Karnataka Covid Updates: ಬಹುದಿನಗಳ ಬಳಿಕ ದಾವಣಗೆರೆಯಲ್ಲಿ ಕೊರೊನಾ ಸೋಂಕು ಪತ್ತೆ, ಹೆಚ್ಚಿದ ಆತಂಕ

ಬಹುದಿನಗಳ ಬಳಿಕ ದಾವಣಗೆರೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಇನ್ನೇನು ಕೊರೊನಾ ಸೋಂಕು ಕಡಿಮೆಯಾಗುತ್ತಿದೆ ಎನ್ನುವಾಗಲೇ ಮತ್ತೆ ಆರ್ಭಟ ಶುರುವಾಗಿದೆ.

Karnataka Covid Updates: ಬಹುದಿನಗಳ ಬಳಿಕ ದಾವಣಗೆರೆಯಲ್ಲಿ ಕೊರೊನಾ ಸೋಂಕು ಪತ್ತೆ, ಹೆಚ್ಚಿದ ಆತಂಕ
Coronavirus
Edited By:

Updated on: Dec 30, 2022 | 9:11 AM

ಬಹುದಿನಗಳ ಬಳಿಕ ದಾವಣಗೆರೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಇನ್ನೇನು ಕೊರೊನಾ ಸೋಂಕು ಕಡಿಮೆಯಾಗುತ್ತಿದೆ ಎನ್ನುವಾಗಲೇ ಮತ್ತೆ ಆರ್ಭಟ ಶುರುವಾಗಿದೆ. ಜಿಲ್ಲೆಯ ಜಗಳೂರಿನಲ್ಲಿ 74 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕಳೆದ ನವೆಂಬರ್ ನಲ್ಲಿ ಒಂದು ಪಾಸಿಟಿವ್ ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿತ್ತು. ಕೋವಿಡ್ ನಿಯಮಾನುಸಾರ ಜಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ 7 ಮಂದಿ ಹಾಗೂ ದ್ವಿತೀಯ ಸಂಪರ್ಕಕ್ಕೆ ಮೂರು ಜನ ಬಂದಿದ್ದು ಕಫದ ಮಾದರಿ ಸಂಗ್ರಹಿಸಲಾಗಿದೆ.
ಈ ಕುರಿತು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ‌ ರಾಘವನ್ ಮಾಹಿತಿ ನೀಡಿದ್ದಾರೆ. ಸೋಂಕಿತ‌ನ ಪತ್ನಿ ಮಾತ್ರ ಇದೇ ತಿಂಗಳು ತುಮಕೂರಿಗೆ ಹೋಗಿ ಬಂದಿರುವ ಮಾಹಿತಿ ಇದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರಿಗೆ ಅವರವರ ಮನೆಯಲ್ಲಿ ಪ್ರತ್ಯೇಕವಾಗಿರಲು ಸೂಚನೆ.

ವಿದೇಶದಿಂದ ಬರುತ್ತಿರುವ ಪ್ರಯಾಣಿಕರಿಗೆ ಸ್ಕ್ರೀನಿಂಗ್ ನಡೆಸಲಾಗುತ್ತಿದೆ, ನಿನ್ನೆ ವಿದೇಶಗಳಿಂದ ಬೆಂಗಳೂರಿಗೆ ಬಂದ ಐದು ಸಾವಿರಕ್ಕೂ ಅಧಿಕ ಜನರು ಬಂದಿಳಿದಿದ್ದಾರೆ.ವಿವಿಧ ದೇಶಗಳಿಂದ‌ ಬಂದ ಪ್ರಯಾಣಿಕರಲ್ಲಿ 2% ಪ್ರಯಾಣಿಕರಿಗೆ ಟೆಸ್ಟಿಂಗ್ ನಡೆದಿದೆ. 120 ಜನರ ಸ್ಯಾಂಪಲ್ ಪಡೆದು ಆರೋಗ್ಯ ಇಲಾಖೆ‌ ಅಧಿಕಾರಿಗಳಿಂದ ಟೆಸ್ಟಿಂಗ್ ನಡೆಸಲಾಗುತ್ತಿದೆ. ಟೆಸ್ಟಿಂಗ್​ನಲ್ಲಿ ಎಲ್ಲರ ವರದಿ ನೆಗಟಿವ್ ಬಂದಿದೆ. ಯಾರಲ್ಲೂ ಕೊರೊನಾ ಸೋಂಕು ಕಂಡುಬಂದಿಲ್ಲ, ನಿನ್ನೆ ಮೂವರಿಗೆ ಸೋಂಕು ದೃಡವಾಗಿತ್ತು.

ಇಂದು ಬಂದ ವರದಿಯಲ್ಲಿ ಎಲ್ಲರದ್ದು ನೆಗಟಿವ್ ಬಂದಿರುವ ಹಿನ್ನೆಲೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಇಂದು ಸಹ ವಿದೇಶಗಳಿಂದ ರಾಜ್ಯಕ್ಕೆ ಸಾವಿರಾರು ಮಂದಿ ಬರಲಿದ್ದಾರೆ.

ಅವರಿಗೂ ಆರೋಗ್ಯ ಅಧಿಕಾರಿಗಳು ಟೆಸ್ಟಿಂಗ್ ನಡೆಸಲಿದ್ದಾರೆ.  ಚೀನಾ‌ ಸೇರಿದಂತೆ ವಿವಿಧ ದೇಶಗಳಲ್ಲಿ ಉಲ್ಬಣಿಸಿರುವ ಕೊರೊನಾ ಸೋಂಕು ಇದೀಗ ಭಾರತದಲ್ಲೂ ಹೊಸ ಆಲೆಯ ಭೀತಿ ಸೃಷ್ಟಿ ಮಾಡಿದ್ದು, ಮುಂದಿನ 40 ದಿನಗಳು ದೇಶಕ್ಕೆ ಅತ್ಯಂತ ನಿರ್ಣಾಯಕವಾಗಿರಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ.

ಕೇಂದ್ರ ಆರೋಗ್ಯ ಇಲಾಖೆಯ ಕೋವಿಡ್ ತಜ್ಞರ ಸಲಹಾ ಸಮಿತಿಯಲ್ಲಿ ನಡೆದ ಸಭೆಯ ಬಳಿಕ ಈ ಮಾಹಿತಿ ಹೊರಬಿದ್ದಿದ್ದು, ಮುಂದಿನ ತಿಂಗಳು ದೇಶದಲ್ಲಿ ಸೋಂಕು ಉತ್ತುಂಗಕ್ಕೇರಲಿದ್ದು ಎಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ಮುನ್ನೆಚ್ವರಿಕೆ ನೀಡಿದೆ.

ಜನವರಿಯಲ್ಲಿ ದೇಶದಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣ ಹೆಚ್ಚಾಗಲಿದ್ದು ಮುಂದಿನ 40 ದಿನಗಳು ನಿರ್ಣಾಯಕ ಎಂದು ಹೇಳಲಾಗಿದ್ದು,  ದೇಶದಲ್ಲಿ ಸೋಂಕು ಉತ್ತುಂಗಕ್ಕೇರಿದರೂ ಜೊತೆಗೆ ಅಲೆ ಎದ್ದರೂ ಸಾವು ಮತ್ತು ಆಸ್ಪತ್ರೆಗೆ ದಾಖಲಾಗುವರ ಸಂಖ್ಯೆ ತೀರಾ ಕಡಿಮೆ ಇರುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ