
ದಾವಣಗೆರೆ, ಆಗಸ್ಟ್ 30: ಖಾಸಗಿ ಬ್ಯಾಂಕ್ನ ಮೇಲಾಧಿಕಾರಿಗಳ ಕಿರುಕುಳ, ಬಡ್ತಿ ಸಿಗದಿರುವುದು ಮತ್ತು ಸಾಲದ ಸುಳಿಗೆ ಸಿಲುಕಿ ಮನನೊಂದ ಬ್ಯಾಂಕ್ ಸಿಬ್ಬಂದಿಯೊಬ್ಬರು ವಿಡಿಯೋ ಮಾಡಿ ನಾಪತ್ತೆಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ನಡೆದಿದೆ. ಹೊನ್ನಾಳಿ ತಾಲೂಕಿನ ಮಾದನಭಾವಿ ಗ್ರಾಮದ ಆರ್ಡಿ ಮೋಹನ್ ಕುಮಾರ್ (37) ನಾಪತ್ತೆಯಾದ ದುರ್ದೈವಿ. ಇವರು ಹೊನ್ನಾಳಿ ತಾಲೂಕಿನ ತುಂಗಾ ಮೇಲ್ದಂಡೆ ಕಾಲುವೆಗೆ ಬೈಕ್ ಸಮೇತ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ನಾಪತ್ತೆಯಾಗುವ ಮುನ್ನ ಮೋಹನ್ ಕುಮಾರ್ ವಿಡಿಯೋ ಒಂದನ್ನು ಹರಿಬಿಟ್ಟಿದ್ದು, ಅದರಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. “ಬ್ಯಾಂಕ್ನಲ್ಲಿ ಮ್ಯಾನೇಜರ್ ಪೋಸ್ಟ್ ಪಡೆಯಲು 50 ಸಾವಿರ ರೂಪಾಯಿ ಸಾಲ ಮಾಡಿ ನಕಲಿ ಮಾರ್ಕ್ಸ್ ಕಾರ್ಡ್ ಮಾಡಿಸಿಕೊಟ್ಟಿದ್ದೆ. ಆದರೆ ಪ್ರಮೋಶನ್ ಸಿಗಲಿಲ್ಲ, ಬದಲಾಗಿ ಸಾಲ ಹೆಚ್ಚಾಯಿತು. ನನ್ನ ಈ ಸ್ಥಿತಿಗೆ ಮತ್ತು ಸಾಲದ ಸುಳಿಗೆ ಐಡಿಎಫ್ಸಿ (IDFC) ಬ್ಯಾಂಕ್ ಹಾಗೂ ಸಹ ಸಿಬ್ಬಂದಿ ತಿಪ್ಪೇಶ್ ಮತ್ತು ಕೊಟ್ರೇಶ್ ಕಾರಣ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ, “ಬ್ಯಾಂಕ್ನವರು ಲಂಚ ಪಡೆದು ಮೋಸ ಮಾಡಿದ್ದಾರೆ. ಎಷ್ಟೋ ನೌಕರರು ತಮ್ಮ ಕೈಯಿಂದ ಹಣ ಹಾಕಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಮುಂದೆ ನಿಂತು ನನ್ನ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು” ಎಂದು ವಿಡಿಯೋದಲ್ಲಿ ವಿನಂತಿಸಿಕೊಂಡಿದ್ದಾರೆ.
ಘಟನಾ ಸ್ಥಳದಲ್ಲಿ ಬೈಕ್ ಪತ್ತೆಯಾಗಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ನಾಲೆಯಲ್ಲಿ ಮೋಹನ್ ಕುಮಾರ್ ಅವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ