ಧಾರವಾಡ: ಪೊಲೀಸರು ಸೃಷ್ಟಿಸಿದ್ದ ಜಡ್ಜ್​ ಪಾತ್ರದಿಂದ ಬಲೆಗೆ ಬಿದ್ದ ಪೋಕ್ಸೋ ಆರೋಪಿ

ಧಾರವಾಡದಲ್ಲಿ ಪೋಕ್ಸೋ ಪ್ರಕರಣದ ಆರೋಪಿಯನ್ನು ಬಂಧಿಸುವ ಸಂದರ್ಭದಲ್ಲಿ ಪೊಲೀಸರು ಅಸಾಧಾರಣ ಚಾಕಚಕ್ಯತೆಯನ್ನು ತೋರಿದ್ದಾರೆ. ಪೊಲೀಸರು ಸೃಷ್ಟಿಸಿದ ಜಡ್ಜ್​​ ಪಾತ್ರ ಆರೋಪಿಯನ್ನು ಸರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಘಟನೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರ ಈ ಚಾತುರ್ಯಕ್ಕೆ ಸಾಕ್ಷಿಯಾಗಿದೆ ಈ ಪ್ರಕರಣ. ಅಷ್ಟಕ್ಕೂ ಧಾರವಾಡದಲ್ಲಿ ನಡೆದಿದ್ದೇನು? ಇಲ್ಲಿದೆ ಓದಿ.

ಧಾರವಾಡ, ಫೆಬ್ರವರಿ 09: ಪೊಲೀಸರು (Police) ಕೂಡ ಕೆಲಸವೊಂದು ಸಾರಿ ಚಲನಚಿತ್ರ ನಿರ್ದೇಶಕ ಆಗುತ್ತಾರೆ ಎಂಬುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಪೊಕ್ಸೋ (POCSO) ಪ್ರಕರಣದ ಆರೋಪಿಯನ್ನು ಸೆರೆಹಿಡಿಯಲು ಪೊಲೀಸರು ನ್ಯಾಯಾಧೀಶರ ಪಾತ್ರ ಸೃಷ್ಟಿಸಿ, ಯಶಸ್ವಿಯಾಗಿದ್ದಾರೆ. ಸಿನಿಮೀಯ ರೀತಿಯಲ್ಲಿ ಧಾರವಾಡ ಪೊಲೀಸರು (Dharwad Police) ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಧಾರವಾಡ ಪೊಲೀಸರ ಈ ಚಾಕಚಕ್ಯತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟಕ್ಕೂ ಧಾರವಾಡದಲ್ಲಿ ನಡೆದಿದ್ದೇನು? ಇಲ್ಲಿದೆ ಓದಿ.

ಅಣ್ಣಿಗೇರಿ ನಿವಾಸಿಯಾಗಿರುವ ವಿಜಯ ಉಣಕಲ್ ವಿರುದ್ಧ 2021ರಲ್ಲಿ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ವಿಜಯ ಉಣಕಲ್ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್​ನಿಂದ ಬಂಧನ ವಾರಂಟ್ ಜಾರಿಯಾಗಿತ್ತು. ರವಿವಾರ (ಫೆ.09) ಪೊಲೀಸರು ವಿಜಯ ಉಣಕಲ್​ನನ್ನು ಬಂಧಿಸಿ ಜಡ್ಜ್ ಮುಂದೆ ಹಾಜರುಪಡಿಸಿದ್ದರು. ಆರೋಪಿ ವಿಜಯ್ ಉಣಕಲ್​ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿ ವಿಜಯ್ ಉಣಕಲ್​ನನ್ನು ಪೊಲೀಸರು ಜೈಲಿಗೆ ಕರೆದೊಯ್ಯೊತ್ತಿದ್ದರು. ಈ ವೇಳೆ ವಿಜಯ್ ಉಣಕಲ್ ಪೊಲೀಸರಿಂದ ತಪ್ಪಿಸಿಕೊಂಡು ಕಟ್ಟಡದ ಮೇಲೇರಿದ್ದನು. ಬಳಿಕ, ಸ್ಥಳಕ್ಕೆ ನ್ಯಾಯಾಧೀಶರು ಬರಬೇಕು, ಇಲ್ಲದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದನು. ವಿಚಾರ ತಿಳಿದು ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ದೌಡಾಯಿಸಿದರು.

ಪ್ಲ್ಯಾನ್ ​ಮಾಡಿ ಆರೋಪಿಯನ್ನು ಯಾಮಾರಿಸಿದ ಪೊಲೀಸರು

ಆರೋಪಿ ವಿಜಯ್ ಉಣಕಲ್​​ನ ಹೈಡ್ರಾಮಾ ನೋಡಲು ಸ್ಥಳಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಉನ್ಯಾಸಕ ಡಾ. ವಿಶ್ವನಾಥ್​ ಚಿಂತಾಮಣಿ ಆಗಮಿಸಿದ್ದರು. ಈ ವೇಳೆ ಪೊಲೀಸರು, ಪ್ಲ್ಯಾನ್​ಮಾಡಿ ಜಡ್ಜ್​ ಪಾತ್ರವನ್ನು ಸೃಷ್ಟಿಸಿದರು. ಉಪನ್ಯಾಸಕ ವಿಶ್ವನಾಥ್​ ಚಿಂತಾಮಣಿ ಅವರೇ ನ್ಯಾಯಾಧೀಶ ಎಂದು ಆರೋಪಿ ವಿಜಯ್​ ಉಣಕಲ್​ಗೆ ಪೊಲೀಸರು ಹೇಳಿದರು.

ಇದನ್ನೂ ಓದಿ: ನನ್ನ ಮಗಳ ಕೊಲೆ ಹಿಂದೆ ಶಾಸಕರ ಕೈವಾಡವಿದೆ, ನೇಹಾ ತಂದೆ ಆರೋಪ

ಪೊಲೀಸರ ಪ್ಲ್ಯಾನ್​​ನಂತೆ ಉಪನ್ಯಾಸಕ ವಿಶ್ವನಾಥ್​ ಚಿಂತಾಮಣಿ ಅವರು ಕೂಡ ನಟಿಸಿದರು. ಉಪನ್ಯಾಸಕ ವಿಶ್ವನಾಥ್​ ಚಿಂತಾಮಣಿ ಅವರ ನಟನೆಯನ್ನು ನಂಬಿ, ಆರೋಪಿ ವಿಜಯ್ ಉಣಕಲ್ ಅವರೊಂದಿಗೆ ಮಾತನಾಡಲು ಆರಂಭಿಸಿದನು. ಉಪನ್ಯಾಸಕ ವಿಶ್ವನಾಥ್​ ಚಿಂತಾಮಣಿ ನೈಸ್​ ಆಗಿ ಮಾತನಾಡಿ ಆರೋಪಿ ವಿಜಯ್ ಉಣಕಲ್​ನನ್ನು ಕಟ್ಟಡದಿಂದ ಕೆಳಗೆ ಇಳಿಸಿದರು. ಕೂಡಲೇ, ಹಿಂದಿನಿಂದ ಬಂದ ಪೊಲೀಸರು ಆರೋಪಿ ವಿಜಯ್ ಉಣಕಲ್​ನನ್ನು ಬಂಧಿಸಿ, ಕೇಂದ್ರ ಕಾರಾಗೃಹಕ್ಕೆ ಕರೆದುಕೊಂಡು ಹೋದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:12 pm, Sun, 9 February 25

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us