
ಧಾರವಾಡ, (ಏಪ್ರಿಲ್ 30): ವಿದ್ಯಾರ್ಥಿ ಆದಿತ್ಯ ಮ್ಯಾಗೇರಿ ಆತ್ಮಹತ್ಯೆ ಪ್ರಕರಣ (Dharwad Aditya Suicide Case) ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ನನ್ಜು ಅಮಾನತು ಮಾಡಲಾಗಿದೆ. ವಿದ್ಯಾಗಿರಿ ಠಾಣೆಯ ಇನ್ಸ್ಪೆಕ್ಟರ್ ರಫೀಕ್ ನನ್ನು ಅಮಾನತು ಮಾಡಿ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಹೆಡ್ ಕಾನ್ಸ್ಟೇಬಲ್ ಚಂದ್ರು ನಡುವಿನಮನಿ, ಕಿರಣ್ ಡೊಕ್ಕಣ್ಣನವರ್ ಮತ್ತು ಸಯ್ಯದ್ ನನ್ನು ನಿನ್ನೆ (ಏಪ್ರಿಲ್ 29) ಅಮಾನತು ಮಾಡಲಾಗಿತ್ತು. ಆದ್ರೆ, ಪ್ರಕರಣ ಗಂಭೀರ ಪಡೆದುಕೊಳ್ಳುತ್ತಿದ್ದಂತೆಯೇ ಇಂದು (ಏಪ್ರಿಲ್ 30) ಇನ್ಸ್ಪೆಕ್ಟರ್ನನ್ನು ಸಹ ಸಸ್ಪೆಂಡ್ ಮಾಡಲಾಗಿದೆ.
ಗಾಂಜಾ ಸೇವನೆ ಆರೋಪದಡಿ ವಿದ್ಯಾರ್ಥಿ ಆದಿತ್ಯನನ್ನು ವಶಕ್ಕೆ ಪಡೆಯಲಾಗಿತ್ತು. ಪರೀಕ್ಷೆಯಲ್ಲಿ ಗಾಂಜಾ ಸೇವನೆ ನೆಗೆಟಿವ್ ಬಂದಿದ್ದರೂ, ಪೊಲೀಸರು ಆದಿತ್ಯನಿಂದ 2,000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ತಾಯಿಯಿಂದ ಹಣ ಕೊಡಿಸಲು ಆದಿತ್ಯ ಯತ್ನಿಸಿದ್ದು, ಆದ್ರೆ, ತಾಯಿ ನಿರಾಕರಿಸಿದ ಕಾರಣ ಧಾರವಾಡದ ಕಿಟಲ್ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದ ಆದಿತ್ಯ ಮಗ್ಯಾಗೇರಿ ಮಂಗಳವಾರ (ಏ.28) ನೇಣಿಗೆ ಶರಣಾಗಿದ್ದ.
ಸೋಮವಾರ ರಾತ್ರಿ ಆದಿತ್ಯ ತನ್ನ ಬಾಡಿಗೆ ಮನೆಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಪೊಲೀಸರ ಕಿರುಕುಳ ಮತ್ತು ಹಣದ ಬೇಡಿಕೆಯ ಒತ್ತಡವೇ ಈ ಭೀಕರ ಘಟನೆಗೆ ಕಾರಣ ಎಂದು ಅವರ ಕುಟುಂಬ ಆರೋಪಿಸಿದ್ದರು.
ಇನ್ನು, ಆದಿತ್ಯ ಮ್ಯಾಗೇರಿ ಆತ್ಮಹತ್ಯೆ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪೊಲೀಸರ ಮೇಲೆ ದೂರು ದಾಖಲಿಸಿಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದರು. ಆ ವೇಳೆ ಕಮಿಷನರ್ ಶಶಿಕುಮಾರ್ ಪ್ರತಿಕ್ರಿಯಿಸಿ, ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ರಕ್ಷಣೆ ಮಾಡಲ್ಲ ಎಂದಿದ್ದರು. ಇದರ ಬೆನ್ನಲ್ಲೇ ವಿದ್ಯಾಗಿರಿ ಪೊಲೀಸ್ ಠಾಣೆಯ ಮೂವರು ಪೇದೆಗಳನ್ನು ಸಸ್ಪೆಂಡ್ ಮಾಡಲಾಗಿತ್ತು. ಆದರೂ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈ ಪ್ರಕರಣದ ಬಗ್ಗೆ ಧ್ವನಿ ಎತ್ತಿದ್ದು,ಗೃಹ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು, ಇದರ ಬೆನ್ನಲ್ಲೇ ಇದೀಗ ಇನ್ಸ್ಪೆಕ್ಟರ್ ರಫೀಕ್ ನನ್ನು ಸಹ ಅಮಾನತು ಮಾಡಲಾಗಿದೆ.
Published On - 6:38 pm, Thu, 30 April 26