ಸ್ವಚ್ಛತೆಯನ್ನು ಸವಾಲಾಗಿ ಸ್ವೀಕರಿಸುವ ಜನರು ಏನು ಮಾಡಬಹುದು ಎನ್ನುವುದಕ್ಕೆ ಧಾರವಾಡದಲ್ಲಿ ನಡೆದ ಈ ಸ್ಪರ್ಧೆ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಯುಗಾದಿ ಇರುವ ಹಿನ್ನಲೆಯಲ್ಲಿ ಈ ರೀತಿಯಲ್ಲಿ ಸ್ವಚ್ಛತೆ ನಡೆಯುತ್ತಿದೆ ಎಂದು ಹಲವು ಭಾವಿಸಿದ್ದರು. ಆದರೆ, ಇಲ್ಲಿನ ಬಡಾವಣೆಯ ಜನರಿಗೆ ಸ್ವಚ್ಛ ಮಾಡುವ ಸ್ಪರ್ದೆ ಏರ್ಪಡಿಸಲಾಗಿತ್ತು. ಈ ನಿಟ್ಟಿನಲ್ಲಿ ಮನೆ ಮುಂದೆ ಸ್ವಚ್ಛ ಮಾಡಿ, ರಂಗೋಲಿ ಹಾಕಿ, ಸ್ವಚ್ಛ ಭಾರತ ಅಭಿಯಾನದ ಘೋಷ ವಾಕ್ಯವನ್ನು ಆಚರಣೆಗೆ ತರಲಾಯಿತು.
ಇದರ ಹಿಂದೆ ಒಂದು ವಿಭಿನ್ನ ಬಗೆಯ ಸ್ಪರ್ಧೆ ಹಾಗೂ ಸ್ವಚ್ಛ ಭಾರತದ ಪರಿಕಲ್ಪನೆ ಇದೆ. ಈ ಬಡಾವಣೆಯ ನಿವಾಸಿಗಳ ಸಂಘದಿಂದ ಪ್ರತಿ ವರ್ಷ ಯುಗಾದಿ ಸಂದರ್ಭದಲ್ಲಿ ಸಭಾಭವನದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಿಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಪರ್ಧೆ ಆಯೋಜಿಸಲು ಅವಕಾಶ ಇಲ್ಲದ್ದರಿಂದ ಮನೆಯ ಮುಂದೆಯೇ ರಂಗೋಲಿ ಹಾಕುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಎಂದು ಸ್ಥಳೀಯರಾದ ಪ್ರಜ್ಞಾ ನಡಕಟ್ಟಿ ಹೇಳಿದ್ದಾರೆ.
ಸಾಮಾನ್ಯವಾಗಿ ಎಲ್ಲ ಕಡೆ ನಡೆಯುವಂತೆ ಇಲ್ಲಿಯೂ ರಂಗೋಲಿ ಸ್ಪರ್ಧೆ ನಡೆದಿತ್ತು. ಆದರೆ ಇದು ವಿಶೇಷ ಏಕೆಂದರೆ ತಮ್ಮ ಮನೆಯ ಅಂಗಳವಷ್ಟೇ ಅಲ್ಲದೇ ಸುತ್ತಮುತ್ತಲಿನ ಭಾಗವನ್ನು ಕೂಡ ಸ್ವಚ್ಛಗೊಳಿಸಬೇಕು ಎಂಬ ಷರತ್ತು ಹಾಕಲಾಗಿತ್ತು. ಹೀಗಾಗಿ ಎಲ್ಲರೂ ಕೂಡ ಸ್ವಚ್ಛತೆಯನ್ನು ಸ್ಪರ್ಧೆಯ ಒಂದು ಭಾಗವಾಗಿ ಪರಿಗಣಿಸಿ, ಮೊದಲು ತಮಗೆ ಸಂಬಂಧಿಸಿದ ಪ್ರದೇಶವನ್ನು ಸ್ಚಚ್ಛ ಮಾಡಿ ರಂಗೋಲಿಯನ್ನು ಹಾಕಿದರು. ಒಂದು ಕಡೆ ಯುಗಾದಿ ಸಂಭ್ರಮ. ಇನ್ನೊಂದು ಕಡೆ ರಂಗೋಲಿ ಅಂದ. ಮತ್ತೊಂದು ಕಡೆ ಸ್ವಚ್ಛತಾ ಅಭಿಯಾನದ ಸಾಕಾರತೆ. ಹೀಗಾಗಿ ಈ ಸ್ಪರ್ಧೆಯಲ್ಲಿ ವಯಸ್ಸಿನ ಭೇದ ಭಾವ ಇಲ್ಲದೇ ಎಲ್ಲರೂ ಭಾಗವಹಿಸಿದರು.
ಸ್ವಚ್ಛ ಮಾಡಿ ರಂಗೋಲಿ ಹಾಕುತ್ತಿರುವ ದೃಶ್ಯ
ಒಂದು ಬಡಾವಣೆಯ ಜನರು ಸೇರಿ ಕೊರೊನಾ ಮಧ್ಯೆಯೂ ವಿಭಿನ್ನವಾಗಿ ಯುಗಾದಿಯನ್ನು ಆಚರಿಸಬಹುದು ಎನ್ನುವುದಕ್ಕೆ ಧಾರವಾಡದ ಈ ಬಡಾವಣೆಯ ಜನರೇ ಸಾಕ್ಷಿ.
ಇದನ್ನೂ ಓದಿ:
ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಾಗರದ ಯುವಕ; ಜನುಮದಿನಕ್ಕೂ ಮೊದಲು ಸ್ವಚ್ಛತಾ ಕಾರ್ಯ
ಸ್ವಚ್ಛ ಕಿರೀಟ ಪಟ್ಟವನ್ನು ಮುಡಿಗೇರಿಸಿಕೊಳ್ಳಲು ಮೈಸೂರು ಕಸರತ್ತು: ಮುಂಜಾಗೃತಾ ಕ್ರಮಕ್ಕೆ ಮುಂದಾದ ಮಹಾನಗರ ಪಾಲಿಕೆ
( Dharwad people performed cleaning competition in a unique way to maintain hygiene )