ದಾವಣಗೆರೆ: ವಿಷಕಾರಿ ಹುಲ್ಲು ಸೇವಿಸಿ 34 ಕುರಿಗಳ ಸಾವು
ವಿಷಕಾರಿ ಹುಲ್ಲು ತಿನ್ನುತ್ತಿದ್ದಂತೆ ಒಂದಾದ ಮೇಲೆ ಒಂದರಂತೆ ಕುರಿಗಳು ಮೃತಪಟ್ಟಿವೆ. ಇನ್ನೂ ಐವತ್ತಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ.

ಮುಖ್ಯಾಂಶಗಳು
- ವಿಷಕಾರಿ ಹುಲ್ಲು ಸೇವಿಸಿ 34 ಕುರಿಗಳ ಸಾವು
- ಕುರಿಗಳನ್ನು ಕಳೆದುಕೊಂಡು ಕಂಗಾಲಾದ ರೈತ
- ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನ ಅಡ್ಡಗಟ್ಟಿ ಜಾನುವಾರುಗಳ ರಕ್ಷಣೆ
ದಾವಣಗೆರೆ: ವಿಷಕಾರಿ ಹುಲ್ಲು ತಿಂದು 34 ಕುರಿಗಳು ಮೃತಪಟ್ಟ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಬಳಿಯ ಒಂಟಿಹಾಳ್ ಗ್ರಾಮದಲ್ಲಿ ನಡೆದಿದೆ. ಅಡಿಕೆ ತೋಟದಲ್ಲಿ ಬೆಳೆದ ವಿಚಿತ್ರ ರೀತಿಯ ಹುಲ್ಲು ತಿಂದು ಕುರಿಗಳು ಇದ್ದಕ್ಕಿದ್ದಂತೆ ಸಾವನ್ನಪ್ಪಿವೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕುರಿದಾಸರಹಳ್ಳಿ ನಿವಾಸಿ ಡಿ. ಮಂಜಪ್ಪ ಕುರಿಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ವಿಷಕಾರಿ ಹುಲ್ಲು ತಿನ್ನುತ್ತಿದ್ದಂತೆ ಒಂದಾದ ಮೇಲೆ ಒಂದರಂತೆ ಕುರಿಗಳು ಮೃತಪಟ್ಟಿವೆ. ಇನ್ನೂ ಐವತ್ತಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ. ಸಕಾಲಕ್ಕೆ ಪಶುವೈದ್ಯರಿಂದ ಚಿಕಿತ್ಸೆ ಸಿಕ್ಕಿದ್ದು ಪ್ರಾಣಾಪಾಯದಿಂದ ಕುರಿಗಳು ಪಾರಾಗಿವೆ.
ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ವ್ಯಕ್ತಿ ಅನುಮಾನಸ್ಪದ ಸಾವು
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಗ್ರಾಮದ ಬಳಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನ ಅಡ್ಡಗಟ್ಟಿ ಜಾನುವಾರುಗಳ ರಕ್ಷಣೆ ಮಾಡಲಾಗಿದೆ. ಈ ವೇಳೆ ಕ್ಯಾಂಟರ್ ನಲ್ಲಿದ್ದ ವ್ಯಕ್ತಿ ಅನುಮಾನಸ್ಪದವಾಗಿ ಮೃತಪಟ್ಟಿದ್ದು ಪುನೀತ್ ಕೆರೆಹಳ್ಳಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 341, 504, 506, 324, 302, 34 ರ ಅಡಿ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಡ್ಯ ಮೂಲದ ಇದ್ರಿಸ್ ಪಾಷ ಎಂಬಾತ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ.
ಮೊಬೈಲ್ ಕಳ್ಳ ಅರೆಸ್ಟ್
ರಸ್ತೆ ಬದಿ ಒಂಟಿಯಾಗಿ ಮೊಬೈಲ್ ಹಿಡಿದು ಮಾತಾಡುತ್ತಿದ್ದವರ ಮೊಬೈಲ್ ದೋಚುತ್ತಿದ್ದ ಖದೀಮನನ್ನು ಪೊಲೀಸರು ಬಂದಿದ್ದಾರೆ. ಈತ ಬೆಂಗಳೂರಿನ ವಿವಿಪುರ, ಬಸವನಗುಡಿ, ಜಯನಗರ, ಆಶೋಕ್ ನಗರ ಸೇರಿ ನಗರದ ಬಹುತೇಕ ಕಡೆ ನೂರ ಹತ್ತು ಮೊಬೈಲ್ ದೋಚಿದ್ದಾನೆ. ಜೆಜೆನಗರ ನಿವಾಸಿ ಮುಬಾರಕ್ ಬಂಧಿತ ಅರೋಪಿ.
ತಾನು ಮೊಬೈಲ್ ಸ್ನಾಚ್ ಮಾಡುವುದಲ್ಲದೆ ಬೇರೆಯವರು ಕದ್ದ ಮೊಬೈಲ್ ಗಳನ್ನು ಈತ ಖರೀದಿಸುತ್ತಿದ್ದ. ಬಳಿಕ ಮೊಬೈಲ್ ಗಳನ್ನು ಬೇರೆ ಕಡೆಗೆ ಮಾರಾಟ ಮಾಡ್ತಿದ್ದ. ಕದ್ದ ಮೊಬೈಲ್ ಹಾಗು ಅವುಗಳ ಬಿಡಿ ಭಾಗ ಮಾಡಿ ಹೈದ್ರಾಬಾದ್ ಸೇರಿ ಬೇರೆಬೇರೆ ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದ, ಬಂಧಿತ ಆರೋಪಿ ಬಳಿಯಿಂದ ನೂರ ಹತ್ತು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ವಿವಿಪುರ ಪೊಲೀಸರು ಆರೋಪಿಯ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:11 am, Sun, 2 April 23



