ಎಐ ಬಳಸಿ ಚಿರತೆಯ ಫೋಟೋ ಸೃಷ್ಟಿಸಿ ವೈರಲ್ ಮಾಡಿದ ಯುವಕನಿಗೆ ಬಿಸಿ ಮುಟ್ಟಿಸಿದ ಪೊಲೀಸರು!

ದಾವಣಗೆರೆಯಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ನಕಲಿ ಚಿರತೆ ಫೋಟೋ ವೈರಲ್ ಮಾಡಿದ ಯುವಕನಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇನ್ನೊಂದೆಡೆ ದೊಡ್ಡಬಳ್ಳಾಪುರದಲ್ಲಿ ಕೋಳಿಫಾರ್ಮ್‌ ಮೇಲೆ ಚಿರತೆ ದಾಳಿ ನಡೆಸಿ 950ಕ್ಕೂ ಹೆಚ್ಚು ಕೋಳಿಗಳನ್ನು ಕೊಂದಿದ್ದರೆ, ಚಿಕ್ಕಮಗಳೂರಿನ ಕಡೂರಿನಲ್ಲಿ ಮನೆ ಬಳಿ ಚಿರತೆ ಬಂದಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಎಐ ಬಳಸಿ ಚಿರತೆಯ ಫೋಟೋ ಸೃಷ್ಟಿಸಿ ವೈರಲ್ ಮಾಡಿದ ಯುವಕನಿಗೆ ಬಿಸಿ ಮುಟ್ಟಿಸಿದ ಪೊಲೀಸರು!
ಚಿರತೆಯ ಎಐ ಫೋಟೋ

Updated on: Sep 13, 2026 | 11:01 AM

ಮುಖ್ಯಾಂಶಗಳು

  • ಎಐ ಚಿರತೆ ಫೋಟೋ ಸೃಷ್ಟಿಸಿ ವೈರಲ್ ಮಾಡಿದ ಯುವಕನಿಗೆ ಪೊಲೀಸ್ ಬಿಸಿ.
  • ದೊಡ್ಡಬಳ್ಳಾಪುರದಲ್ಲಿ ಕೋಳಿಫಾರ್ಮ್‌ಗೆ ಚಿರತೆ ದಾಳಿ; 950ಕ್ಕೂ ಹೆಚ್ಚು ಕೋಳಿ ಮರಿಗಳು ಸಾವು.
  • ಚಿಕ್ಕಮಗಳೂರಿನಲ್ಲಿ ಮನೆ ಬಳಿ ಬಂದ ಚಿರತೆ; ಅರಣ್ಯ ಇಲಾಖೆ ವಿರುದ್ಧ ಆಕ್ರೋಶ.

ಬೆಂಗಳೂರು, ಸೆಪ್ಟೆಂಬರ್ 13:  ದಾವಣಗೆರೆಯ ಜಿಲ್ಲೆಯ ಹರಿಹರ ತಾಲೂಕಿನ ವಾಸನ ಗ್ರಾಮದ ಸುನೀಲ್ (22) ಎಂಬ ಯುವಕ ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಿದ್ದ ನಕಲಿ ಚಿರತೆ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ. ಇದೀಗ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿದ್ದಾರೆ.ಇನ್ನೊಂದೆಡೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸೋಮಶೆಟ್ಟಿಹಳ್ಳಿ (ಸೊಣಶೆಟ್ಟಿಪುರ) ಗ್ರಾಮದಲ್ಲಿ ಚಿರತೆ ಹಾವಳಿ ವರದಿಯಾಗಿದೆ. ಕೆಂಪೇಗೌಡ ಎಂಬುವರಿಗೆ ಸೇರಿದ ಕೋಳಿಫಾರ್ಮ್‌ಗೆ ತಡರಾತ್ರಿ 3 ಗಂಟೆ ಸುಮಾರಿಗೆ ಕೋಳೂರು ಮೀಸಲು ಅರಣ್ಯ ಪ್ರದೇಶದಿಂದ ಬಂದ ಚಿರತೆ ಹಾಗೂ ಅದರ ಮರಿಗಳು ದಾಳಿ ನಡೆಸಿವೆ.

ಚಿರತೆಯ ಎಐ ಫೋಟೋ ತಂದ ಸಂಕಷ್ಟ

ನಂದೀಶ್ವರ ಕ್ಯಾಂಪ್‌ನ ತೋಟದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ಹಬ್ಬಿಸಿದ್ದ ಈ ಫೋಟೋ ಇಡೀ ಜಿಲ್ಲಾದ್ಯಂತ ವೈರಲ್ ಆಗಿತ್ತು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಚಿರತೆಯ ಹೆಜ್ಜೆ ಗುರುತುಗಳು ಸಿಗದಿದ್ದಾಗ ಶಂಕೆ ವ್ಯಕ್ತಪಡಿಸಿದ್ದರು. ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ತಾನು ಮಾಡಿದ್ದು ಎಐ ಫೋಟೋ ಎಂದು ಒಪ್ಪಿಕೊಂಡ ಯುವಕನಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಬಿಟ್ಟುಕಳುಹಿಸಲಾಗಿದೆ.

ಕೋಳಿಫಾರ್ಮ್‌ ಮೇಲೆ ಚಿರತೆ ದಾಳಿ, 950ಕ್ಕೂ ಹೆಚ್ಚು ಕೋಳಿ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸೋಮಶೆಟ್ಟಿಹಳ್ಳಿ (ಸೊಣಶೆಟ್ಟಿಪುರ) ಗ್ರಾಮದ ಕೋಳಿಫಾರ್ಮ್‌ ಮೇಲೆ ಚಿರತೆ ದಾಳಿ ನಡೆಸಿದೆ. ಘಟನೆಯಲ್ಲಿ ಸುಮಾರು 950ಕ್ಕೂ ಹೆಚ್ಚು ಕೋಳಿ ಮರಿಗಳು ಅಸುವಾಗಿದ್ದು, ರೈತನಿಗೆ ಅಂದಾಜು 1.5 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ. ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆ ಸೆರೆಗೆ ಆಗ್ರಹಿಸಿ ಗ್ರಾಮಸ್ಥರಲ್ಲಿ ಆತಂಕ ವ್ಯಕ್ತವಾಗಿದೆ.

ಚಿಕ್ಕಮಗಳೂರಿನಲ್ಲೂ ಹೆಚ್ಚಿದ ಚಿರತೆ ಹಾವಳಿ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಪ್ರಭಾಕರ್ ಎಂಬುವವರ ಮನೆ ಬಳಿ ಬಂದ ಚಿರತೆ ನೀರು ಕುಡಿದು ಹೋಗಿದ್ದು, ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸಿಂಗಟಗೆರೆ ಅರಣ್ಯ ವ್ಯಾಪ್ತಿಯ ಆಣೆಗೆರೆ, ಬಿ. ಮಲ್ಲೇನಹಳ್ಳಿ ಸುತ್ತಮುತ್ತ ಚಿರತೆ ನಿರಂತರ ಸಂಚರಿಸುತ್ತಿದ್ದರೂ, ಸೆರೆ ಹಿಡಿಯದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us