ಸೋರುತ್ತಿವೆ ಧಾರವಾಡ ಜಿಲ್ಲೆಯ 469 ಸರ್ಕಾರಿ ಶಾಲೆಗಳ ಕೊಠಡಿಗಳು

| Updated By: ವಿವೇಕ ಬಿರಾದಾರ

Updated on: May 29, 2024 | 8:57 AM

ಬೇಸಿಗೆ ರಜೆ ಮುಗಿತು. ಪಾಟಿಚೀಲ ಹಿಡಿ, ಶಾಲೆ ಕಡೆ ನಡಿ, ನಾನು ಬರತೇನ ತಡಿ ಎನ್ನುತ್ತ ಮಕ್ಕಳು ಶಾಲೆಗಳತ್ತ ಬರಲು ಸಿದ್ದವಾಗುತ್ತಿದ್ದಾರೆ. ಆದರೆ ಶಾಲೆಗಳು ಮಾತ್ರ ವಿದ್ಯಾರ್ಥಿಗಳಿಗಾಗಿ ಸುಸಜ್ಜಿತವಾಗಿಲ್ಲ. ಹೌದು, ಧಾರವಾಡ ಜಿಲ್ಲೆಯ 469 ಸರ್ಕಾರಿ ಶಾಲೆಗಳ ತರಗತಿಗಳು ಸೋರುತ್ತಿವೆ.

ಸೋರುತ್ತಿವೆ ಧಾರವಾಡ ಜಿಲ್ಲೆಯ 469 ಸರ್ಕಾರಿ ಶಾಲೆಗಳ ಕೊಠಡಿಗಳು
ಸರ್ಕಾರಿ ಶಾಲೆ ಅವಸ್ಥೆ
Follow us on

ಧಾರವಾಡ, ಮೇ 29: ಬೇಸಿಗೆ ರಜೆ (Summer Holiday) ಮುಗಿಸಿ ಇನ್ನೇನು ವಿದ್ಯಾರ್ಥಿಗಳು (Students) ಶಾಲೆ (School) ಕಡೆಗೆ ಮುಖ ಮಾಡುವ ಸಮಯ ಬಂದೇ ಬಿಟ್ಟಿದೆ. ಮೇ.29 ರಿಂದ ಶಾಲೆಗಳು ಮತ್ತೆ ಪುನರಾರಂಭಗೊಳ್ಳಲಿವೆ. ಇದರ ಜೊತೆಗೆ ಮಳೆಗಾಲ ಸಹ ಆರಂಭವಾಗಲಿದೆ. ಆದರೆ, ಧಾರವಾಡ (Dharwad) ಜಿಲ್ಲೆಯ 469 ಸರ್ಕಾರಿ ಶಾಲೆಗಳಲ್ಲಿನ ಕೆಲ ಕೊಠಡಿಗಳು ದುರಸ್ತಿ ಕಾಣಬೇಕಿವೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.

ಧಾರವಾಡ ಜಿಲ್ಲೆಯ 853 ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ 6,653 ಕೊಠಡಿಗಳ ಪೈಕಿ ಬರೋಬ್ಬರಿ 1278 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಪ್ರತಿ ವರ್ಷ ಶಾಲಾ ಪ್ರಾರಂಭೋತ್ಸವದ ಸಂದರ್ಭದಲ್ಲಿ ಈ ಮಾತುಗಳು ಸರ್ವೇ ಸಾಮಾನ್ಯವಾಗಿ ಕೇಳಿ ಬರುತ್ತದೆ. ಆದರೆ, ಅವುಗಳಿಗೆ ಶಾಶ್ವತ ಕಾಯಕಲ್ಪ ಕಲ್ಪಿಸಬೇಕು ಎಂಬ ಕಿಂಚಿತ್ತೂ ಇಚ್ಛಾಶಕ್ತಿ ಮಾತ್ರ ಸ್ಥಳೀಯ ಜನಪ್ರತಿನಿಧಿಗಳಿಗೆ ಇಲ್ಲದಿರುವುದು ನೋವಿನ ಸಂಗತಿ. ಶಾಲೆಗಳ ರಜೆ ಅವಧಿಯಲ್ಲಾದರು ಆ ಕೊಠಡಿಗಳಿಗೆ ಕಾಯಕಲ್ಪ ನೀಡಬೇಕಿತ್ತು ಎಂಬ ಬೇಸರದ ಮಾತುಗಳು ಇದೀಗ ಪಾಲಕರು ಮತ್ತು ಶಿಕ್ಷಣ ಪ್ರೇಮಿಗಳಿಂದ ಕೇಳಿ ಬರುತ್ತಿವೆ.

ಧಾರವಾಡ ಜಿಲ್ಲೆ ಎಂದರೆ ಮೊದಲಿನಿಂದಲೂ ವಿದ್ಯಾಕಾಶಿ ಎಂಬ ಹೆಸರನ್ನೇ ಉಳಿಸಿಕೊಂಡು ಬಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಫಲಿತಾಂಶದಲ್ಲಿ ಹಿಂದಕ್ಕೆ ಬಿದ್ದಿರುವುದು ವಿದ್ಯಾಕಾಶಿ ಎಂಬ ಹೆಸರಿಗೆ ಕಪ್ಪು ಚುಕ್ಕೆ ಆದಂತಾಗಿದೆ. ಸರ್ಕಾರಿ ಶಾಲೆಯ ಮಕ್ಕಳು ಉತ್ತಮ ಫಲಿತಾಂಶ ತೆಗೆದಾಗ ಮಾತ್ರವೇ ಶಾಲೆಗಳು ನೆನಪಾಗುತ್ತವೆ. ಬಳಿಕ ಯಾರೊಬ್ಬರೂ ಈ ಶಾಲೆಗಳತ್ತ ಮುಖ ಮಾಡುವುದಿಲ್ಲ ಎನ್ನುವುದು ಸ್ಥಳೀಯರ ಆರೋಪ. ಮಳೆಗಾಲದಲ್ಲಿ ಶಾಲೆಗಳ ಸ್ಥಿತಿ ಹೇಗಿದೆ ಎಂದು ಯೋಚಿಸುವ ಶಿಕ್ಷಣ ಇಲಾಖೆಯು ಮುಂಜಾಗೃತೆ ಕ್ರಮವಾಗಿ ಏನು ಮಾಡಬಹುದು ಎಂಬುದರ ಬಗ್ಗೆ ಗಮನಹರಿಸುತ್ತಿಲ್ಲ. ಜಿಲ್ಲೆಯಲ್ಲಿ ತಾಲೂಕುವಾರು ಶಾಲೆಗಳ ಸ್ಥಿತಿಗತಿ ಹೇಗಿದೆ ಎಂಬುದರ ಬಗ್ಗೆ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ಈಗಲೂ ಮಾಹಿತಿ ತಲುಪಿಲ್ಲ. ಏನೇ ಕೇಳಿದರೂ ಬಿಇಒಗಳಿಂದ ಮಾಹಿತಿ ಪಡೆಯಲಾಗುತ್ತಿದೆ ಎಂಬ ಸಿದ್ಧ ಉತ್ತರ ಹೇಳುವುದೇ ಅಧಿಕಾರಿಗಳ ಕೆಲಸವಾಗಿದೆ.

ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚಿದ ಸಾಮಾಜಿಕ ಜಾಲತಾಣದ ಗೀಳು: ಪೋಷಕರಿಗೆ ಖಾಸಗಿ ಶಾಲೆಗಳ‌ ಒಕ್ಕೂಟ ಎಚ್ಚರಿಕೆ ಪತ್ರ

ಈಗಾಗಲೇ 286 ಕೊಠಡಿಗಳ ದುರಸ್ತಿ ಕಾರ್ಯ ನಡೆದಿದೆ. ಅದಕ್ಕೆ ಸದ್ಯ 83.2 ಲಕ್ಷ ಅನುದಾನ ಬಿಡುಗಡೆಯಾಗಿದೆ. ಮಳೆ ಆರಂಭವಾದರೆ ಮತ್ತಷ್ಟು ಕೊಠಡಿಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ಆದರೆ, ಈ ಶಾಲೆಗಳಿಗೆ ಶಾಶ್ವತ ಕಾಯಕಲ್ಪ ನೀಡುವ ಕೆಲಸ ಮಾತ್ರ ಅಧಿಕಾರಿಗಳಿಂದಾಗಲಿ ಅಥವಾ ಜನಪ್ರತಿನಿಧಿಗಳಿಂದಾಗಲಿ ಇಂದಿಗೂ ಆಗಿಲ್ಲ. ಇನ್ನು ಜಿಲ್ಲೆಯಲ್ಲಿಯ ಎಲ್ಲ ಸರ್ಕಾರಿ ಶಾಲೆಗಳಿಗೆ ನರೇಗಾ ಯೋಜನೆಯಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಅವುಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡುವ ವ್ಯವಸ್ಥೆ ಇಲ್ಲದಾಗಿದೆ. ಇದರಿಂದ ಸಾಕಷ್ಟು ಕಡೆಗಳಲ್ಲಿ ಹೊಸ ಶೌಚಾಲಯ ಕೀಲಿ ಹಾಕಿರುವ ಸ್ಥಿತಿಯಲ್ಲಿಯೇ ಇವೆ. ಧಾರವಾಡದ ಶಿಕ್ಷಣ ಇಲಾಖೆ ಶಿಕ್ಷಣದ ಜೊತೆಗೆ ಮೂಲ ಸೌಕರ್ಯಕ್ಕೂ ಒತ್ತು ಕೊಡುವ ಅನಿವಾರ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:27 am, Wed, 29 May 24