ಧಾರವಾಡ, ಫೆಬ್ರವರಿ 09: ಪೊಲೀಸರು (Police) ಕೂಡ ಕೆಲಸವೊಂದು ಸಾರಿ ಚಲನಚಿತ್ರ ನಿರ್ದೇಶಕ ಆಗುತ್ತಾರೆ ಎಂಬುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಪೊಕ್ಸೋ (POCSO) ಪ್ರಕರಣದ ಆರೋಪಿಯನ್ನು ಸೆರೆಹಿಡಿಯಲು ಪೊಲೀಸರು ನ್ಯಾಯಾಧೀಶರ ಪಾತ್ರ ಸೃಷ್ಟಿಸಿ, ಯಶಸ್ವಿಯಾಗಿದ್ದಾರೆ. ಸಿನಿಮೀಯ ರೀತಿಯಲ್ಲಿ ಧಾರವಾಡ ಪೊಲೀಸರು (Dharwad Police) ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಧಾರವಾಡ ಪೊಲೀಸರ ಈ ಚಾಕಚಕ್ಯತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟಕ್ಕೂ ಧಾರವಾಡದಲ್ಲಿ ನಡೆದಿದ್ದೇನು? ಇಲ್ಲಿದೆ ಓದಿ.
ಅಣ್ಣಿಗೇರಿ ನಿವಾಸಿಯಾಗಿರುವ ವಿಜಯ ಉಣಕಲ್ ವಿರುದ್ಧ 2021ರಲ್ಲಿ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ವಿಜಯ ಉಣಕಲ್ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್ನಿಂದ ಬಂಧನ ವಾರಂಟ್ ಜಾರಿಯಾಗಿತ್ತು. ರವಿವಾರ (ಫೆ.09) ಪೊಲೀಸರು ವಿಜಯ ಉಣಕಲ್ನನ್ನು ಬಂಧಿಸಿ ಜಡ್ಜ್ ಮುಂದೆ ಹಾಜರುಪಡಿಸಿದ್ದರು. ಆರೋಪಿ ವಿಜಯ್ ಉಣಕಲ್ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿ ವಿಜಯ್ ಉಣಕಲ್ನನ್ನು ಪೊಲೀಸರು ಜೈಲಿಗೆ ಕರೆದೊಯ್ಯೊತ್ತಿದ್ದರು. ಈ ವೇಳೆ ವಿಜಯ್ ಉಣಕಲ್ ಪೊಲೀಸರಿಂದ ತಪ್ಪಿಸಿಕೊಂಡು ಕಟ್ಟಡದ ಮೇಲೇರಿದ್ದನು. ಬಳಿಕ, ಸ್ಥಳಕ್ಕೆ ನ್ಯಾಯಾಧೀಶರು ಬರಬೇಕು, ಇಲ್ಲದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದನು. ವಿಚಾರ ತಿಳಿದು ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ದೌಡಾಯಿಸಿದರು.
ಆರೋಪಿ ವಿಜಯ್ ಉಣಕಲ್ನ ಹೈಡ್ರಾಮಾ ನೋಡಲು ಸ್ಥಳಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಉನ್ಯಾಸಕ ಡಾ. ವಿಶ್ವನಾಥ್ ಚಿಂತಾಮಣಿ ಆಗಮಿಸಿದ್ದರು. ಈ ವೇಳೆ ಪೊಲೀಸರು, ಪ್ಲ್ಯಾನ್ಮಾಡಿ ಜಡ್ಜ್ ಪಾತ್ರವನ್ನು ಸೃಷ್ಟಿಸಿದರು. ಉಪನ್ಯಾಸಕ ವಿಶ್ವನಾಥ್ ಚಿಂತಾಮಣಿ ಅವರೇ ನ್ಯಾಯಾಧೀಶ ಎಂದು ಆರೋಪಿ ವಿಜಯ್ ಉಣಕಲ್ಗೆ ಪೊಲೀಸರು ಹೇಳಿದರು.
ಇದನ್ನೂ ಓದಿ: ನನ್ನ ಮಗಳ ಕೊಲೆ ಹಿಂದೆ ಶಾಸಕರ ಕೈವಾಡವಿದೆ, ನೇಹಾ ತಂದೆ ಆರೋಪ
ಪೊಲೀಸರ ಪ್ಲ್ಯಾನ್ನಂತೆ ಉಪನ್ಯಾಸಕ ವಿಶ್ವನಾಥ್ ಚಿಂತಾಮಣಿ ಅವರು ಕೂಡ ನಟಿಸಿದರು. ಉಪನ್ಯಾಸಕ ವಿಶ್ವನಾಥ್ ಚಿಂತಾಮಣಿ ಅವರ ನಟನೆಯನ್ನು ನಂಬಿ, ಆರೋಪಿ ವಿಜಯ್ ಉಣಕಲ್ ಅವರೊಂದಿಗೆ ಮಾತನಾಡಲು ಆರಂಭಿಸಿದನು. ಉಪನ್ಯಾಸಕ ವಿಶ್ವನಾಥ್ ಚಿಂತಾಮಣಿ ನೈಸ್ ಆಗಿ ಮಾತನಾಡಿ ಆರೋಪಿ ವಿಜಯ್ ಉಣಕಲ್ನನ್ನು ಕಟ್ಟಡದಿಂದ ಕೆಳಗೆ ಇಳಿಸಿದರು. ಕೂಡಲೇ, ಹಿಂದಿನಿಂದ ಬಂದ ಪೊಲೀಸರು ಆರೋಪಿ ವಿಜಯ್ ಉಣಕಲ್ನನ್ನು ಬಂಧಿಸಿ, ಕೇಂದ್ರ ಕಾರಾಗೃಹಕ್ಕೆ ಕರೆದುಕೊಂಡು ಹೋದರು.
Published On - 6:12 pm, Sun, 9 February 25