶಿಲಾ ಶಾಸನವಾಗಿದ್ದು, ದುಷ್ಟಶಕ್ತಿಗಳನ್ನು ಗ್ರಾಮದಿಂದ ದೂರವಿಡಲು ಸ್ಥಾಪಿಸಲಾಗಿದೆ ಎಂದು ತಿಳಿದುಬಂದಿತ್ತು.

ಅಲ್ಲದೆ ಸಿಕ್ಕ ಚಪ್ಪಡಿ ಕಲ್ಲಿನಲ್ಲಿ ರೇಖೆಗಳನ್ನು ಕೆತ್ತಲಾಗಿದ್ದು, ಬರಹಗಳು ಮೋದಿ ಲಿಪಿಯಲ್ಲಿದ್ದವು. ಅರ್ಧ ಶಿಲೆ (ಮೇಲಿನ ಭಾಗ) ಮಾತ್ರ ಪತ್ತೆಯಾಗಿದ್ದು, ಇನ್ನೂ ಅರ್ಧ ಶಿಲೆ ಭೂಮಿಯೊಳಗೆ ಹುದುಗಿ ಹೋಗಿದೆ ಎಂದು ಹೇಳಲಾಗುತ್ತಿದೆ. ಹಿರಿಯ ಸಂಶೋಧನಾ ಸಹೋದ್ಯೋಗಿ ಶಶಿಧರ ಸಿಎ ಅವರು ಈ ಸಂಶೋಧನೆಯನ್ನು ನಡೆಸಿದರು. ಸಿಐಐಎಲ್ ನಿರ್ದೇಶಕ ಶೈಲೇಂದ್ರ ಮೋಹನ್ ಅವರ ಮಾರ್ಗದರ್ಶಕರಾಗಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓಲದು ಇದರ ಮೇಲೆ ಕ್ಲಿಕ್ ಮಾಡಿ